ಆನೇಕಲ್: ಕೊಟ್ಟ ಸಾಲ ವಾಪಸ್ ಕೇಳಿದ್ದಕ್ಕೆ ಸಹೋದರ ಸಂಬಂಧಿಯನ್ನು ಕೊಂದು ಶವವನ್ನು ಆಂಧ್ರಪ್ರದೇಶದ ಕುಪ್ಪಮ್ ನ ಮನೆಯಲ್ಲೇ ಹೂತಿಟ್ಟ ಆರೋಪಿಯನ್ನು ಬೆಂಗಳೂರಿನ ಪೊಲೀಸರು ಸಿನಿಮಯ ರೀತಿಯಲ್ಲಿ ಬಂಧಿಸಿದ್ದಾರೆ.
ಆಂಧ್ರ ಕುಪ್ಪಮ್ ಮೂಲದ ಟೆಕ್ಕಿ ಶ್ರೀನಾಥ್(30) ಕೊಲೆಯಾದ ದುರ್ದೈವಿ. ದಾಯಾದಿ ಅಣ್ಣ ಪ್ರಭಾಕರ ಹಣದ ದುರಾಸೆಗೆ ಬಿದ್ದು ಕೊಲೆ ಮಾಡಿದ್ದು, ಜಗದೀಶ್ ಕೊಲೆಗೆ ಸಹಕರಿಸಿದ್ದ.
ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳ ಕುರಿತು ಮಾಹಿತಿ ಪಡೆದ ಅತ್ತಿಬೆಲೆ ಪೊಲೀಸರ ತಂಡ ಕೊಲೆಗಾರರ ಜಾಡು ಹಿಡಿದು ಹೆಡೆಮುರಿ ಕಟ್ಟಿ ಬಂಧಿಸಿ ಕರೆತಂದಿದ್ದಾರೆ.
ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದ ಶ್ರೀನಾಥ್ ಪತ್ನಿ ಮಗುವಿನೊಂದಿಗೆ ಅತ್ತಿಬೆಲೆ ವ್ಯಾಪ್ತಿಯ ನೆರಳೂರಿನಲ್ಲಿ ವಾಸವಾಗಿದ್ದರು. ಸ್ವಂತ ದೊಡ್ಡಪ್ಪನ ಮಗನಾದ ಹಂತಕ ಪ್ರಭಾಕರ್ ಆರ್ಥಿಕವಾಗಿ ಸ್ಥಿತಿವಂತರಾದ ಶ್ರೀನಾಥ್ ಬಳಿ ರೂ.40 ಲಕ್ಷ ಹಣ ಪಡೆದು ದ್ವಿಗುಣ ಮಾಡಿ ಕೊಡುವುದಾಗಿ ನಂಬಿಸಿದ್ದರು. ಬಹಳ ದಿನವಾದರೂ ಏನೂ ಮಾಡದೇ ಹೋದ ಕಾರಣ ಕೊಟ್ಟ ಹಣವನ್ನು ವಾಪಸ್ ಕೊಡುವಂತೆ ಒತ್ತಾಯಿಸಿದರು.
ಹಣವನ್ನು ವಾಪಸ್ ಕೊಡುವುದಾಗಿ ಕರೆಸಿದ ಪ್ರಭಾಕರ್ ಕುಪ್ಪಮ್ ನ ಮನೆಗೆ ಬರಲು ತಿಳಿಸಿದ್ದ. ಮನೆಗೆ ಬಂದ ಶ್ರೀನಾಥ್ ತಲೆಗೆ ಸುತ್ತಿಗೆಯಿಂದ ಬಡಿದು ಕೊಂದ ಪ್ರಭಾಕರ್ ಮತ್ತು ಸಹಚರ ಜಗದೀಶ್, ಮೊದಲೇ ಮನೆಯೊಳಗೇ ಸಿದ್ಧಪಡಿಸಿದ್ದ ಗುಂಡಿಗೆ ಹಾಕಿ ಮುಚ್ಚಿದ್ದರು.
ಶ್ರೀನಾಥ್ ಕುಪ್ಪಮ್ ಗೆ ಹೋಗುವುದಾಗಿ ತಮ್ಮ ಪತ್ನಿಗೆ ಅ. 27ರಂದು ಕರೆ ಮಾಡಿ ತಿಳಿಸಿದ್ದರು. ಎರಡು ದಿನವಾದರೂ ಪತಿ ಮನೆಗೆ ಬಾರದಿದ್ದಾಗ ಪ್ರಭಾಕರ್ ಗೆ ಕರೆ ಮಾಡಿ ವಿಚಾರಿಸಿದಾಗ ಮುಗ್ಧನಂತೆ ಉತ್ತರಿಸಿದ ಪ್ರಭಾಕರ್ ತನಗೇನೂ ತಿಳಿಯದು ಎಂದು ನಯವಾಗಿ ಉತ್ತರಿಸಿದನು. ಅನುಮಾನಗೊಂಡ ಪತ್ನಿ ಅತ್ತಿಬೆಲೆ ಪೊಲೀಸರಿಗೆ ನ.1 ರಂದು ಪತಿ ಕಾಣೆಯಾದ ಬಗ್ಗೆ ದೂರು ನೀಡಿದರು.
ಕೊಲೆ ರಹಸ್ಯ ಬಯಲಿಗೆ:
ಕಾರ್ಯ ಪ್ರವೃತ್ತರಾದ ಇನ್ಸ್ಪೆಕ್ಟರ್ ಎಸ್. ರಾಘವೇಂದ್ರ ಮತ್ತು ತಂಡ ಮಿಸ್ಸಿಂಗ್ ಕಂಪ್ಲೇಂಟ್ ದಾಖಲಿಸಿಕೊಂಡು ಕಾಲ್ ಲಿಸ್ಟ್ ಜಾಡು ಹಿಡಿದು ಕುಪ್ಪಮ್ ಗೆ ತೆರಳಿ ಹಂತಕರನ್ನು ಬಂಧಿಸಿ ಕರೆತಂದರು. ಪೊಲೀಸರ ತನಿಖೆ ವೇಳೆ ಬಾಯಿಬಿಟ್ಟ ಹಂತಕರು ದೃಶ್ಯ ಸಿನಿಮಾ ಸ್ಟೈಲ್ ನಲ್ಲಿ ಮರ್ಡರ್ ಮಾಡಿರುವುದನ್ನು ಒಪ್ಪಿಕೊಂಡರು.
ಕುಪ್ಪಂ ತಹಶೀಲ್ದಾರ್ ನೇತೃತ್ವದಲ್ಲಿ ಮೃತದೇಹವನ್ನು ಹೊರತೆಗೆದ ಅತ್ತಿಬೆಲೆ ಪೊಲೀಸರು ಆರೋಪಿಗಳನ್ನ ಬಂಧಿಸಿ ಹೆಚ್ಚಿನ ತನಿಖೆಗೆ ಒಳಪಡಿಸಿದ್ದಾರೆ.



