ಬೆಂಗಳೂರು: ಸಂಚಾರಿ ನಿಯಮ ಉಲ್ಲಂಘಿಸಿದವರಿಗೆ ದಂಡ ಪಾವತಿಗೆ ಶೇ.50ರಷ್ಟು ರಿಯಾಯಿತಿಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಎರಡು ವಾರದಲ್ಲಿ 35.72 ಕೋಟಿ ರೂ. ದಂಡ ವಸೂಲಾಗಿದೆ.
ಬೆಂಗಳೂರು ಸಂಚಾರಿ ಪೊಲೀಸರು ವಾಹನ ಸವಾರರಿಗೆ ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕಾಗಿ ದಂಡ ಶೇ.50 ರಿಯಾಯಿತಿಯಲ್ಲಿ ದಂಡ ಪಾವತಿಸಲು ಆಗಸ್ಟ್ 23ರಿಂದ ಸೆ.12ರವರೆಗೆ ಅವಕಾಶ ನೀಡಿದೆ.
ಸಂಚಾರಿ ಪೊಲೀಸರ ರಿಯಾಯಿತಿ ಯೋಜನೆಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, 12,70,950 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. ಇದರಿಂದ 35.72 ಕೋಟಿ ರೂ. ಸಂಗ್ರಹ ಮಾಡಲಾಗಿದೆ.
ಸೆ..12ರವರೆಗೆ ದಂಡ ಪಾವತಿ ಮಾಡಲು ಕಾಲಾವಕಾಶವಿದ್ದು, ಕೇವಲ ಬೆಂಗಳೂರು ವ್ಯಾಪ್ತಿಯಲ್ಲಿ ನಿಯಮ ಉಲ್ಲಂಘಿಸಿದವರಿಗೆ ಮಾತ್ರ ದಂಡ ಪಾವತಿಸಲು ಅವಕಾಶವಿರುತ್ತದೆ. ರಿಯಾಯಿತಿ ಘೋಷಣೆ ಆದ ಒಂದೇ ವಾರದಲ್ಲಿ 12 ಕೋಟಿಗೂ ಅಧಿಕ ದಂಡ ವಸೂಲಾಗಿದ್ದು, ಎರಡನೇ ವಾರದಲ್ಲಿ ಈ ಪ್ರಮಾಣ ಮತ್ತಷ್ಟು ಹೆಚ್ಚಾಗಿದೆ.
ಈ ಕುರಿತು ರಾಜ್ಯ ಸಾರಿಗೆ ಇಲಾಖೆ ಅಧೀನ ಕಾರ್ಯದರ್ಶಿ ಪುಷ್ಪ ವಿ.ಎಸ್ ಅವರು ಆದೇಶ ಹೊರಡಿಸಿ, ದಂಡ ಬಾಕಿ ಉಳಿಸಿಕೊಂಡಿರುವ ವಾಹನ ಮಾಲೀಕರು ಆ.23ರಿಂದ ಸೆ.12ರವರೆಗೂ ದಂಡದ ಕೇವಲ ಶೇ.50ರಷ್ಟನ್ನು ಪಾವತಿಸುವಂತೆ ರಿಯಾಯಿತಿ ಘೋಷಿಸಿದ್ದರು. ಇದಕ್ಕೂ ಮುನ್ನ ರಾಜ್ಯ ಸರ್ಕಾರ ಇದೇ ರೀತಿ ರಿಯಾಯಿತಿ ಘೋಷಿಸಿ ಭಾರೀ ಮೊತ್ತದ ದಂಡ ಸಂಗ್ರಹಿಸಿತ್ತು.



