ನವದೆಹಲಿ: ವಿಮಾನ ಹಾರಾಟ ವ್ಯತ್ಯಯದಿಂದ ದೇಶಾದ್ಯಂತ ಸಿಲುಕಿರುವ ಸಾವಿರಾರು ಪ್ರಯಾಣಿಕರಿಗೆ ಪರಿಹಾರವಾಗಿ ಟಿಕೆಟ್ ದರ ಪೂರ್ಣ ಮರುಪಾವತಿ, ವಸತಿ ಹಾಗೂ ಭೋಜನ ವ್ಯವಸ್ಥೆಯನ್ನು ಇಂಡಿಗೋ ವಿಮಾನ ಸಂಸ್ಥೆ ಘೋಷಿಸಿದೆ.
ಡಿಸೆಂಬರ್ 5ರಿಂದ 15ರವರೆಗೆ ದೆಹಲಿ ವಿಮಾನ ನಿಲ್ದಾಣದಿಂದ ಎಲ್ಲಾ ದೇಶೀಯ ನಿರ್ಗಮನಗಳನ್ನ ರಾತ್ರಿ 11:59ರವರೆಗೆ ರದ್ದುಗೊಳಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆ ದೃಢಪಡಿಸಿದೆ.
ಇದೇ ವೇಳೆ ಇಂಡಿಯೊ ಸಿಇಒ ಪೀಟರ್ ಎಲ್ಬರ್ಟ್ಸ್ ನಾಳೆ ಅಂದರೆ ಡಿಸೆಂಬರ್ 6ರಂದು 1000 ವಿಮಾನಗಳ ಹಾರಾಟ ರದ್ದುಗೊಳ್ಳಲಿದೆ. ಡಿಸೆಂಬರ್ 10ರಿಂದ 15ರ ವೇಳೆ ಸಹಜ ಸ್ಥಿತಿಗೆ ಬರಲಿದ್ದು, ಅಲ್ಲಿಯವರೆಗೆ ಪ್ರಯಾಣಿಕರು ಸಹಕರಿಸುವಂತೆ ಮನವಿ ಮಾಡಿದ್ದಾರೆ.
ವಿಮಾನಯಾನ ರದ್ದುಗೊಳಿಸಿದ್ದರಿಂದ ಪ್ರಯಾಣಿಕರಿಗೆ ಆಗಿರುವ ಅನಾನುಕೂಲದ ಬಗ್ಗೆ ಪ್ರಯಾಣಿಕರ ಬಳಿ “ಗಂಭೀರ ಕ್ಷಮೆಯಾಚಿಸಿದೆ” ಎಂದು ಪ್ರಕಟಣೆಯಲ್ಲಿ ಘೋಷಿಸಿರುವ ಇಂಡಿಗೋ ಸಂಸ್ಥೆ ಪ್ರಯಾಣಿಕರ ಸೇವೆಯೇ ನಮಗೆ ಮೊದಲ ಆದ್ಯತೆ ಎಂದು ಹೇಳಿದೆ.
ಕೇಂದ್ರ ಸರ್ಕಾರ ರಾತ್ರಿ ಪಾಳಿ ಕರ್ತವ್ಯ ನಿರ್ವಹಿಸುವ ಪೈಲೆಟ್ ಗಳು ಹಾಗೂ ಪೈಲೆಟ್ ಗಳ ವಾರದ ರಜೆ ಕುರಿತು ಜಾರಿಗೆ ತಂದ ನಿಯಮದಿಂದ ಪೈಲೆಟ್ ಗಳು ತಮ್ಮ ಸೌಲಭ್ಯಗಳನ್ನು ಬಳಸಿದ್ದರಿಂದ ಪೈಲೆಟ್ ಗಳ ಕೊರತೆ ಎದುರಿಸಿದ ಇಂಡಿಗೋ ಸಂಸ್ಥೆಯ ವಿಮಾನಗಳ ಹಾರಾಟ ಏಕಾಏಕಿ ಸ್ಥಗಿತಗೊಂಡಿವೆ.
ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಸಾವಿರಾರು ಪ್ರಯಾಣಿಕರನ್ನು ಸಿಲುಕಿಸಿರುವ `ಗಂಭೀರ ಕಾರ್ಯಾಚರಣೆಯ ಬಿಕ್ಕಟ್ಟು’ ಒಪ್ಪಿಕೊಂಡು ವಿಮಾನಯಾನ ಸಂಸ್ಥೆಯು ವಿವರವಾದ ಸಾರ್ವಜನಿಕ ಕ್ಷಮೆಯಾಚಿಸಿದೆ.
ಕಳೆದ ಕೆಲವು ದಿನಗಳ ಆಡಚಣೆಗೆ ನಾವು ಕ್ಷಮೆಯಾಚಿಸುತ್ತೇವೆ ಮತ್ತು ಅರ್ಥಮಾಡಿಕೊಂಡಿದ್ದೇವೆ. ಇದು ರಾತ್ರೋರಾತ್ರಿ ಬಗೆಹರಿಯುವುದಿಲ್ಲವಾದರೂ, ನಮ್ಮ ಕಾರ್ಯಾಚರಣೆಗಳನ್ನು ಆದಷ್ಟು ಬೇಗ ಸಾಮಾನ್ಯ ಸ್ಥಿತಿಗೆ ತರಲು ಎಲ್ಲವನ್ನೂ ಮಾಡುತ್ತೇವೆ ಎಂದು ನಾವು ನಿಮಗೆ ಭರವಸೆ ನೀಡುತ್ತೇವೆ ಎಂದು ಸಂಸ್ಥೆ ಹೇಳಿದೆ.



