ಬಿಜೆಪಿಗೆ ಸೇರಲು ದೆಹಲಿಯಿಂದ ಆಫರ್ ಬಂದಿತ್ತು. ಆದರೆ ಅದನ್ನು ತಿರಸ್ಕರಿಸಿ ಜೈಲುವಾಸ ಅನುಭವಿಸಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೊಸ ಬಾಂಬ್ ಸಿಡಿಸಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ನಡೆದ ಡಿಕೆ ಶಿವಕುಮಾರ್ ಅವರ ಜೀವನ ಪಯಣದ ಕುರಿತ ಪುಸ್ತಕ ‘ಎ ಸಿಂಬಲ್ ಆಫ್ ಲಾಯಲ್ಟಿ ಡಿ ಕೆ ಶಿವಕುಮಾರ್’ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಈ ವಿಷಯ ತಿಳಿಸಿದರು.
ಕೇಸರಿ ಪಕ್ಷದಿಂದ ನನಗೆ ಆಫರ್ ಬಂದಿದ್ದು ನಿಜ. 2019ರಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿಯೇ ನನ್ನನ್ನು ಬಿಜೆಪಿಗೆ ಸೆಳೆಯುವ ಪ್ರಯತ್ನಗಳಾಗಿತ್ತು ಎಂದಿದ್ದಾರೆ.
ಬೆಂಗಳೂರಿನ ಮೂವರು ಕಾಂಗ್ರೆಸ್ ಶಾಸಕರು ಸೇರಿ ಹಲವು ಮಂದಿ ಕಾಂಗ್ರೆಸ್ಗೆ ರಾಜೀನಾಮೆ ಕೊಟ್ಟು ಬಿಜೆಪಿ ಕಡೆ ಮುಖ ಮಾಡಿದ್ದರು. ಅವತ್ತು ಕನಕಪುರದಲ್ಲಿದ್ದ ನಾನು ಓಡೋಡಿ ಬಂದು ನಮ್ಮ 5-6 ಶಾಸಕರನ್ನು ಕ್ವಾರ್ಟರ್ಸ್ಗೆ ಕರೆದುಕೊಂಡು ಬಂದಿದ್ದೆ. ಆಗ ದೆಹಲಿಯಿಂದ ನನಗೆ ಫೋನ್ ಬಂದಿತ್ತು ಎಂದರು.
ಆದಾಯ ತೆರಿಗೆ ಆಡಿಟರ್ರಿಂದ ಫೋನ್ ಮಾಡಿ ಮಾತನಾಡಿಸಿದ್ದರು. ಅಲ್ಲಿ ಒಬ್ಬ ಡಿಜಿ ಸಹ ಇದ್ದ. ಅವನು ಮಾತನಾಡಿದ. ಡಿಸಿಎಂ ಆಗುತ್ತೀರಾ ಅಥವಾ ಜೈಲಿಗೆ ಹೋಗುತ್ತೀರಾ ಎರಡರಲ್ಲಿ ಒಂದು ಆಯ್ಕೆ ಮಾಡಬೇಕು ಎಂದು ಕೇಳಿದ ಎಂದು ಅವರು ಘಟನೆಯನ್ನು ವಿವರಿಸಿದರು.
ದೆಹಲಿಯಿಂದ ಕರೆ ಬಂದಾಗ ಬಿಜೆಪಿ ಹಿರಿಯರೊಬ್ಬರು ಮಾತನಾಡಿದರು. ಅವರ ಹೆಸರನ್ನು ಮತ್ತೊಮ್ಮೆ ಬಹಿರಂಗಪಡಿಸುತ್ತೇನೆ. ಅವರು ನೇರವಾಗಿ ಬಿಜೆಪಿಗೆ ಆಹ್ವಾನ ನೀಡಿದರು. ಆದರೆ ನಾನು ಅದನ್ನು ತಿರಸ್ಕರಿಸಿದೆ ಎಂದು ಅವರು ಹೇಳಿದರು.
