ಕಡಿದಾದ ಪರ್ವತಗಳ ನಡುವೆ ಸಾಗುತ್ತಿದ್ದ ಪಿಕಪ್ ವಾಹನ ಉರುಳಿ ಬಿದ್ದ ಪರೀಣಾಮ ದೇವಸ್ಥಾನಕ್ಕೆ ತೆರಳುತ್ತಿದ್ದ 8 ಮಂದಿ ಮಹಿಳೆಯರು ಮೃತಪಟ್ಟ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ಸೋಮವಾರ ಸಂಭವಿಸಿದೆ.
ಮಹಿಳೆಯರು ಹಾಗೂ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದ 40 ಪ್ರಯಾಣಿಕರನ್ನು ಹೊತ್ತ ಪಿಕಪ್ ವಾಹನ ಸೋಮವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಚಾಲಕನ ನಿಯಂತ್ರಣ ಕಳೆದುಕೊಂಡು 25ರಿಂದ 30 ಅಡಿ ಆಳಕ್ಕೆ ಬಿದ್ದಿದೆ. ದುರ್ಘಟನೆಯಲ್ಲಿ 29 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಪಾಪಲವಾಡಿ ಗ್ರಾಮದ ನಿವಾಸಿಗಳು ಶ್ರಾವಣ ಸೋಮವಾರದ ಅಂಗವಾಗಿ ಖೇದ್ ಟೆಹ್ಸಿಲ್ ನಲ್ಲಿರುವ ಶ್ರೀ ಕ್ಷೇತ್ರ ಮಹದೇವ್ ಕುಂದೇಶ್ವರ್ ದೇವಸ್ಥಾನದ ದರ್ಶನಕ್ಕೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ದುರ್ಘಟನೆಯಲ್ಲಿ 29ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಅಪಘಾತದ ಮಾಹಿತಿ ಲಭಿಸುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಸ್ಥಳೀಯರು ನೆರವು ನೀಡಿದರು.
ದುರ್ಘಟನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಶೋಕ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಹಾಗೂ ಗಾಯಗೊಂಡವರಿಗೆ ತಲಾ 50 ಸಾವಿರ ರೂ. ಪರಿಹಾರ ಮೊತ್ತ ಘೋಷಿಸಿದ್ದಾರೆ.



