ಭಾನುವಾರ (ಅ.19) ಸುಮಾರು 26.11 ಲಕ್ಷ ಮಣ್ಣಿನ ಹಣತೆಗಳಿಂದ ದೀಪ ಬೆಳಗಿಸಿ ಮತ್ತೊಂದು ವಿಶ್ವ ದಾಖಲೆ ಬರೆಯಲು ರಾಮ ಜನ್ಮಭೂಮಿ ಅಯೋಧ್ಯೆ ಸಜ್ಜಾಗಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ ಅಕ್ಟೋಬರ್ 19 ರಂದು 2,100 ಜನರಿಂದ ಭವ್ಯ ಮಹಾ ಆರತಿಯು ನಡೆಯಲಿದ್ದು, ಈ ಬಾರಿಯ ದೀಪಾವಳಿ ಹಬ್ಬಕ್ಕೆ ಅಯೋಧ್ಯೆಯಲ್ಲಿ ಹೆಚ್ಚಿನ ಜನರು ಸೇರುವ ಸಾಧ್ಯತೆ ಇದೆ ಹೇಳಲಾಗುತ್ತಿದೆ.
ಡಾ. ರಾಮ್ ಮನೋಹರ್ ಲೋಹಿಯಾ ಅವನ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸ್ಥಳೀಯ ಸಂಸ್ಥೆಗಳ ಸೇರಿದಂತೆ ಸುಮಾರು 33 ಸಾವಿರ ಸ್ವಯಂಸೇವಕರು ಬೆಳಕಿನ ಹಬ್ಬವನ್ನು ಚಂದಗಾಣಿಸಲು ಕೈ ಜೋಡಿಸಿದ್ದು, ರಾಮ್ ಕಿ ಪೈಡಿ ಘಾಟ್ ಸೇರಿದಂತೆ ಒಟ್ಟು ಇಲ್ಲಿನ 56 ಘಾಟ್ಗಳಲ್ಲಿ ದೀಪಗಳನ್ನು ಜೋಡಿಸುವ ಕಾರ್ಯ ನಡೆಯುತ್ತಿದೆ. ಈಗಾಗಲೇ ಪ್ರಮುಖ ಘಾಟ್ ಗಳಾದ 8, 9, 10 ಮತ್ತು 11 ಪ್ರದೇಶಗಳಲ್ಲಿ ಸುಮಾರು 7 ರಿಂದ 8 ಲಕ್ಷ ದೀಪಗಳನ್ನು ಇಟ್ಟಾಗಿದ್ದು, ಈ ಮೂಲಕ ಅಯೋಧ್ಯೆಯಲ್ಲಿ ನಡೆದ ಮೊದಲ ದೀಪಾವಳಿ ದೀಪೋತ್ಸವ ಗಿನ್ನೆಸ್ ದಾಖಲೆಯನ್ನು ಮೀರಿ, ಹೊಸ ಗಿನ್ನೆಸ್ ವಿಶ್ವ ದಾಖಲೆ ಬರೆಯಲು ಸಿದ್ದವಾಗಿದೆ.
ಆಧುನಿಕತೆ ಭರಾಟೆ ಹಾಗೂ ಪ್ಲಾಸ್ಟಿಕ್ ಹಾವಳಿಯಿಂದ ಹಿಂದೆ ಸರಿದಿದ್ದ ಮಣ್ಣಿನ ದೀಪಗಳಿಗೆ ಇಲ್ಲಿ ಪ್ರಾಮುಖ್ಯತೆ ನೀಡಲಾಗಿದ್ದು, ಮಣ್ಣಿನ ದೀಪ ತಯಾರಿಸುವವರಿಗೆ ನೆರವಾಗುವ ದೃಷ್ಟಿಯಿಂದ ಸ್ಥಳೀಯ ಕುಶಲಕರ್ಮಿಗಳಿಂದ ದೀಪಗಳನ್ನು ಖರೀದಿಸುವ ಮೂಲಕ ಅವರಿಗೆ ಅವಕಾಶ ನೀಡಲಾಗಿದೆ. ಇದರಿಂದ ಮಣ್ಣಿನ ದೀಪ ತಯಾರಿಸಿ ಮಾರಾಟ ಮಾಡಿ ಜೀವನ ನಡೆಸುತ್ತಿರುವ ಕುಂಬಾರರು, ಕುಶಲಕರ್ಮಿಗಳಿಗೆ ಬೆಂಬಲ ಸಿಕ್ಕಿದಂತಾಗಿದೆ.
ಜೈಸಿಂಗ್ಪುರ, ಪುರಾ ಬಜಾರ್ ಮತ್ತು ಗೋಸೈಗಂಜ್ ಸೇರಿದಂತೆ ಅಯೋಧ್ಯೆ ಮತ್ತು ಸುತ್ತಮುತ್ತಲಿನ ಹಳ್ಳಿಗಳ ಸುಮಾರು 40 ಕುಂಬಾರ ಕುಟುಂಬಗಳು ಸುಮಾರು 16 ಲಕ್ಷ ದೀಪಗಳನ್ನು ತಯಾರಿಸಿ ಕೊಟ್ಟಿವೆ. ಇದರೊಂದಿಗೆ 10 ಲಕ್ಷ ದೀಪಗಳನ್ನು ಉತ್ತರ ಪ್ರದೇಶದ ವಿವಿಧ ಕೈಗಾರಿಕಾ ಘಟಕಗಳು, ಸಾಮಾಜಿಕ ಸಂಸ್ಥೆಗಳು ಮತ್ತು ಗ್ರಾಮೀಣ ಮಹಿಳೆಯರು ಸಿದ್ದಗೊಳಿಸಲಿದ್ದಾರೆ.