ನಾನು ಪಕ್ಷನಿಷ್ಠೆಗಾಗಿ ಡಿಸಿಎಂ ಬೇಡ ಎಂದು ಜೈಲುವಾಸವನ್ನೇ ಆಯ್ಕೆ ಮಾಡ್ಕೊಂಡೆ. ಬಹಳ ಚಿಕ್ಕ ವಯಸ್ಸಿನಲ್ಲಿಯೇ ರಾಜೀವ್ ಗಾಂಧಿಯವರು ಟಿಕೆಟ್ ಕೊಡಿಸಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಶಾಸಕನಾದೆ. ಬಂಗಾರಪ್ಪನವರ ಕಾಲದಲ್ಲಿ ಮಂತ್ರಿಯಾದೆ, ಪಕ್ಷ ನನ್ನನ್ನು ಬೆಳೆಸಿರುವಾಗ ಆ ಪಕ್ಷಕ್ಕೆ ಬದ್ಧನಾಗಿರುವುದು ನನ್ನ ಕರ್ತವ್ಯನಿಷ್ಠೆಯಾಗಿತ್ತು. ಪಕ್ಷಾಂತರ ಮಾಡುತ್ತಿದ್ದರೆ ಅಂದೇ ಡಿಸಿಎಂ ಆಗುತ್ತಿದ್ದೆ ಎಂದು ಡಿಸಿಎಂ ಹೇಳಿದರು.
ರಾಜಕೀಯ ವಿರೋಧಿಗಳಾದ ಹೆಚ್ ಡಿ ದೇವೇಗೌಡ ಮತ್ತು ಹೆಚ್ ಡಿ ಕುಮಾರಸ್ವಾಮಿ ಅವರೊಂದಿಗೆ ಜಾತ್ಯತೀತತೆ ಮತ್ತು ಪ್ರಜಾಪ್ರಭುತ್ವವನ್ನು ಕಾಪಾಡಲು 2018 ರಲ್ಲಿ ಅವರ ಜೊತೆಗೂ ಕೈಜೋಡಿಸಿದ್ದೇನೆ ಎಂದು ಅವರು ಹೇಳಿದರು.
8-10 ವರ್ಷ ಮಾತ್ರ ರಾಜಕಾರಣದಲ್ಲಿ ಇರುತ್ತೇನೆ
ರಾಜಕೀಯದಲ್ಲಿ ಯಾವುದೂ ನಿಂತ ನೀರಲ್ಲ. A Symbol Of Loyalty ಪುಸ್ತಕದಲ್ಲಿ ನನ್ನ ಬದುಕಿನ ಶೇ 99 ರಷ್ಟು ಅಂಶಗಳು ಸತ್ಯ ಇವೆ. ನಾನು ಮುಂದಿನ 8-10 ವರ್ಷ ಮಾತ್ರ ಸಕ್ರಿಯ ರಾಜಕಾರಣದಲ್ಲಿ ಇರಬಲ್ಲೆ, ನಾವು ಹೊಸಬರಿಗೆ ಅವಕಾಶ ಮಾಡಿಕೊಡಬೇಕು ಎಂದು ಅವರು ಹೇಳಿದರು.
ನಾನು ಹೆಚ್ಡಿ ದೇವೇಗೌಡರ ಕುಟುಂಬದ ವಿರುದ್ಧವಾಗಿ ರಾಜಕಾರಣ ಮಾಡಿದ್ದೇನೆ. ಆದರೆ ಪಕ್ಷದ ನಿಷ್ಠೆಗಾಗಿ ನಾನು ಹೆಚ್ಡಿ ಕುಮಾರಸ್ವಾಮಿ ಜೊತೆಗೆ ಕೈಜೋಡಿಸಿದ್ದೇನೆ. ನನ್ನ ವಿರೋಧಿಗಳು ಕಥೆ ಕಟ್ಟಿ ಆರೋಪ ಮಾಡುತ್ತಾರೆ. ಆದರೆ ನಾನು ಅದನ್ನೂ ಸ್ವಾಗತಿಸುತ್ತೇನೆ ಎಂದರು.



