ಬೆಂಗಳೂರು:ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವ ಡಿಕೆ ಶಿವಕುಮಾರ್ ಅವರನ್ನು 8 ವರ್ಷ ಯಾರಿಂದಲೂ ಅಲ್ಲಾಡಿಸಲು ಸಾಧ್ಯವಿಲ್ಲ ಎಂದು ಅವರ ಆಪ್ತ ಗುರುಗಳಾದ ದ್ವಾರಕನಾಥ್ ಗುರೂಜಿ ಭವಿಷ್ಯ ನುಡಿದಿದ್ದಾರೆ.
ಶೃಂಗೇರಿಯಲ್ಲಿ ಪ್ರಾರ್ಥನೆ ಸಲ್ಲಿಸುವಾಗಲೇ ಶಿವಕುಮಾರನಿಂದ ಗುರೂಜಿ ಕೆಲಸವಾಗಿದೆ ಎಂಬ ಕರೆ ಬಂತು. ಇನ್ನೂ ಅವರ ಜಾತಕ ಪ್ರಕಾರ 8 ವರ್ಷ ಯಾರಿಂದಲೂ ಅಲ್ಲಾಡಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಡಿಕೆ ಶಿವಕುಮಾರ್ ಅವರೊಂದಿಗಿನ ತಮ್ಮ 35 ವರ್ಷಗಳ ಸುದೀರ್ಘ ಒಡನಾಟವನ್ನು ನೆನಪಿಸಿಕೊಂಡ ದ್ವಾರಕನಾಥ್ ಗುರೂಜಿ, ಸಿಎಂ ಸ್ಥಾನ ವಿಳಂಬವಾಗುತ್ತಿದ್ದ ಕಾರಣ, ಅವರ ಪರವಾಗಿ ವಿಶೇಷ ಪೂಜೆ ಸಲ್ಲಿಸಲು ನಾನು ಶೃಂಗೇರಿ ಶಾರದಾಂಬೆಯ ಸನ್ನಿಧಿಗೆ ತೆರಳಿದ್ದೆನು. ಆಶ್ಚರ್ಯವೆಂದರೆ, ನಾನು ದೇವಿಯ ಮುಂದೆ ಪ್ರಾರ್ಥನೆ ಮಾಡುತ್ತಿದ್ದಾಗಲೇ ಖುದ್ದು ಡಿಕೆ ಶಿವಕುಮಾರ್ ಅವರಿಂದ ನನಗೆ ಫೋನ್ ಕರೆ ಬಂತು.
‘ಗುರೂಜಿ, ಕೆಲಸವಾಗಿದೆ’ ಎಂದು ಅವರು ಸಿಹಿಸುದ್ದಿ ನೀಡಿದರು. ಸೋಮವಾರದ ಒಳಗೆ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ” ಎಂದು ದ್ವಾರಕನಾಥ್ ಗುರೂಜಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಡಿಕೆ ಶಿವಕುಮಾರ ನನಗೆ ಮೂರೂವರೆ ದಶಕಗಳಿಂದಲೂ ಪರಿಚಿತರು. ಅವರು ನಮ್ಮ ಮನೆಯ ಮಗನಿದ್ದಂತೆ ಮತ್ತು ಸದಾ ನನ್ನ ಸಂಪರ್ಕದಲ್ಲಿರುತ್ತಾರೆ. ದಶಕಗಳ ಹಿಂದೆ ಎಸ್ ಬಂಗಾರಪ್ಪನವರ ಸಂಪುಟದಲ್ಲಿ ಅವರು ಅತಿ ಸಣ್ಣ ವಯಸ್ಸಿಗೆ ಜೈಲು ಸಚಿವರಾಗಿದ್ದಾಗಲೇ, ‘ನೀನು ಮುಂದೊಂದು ದಿನ ಈ ರಾಜ್ಯದ ಮುಖ್ಯಮಂತ್ರಿಯಾಗುತ್ತೀಯಾ’ ಎಂದು ನಾನು ಭವಿಷ್ಯ ನುಡಿದಿದ್ದೆ” ಎಂದು ಗುರೂಜಿ ಸ್ಮರಿಸಿದ್ದಾರೆ.
ಡಿಕೆಶಿಗೆ ಸುವರ್ಣಕಾಲ:
ಹಾಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರ ಜಾತಕವನ್ನು ವಿಶ್ಲೇಷಿಸಿದ ಗುರೂಜಿ, “ವೃಶ್ಚಿಕ ರಾಶಿಯವರಾದ ಸಿದ್ದರಾಮಯ್ಯನವರಿಗೆ ಈಗ ರಾಜಯೋಗ ಮುಗಿದಿದೆ. ಪ್ರಸ್ತುತ ಅವರ ಜಾತಕದಲ್ಲಿ ಗುರು ಬಲ ಹಾಗೂ ಶನಿ ಬಲವಿಲ್ಲ. ಆದರೆ, ಅವರ ಮಾರ್ಗದರ್ಶನ ರಾಜ್ಯಕ್ಕೆ ಇನ್ನೂ ಬೇಕಿದೆ. ಮತ್ತೊಂದೆಡೆ, ಡಿ.ಕೆ. ಶಿವಕುಮಾರ್ ಅವರಿಗೆ ಈಗ ಸುವರ್ಣಕಾಲ ಶುರುವಾಗಿದೆ. ಮಿಥುನ ರಾಶಿಯಲ್ಲಿರುವ ಗುರುವು ಅವರಿಗೆ ಪ್ರಬಲವಾದ ರಾಜಯೋಗವನ್ನು ತಂದುಕೊಟ್ಟಿದ್ದಾನೆ” ಎಂದು ವಿವರಿಸಿದ್ದಾರೆ.
ಡಿಕೆ ಶಿವಕುಮಾರ್ ಬ್ರಾಂಡ್
ಡಿಕೆಶಿಯವರ ಗುಣಗಾನ ಮಾಡಿದ ಗುರೂಜಿ, ಶಿವಕುಮಾರ್ ಕೇವಲ ಒಬ್ಬ ನಾಯಕ ಅಥವಾ ಸಿಎಂ ಅಷ್ಟೇ ಅಲ್ಲ, ಅವರೇ ಒಂದು ದೊಡ್ಡ ಬ್ರಾಂಡ್. ಅವರು ಅತ್ಯಂತ ಬುದ್ಧಿವಂತ, ಜಾಣ ಹಾಗೂ ಅಪಾರ ತಾಳ್ಮೆ ಹೊಂದಿರುವ ವ್ಯಕ್ತಿ. ವಾಸ್ತವವಾಗಿ, ಹೊಸ ವರ್ಷದ ಒಳಗೇ ಅವರಿಗೆ ಸಿಎಂ ಸ್ಥಾನ ಒಲಿಯಬೇಕಿತ್ತು, ಆದರೆ ಕಾರಣಾಂತರಗಳಿಂದ ವಿಳಂಬವಾಗುತ್ತಿತ್ತು ಎಂದಿದ್ದಾರೆ.



