ಹಿಂಸಾಚಾರದಿಂದ ತತ್ತರಿಸಿದ ಮಣಿಪುರಕ್ಕೆ ಪ್ರಧಾನಿ ಮೋದಿ 3 ಗಂಟೆಗಳ ಕಾಟಾಚಾರದ ಭೇಟಿ ನೀಡಿದ್ದಾರೆ. ಭೇಟಿಯ ವೇಳೆ ಕನಿಷ್ಠ ಸಂತ್ರಸ್ತರಿಗೆ ಪರಿಹಾರ ಮೊತ್ತವನ್ನೂ ಘೋಷಿಸಲಿಲ್ಲ ಎಂದು ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಕಿಡಿ ಕಾರಿದ್ದಾರೆ.
2023ರ ನಂತರ ಇದೇ ಮೊದಲ ಬಾರಿಗೆ ಹಿಂಸಾಚಾರ ಪೀಡಿತ ಮಣಿಪುರಕ್ಕೆ ಶನಿವಾರ ಮೊದಲ ಬಾರಿ ಪ್ರಧಾನಿ ಮೋದಿ ಭೇಟಿ ನೀಡಿದ ಕುರಿತು ಎಕ್ಸ್ ನಲ್ಲಿ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಮಣಿಪುರದ ಇಂಫಾಲ ಮತ್ತು ಚೌರಾಚಂದಾಪುರದಲ್ಲಿ ಮೋದಿ ರೋಡ್ ಶೋ ಹಮ್ಮಿಕೊಂಡಿರುವುದು ಸಂತ್ರಸ್ತ ಜನರ ಸಮಸ್ಯೆ ಆಲಿಸದೇ ಹೇಡಿಯಂತೆ ಓಡಿ ಹೋಗುವ ಪ್ರಯತ್ನ ಎಂದು ಅವರು ಲೇವಡಿ ಮಾಡಿದ್ದಾರೆ.
ಮಣಿಪುರದಲ್ಲಿ ಎರಡು ಸಮುದಾಯಗಳ ನಡುವೆ ನಡೆದ ಹಿಂಸಾಚಾರ ನಡೆದ 2 ವರ್ಷ 864 ದಿನಗಳ ನಂತರ ಪ್ರಧಾನಿ ಮೋದಿ ಭೇಟಿ ನೀಡಿದ್ದಾರೆ. ಭೇಟಿ ನೀಡಿದ ವೇಳೆ ಸೌಜನ್ಯಕ್ಕಾಗಿಯೂ ಪರಿಹಾರ ಮೊತ್ತ ಘೋಷಿಸಲಿಲ್ಲ. ಬದಲಿಗೆ ರೋಡ್ ಶೋ ಮಾಡಿ ಪ್ರಚಾರ ಪಡೆಯುವ ಕೆಲಸ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.
ಮಣಿಪುರದಲ್ಲಿ ನಡೆದ ಹಿಂಸಾಚಾರ ನಡೆದ ಎರಡು ವರ್ಷಗಳಲ್ಲಿ 46 ವಿದೇಶೀ ಪ್ರವಾಸ ಮಾಡಿದ್ದಾರೆ. ಆದರೆ ತಮ್ಮದೇ ದೇಶದ ಜನರ ಸಮಸ್ಯೆ ಆಲಿಸಲು ಮಣಿಪುರಕ್ಕೆ ಒಮ್ಮೆಯೂ ಭೇಟಿ ನೀಡಿರಲಿಲ್ಲ. ಹಿಂಸಾಚಾರದಲ್ಲಿ 300ಕ್ಕೂ ಅಧಿಕ ಮಂದಿ ಮೃತಪಟ್ಟು, 1500 ಮಂದಿ ಗಾಯಗೊಂಡಿದ್ದರು. ಅಲ್ಲದೇ 67 ಸಾವಿರ ಮಂದಿ ನಿರ್ವಸತಿಗಾರರಾಗಿದ್ದಾರೆ. ಇವರಿಗೆ ಯಾವುದೇ ರೀತಿಯ ಪರಿಹಾರ ನೀಡದೇ ಕಡೆಗಣಿಸಲಾಗಿದೆ ಎಂದು ಮಲ್ಲಿಕಾರ್ಜುನ ಖರ್ಗೆ ವಿವರಿಸಿದ್ದಾರೆ.



