ಪುಷ್ಪ ಸಿನಿಮಾ ಮಾದರಿಯಲ್ಲಿ ಸ್ಮಗ್ಲಿಂಗ್ ಮಾಡುತ್ತಿದ್ದ 9 ಮಂದಿಯ ಗ್ಯಾಂಗ್ ಅನ್ನು ತಿರುಪತಿಯಲ್ಲಿ ಬಂಧಿಸಿರುವ ಪೊಲೀಸರು 20 ರಕ್ತಚಂದನ ತುಂಡುಗಳನ್ನು ವಶಕ್ಕೆ ಪಡೆದಿದ್ದಾರೆ.
ರಕ್ತಚಂದನ ಕಳ್ಳಸಾಗಾಣೆ ಕಾರ್ಯಪಡೆ ಪೊಲೀಸರು ಬುಧವಾರ ಮುಂಜಾನೆ ಆಂಧ್ರಪ್ರದೇಶದ ತಿರುಪತಿಯ ಶ್ರೀಕಾಳಹಸ್ತಿ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಕಡಿದು ಸಾಗಿಸಲು ಯತ್ನಿಸುತ್ತಿದ್ದ ಕೆಂಪು ಶ್ರೀಗಂಧ ಮರಗಳ ದಿಮ್ಮಿಗಳನ್ನು ವಶಕ್ಕೆ ಪಡೆದಿದ್ದಾರೆ.
ಶೇಷಾಚಲಂ ಅರಣ್ಯ ಪ್ರದೇಶದಲ್ಲಿ ವ್ಯಾಪಕವಾಗಿ ಕಂಡು ಬರುವ ವಿಶಿಷ್ಟ ರಕ್ತಚಂದನ ಮರಗಳನ್ನು ಕಡಿದು ಅಕ್ರಮವಾಗಿ ಮಾರಾಟ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಏಕಾಏಕಿ ದಾಳಿ ನಡೆಸಿ 9 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ಕಾರ್ಯಪಡೆ ಮುಖ್ಯಸ್ಥ ಎಲ್ ಸುಬ್ಬರಾಯುಡು ನಿರ್ದೇಶನದ ಮೇರೆಗೆ ದಾಳಿ ನಡೆಸಲಾಯಿತು. ಆರ್ಐ ಸಾಯಿ ಗಿರಿಧರ್ ಮಾರ್ಗದರ್ಶನದಲ್ಲಿ ಮತ್ತು ಎಆರ್ಎಸ್ಐ ಎನ್ ಈಶ್ವರ ರೆಡ್ಡಿ ನೇತೃತ್ವದ ಕಾರ್ಯಾಚರಣಾ ತಂಡವು ಶ್ರೀಕಾಳಹಸ್ತಿ ದಟ್ಟ ಅರಣ್ಯ ಪ್ರದೇಶದಲ್ಲಿ ಮಧ್ಯದಲ್ಲಿ ಹಾಗೂ ಅತ್ಯಂತ ಸೂಕ್ಷ್ಮವಾಗಿ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಲಾಯಿತು.
ರಾಗಿಗುಂಟ ವಿಭಾಗದ ಬಳಿ, ವಿಶೇಷವಾಗಿ ತೀರ್ಥಲಪಾಲಂ ಕೋನಾದಲ್ಲಿ ಮರಗಳನ್ನು ಕಡಿಯುತ್ತಿರುವುದು ಕಂಡು ಬಂದಿದ್ದು, ಬುಧವಾರ ಮುಂಜಾನೆ, ಪೊಲೀಸ್ ತಂಡವು ಸೂಕ್ತ ಕಾರ್ಯಾಚರಣೆ ನಡೆಸಿತು.



