ಹೆತ್ತ ಮಗಳು ಹಾಗೂ ಸಂಬಂಧಿಯ ಮಗಳ ಮೇಲೆ ಪಾಪಿ ತಂದೆ ಆಸಿಡ್ ಎರಚಿ ಪರಾರಿಯಾದ ಆಘಾತಕಾರಿ ಘಟನೆ ಮಂಗಳೂರು ಸಮೀಪದ ಕಾಸರಗೋಡಿನಲ್ಲಿ ನಡೆದಿದೆ.
ಕಾಸರಗೋಡಿನ ಪಣತ್ತಡಿ ಗ್ರಾಮದಲ್ಲಿ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕರಿಕೆ ಗ್ರಾಮದ ನಿವಾಸಿ ಆಗಿರುವ ಆರೋಪಿ ಮನೋಜ್ ಕೆ.ಸಿ. (48) ಈ ಕೃತ್ಯ ಎಸಗಿದ್ದಾನೆ.
ಆರೋಪಿಯು ಶುಕ್ರವಾರ ಬೆಳಗ್ಗೆ ಪಣತ್ತಡಿ ಗ್ರಾಮದಲ್ಲಿರುವ ತನ್ನ ಹೆಂಡತಿಯ ಸಹೋದರನ ಮನೆಗೆ ಆಗಮಿಸಿದ ಮನೋಜ್ ಮನೆಯ ಮುಂದೆ ಆಟವಾಡುತ್ತಿದ್ದ 17 ವರ್ಷದ ಮಗಳು ಹಾಗೂ ಪತ್ನಿಯ ಸಹೋದರನ 10 ವರ್ಷದ ಮಗುವಿನ ಮೇಲೆ ಆ್ಯಸಿಡ್ ಹಾಕಿದ್ದಾನೆ.
ಘಟನೆಯಲ್ಲಿ, ಮನೋಜ್ ಮಗಳ ಕೈ ಮತ್ತು ತೊಡೆಯ ಭಾಗಕ್ಕೆ ಸುಟ್ಟ ಗಾಯಗಳಾಗಿದೆ. ಅಲ್ಲದೆ, ಪತ್ನಿ ಸೋದರನ ಮಗುವಿನ ಮುಖ ಹಾಗೂ ಕೈಗಳಲ್ಲಿ ಸಣ್ಣಪುಟ್ಟ ಗಾಯಗಳಾಗಿವೆ. ತಕ್ಷಣ ಮಕ್ಕಳನ್ನು ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.
ಮನೋಜ್ ಮತ್ತು ಆತನ ಪತ್ನಿಯ ನಡುವೆ ವೈವಾಹಿಕ ಜೀವನ ಉತ್ತಮವಾಗಿರಲಿಲ್ಲ. ಪದೇಪದೆ ಜಗಳದಿಂದ ಬೇಸತ್ತ ಪತ್ನಿ ಗಂಡನನ್ನು ತೊರೆದು, ಸಹೋದರನ ಮನೆಯಲ್ಲಿ ವಾಸವಾಗಿದ್ದಳು.
ರಬ್ಬರ್ ಹಾಳೆಗಳನ್ನು ಸಂಸ್ಕರಿಸಲು ಬಳಸುವ ಆಸಿಡ್ ಅನ್ನು ಇಬ್ಬರು ಮಕ್ಕಳ ಮೇಲೆ ಸುರಿದ ಆರೋಪಿ ತಕ್ಷಣ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯ ವಿರುದ್ಧ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಸೆಕ್ಷನಬ್ 329 (3) (ಕ್ರಿಮಿನಲ್ ಅತಿಕ್ರಮಣ), 124(1) (ಆಮ್ಲ ಬಳಸಿ ಸ್ವಯಂಪ್ರೇರಣೆಯಿಂದ ಗಂಭೀರ ಗಾಯ ಉಂಟುಮಾಡುವುದು), 109(1) (ಕೊಲೆ ಯತ್ನ), ಮತ್ತು 351(2) (ಕ್ರಿಮಿನಲ್ ಬೆದರಿಕೆ) ಅಡಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿಯ ಬಂಧನಕ್ಕೆ ಬಲೆ ಬೀಸಲಾಗಿದೆ.
ಆರೋಪಿ ಮನೋಜ್ ಪತ್ತೆಗೆ ಕೇರಳ ಮತ್ತ ಕರ್ನಾಟಕದಲ್ಲಿ ಶೋಧ ನಡೆದಿದೆ. ಅಗತ್ಯವಿದ್ದಲ್ಲಿ ಕರ್ನಾಟಕ ಪೊಲೀಸರ ಸಹಾಯ ಕೋರಲಾಗುವುದು ಎಂದು ಕೇರಳ ಪೊಲೀಸರು ಮಾಹಿತಿ ನೀಡಿದ್ದಾರೆ.



