ಧುರಂದರ್ ಮತ್ತು ಛಾವಾ ಯಶಸ್ಸಿನ ಬೆನ್ನಲ್ಲೇ ನಟ ಅಕ್ಷಯ್ ಖನ್ನಾ ಹೊಸ ಬೇಡಿಕೆಗಳನ್ನು ನಿರಾಕರಿಸಿದ್ದರಿಂದ ದೃಶ್ಯಂ -3 ಚಿತ್ರದಿಂದ ಹೊರಬಿದ್ದಿದ್ದಾರೆ ಎಂದು ಹೇಳಲಾಗಿದೆ.
ಛಾವಾ ಮತ್ತು ಧುರಂದರ್ ಚಿತ್ರಗಳಲ್ಲಿ ಖಳನಟನಾಗಿ ನಟಿಸಿದ್ದ ಅಕ್ಷಯ್ ಖನ್ನಾ ಉತ್ತಮ ಅಭಿನಯದಿಂದ ಗಮನ ಸೆಳೆದಿದ್ದರು. ಈ ಹಿನ್ನೆಲೆಯಲ್ಲಿ ನಾನು ನಟಿಸುವುದರಿಂದ ಚಿತ್ರದ ಕುತೂಹಲ ಹೆಚ್ಚಲಿದೆ. ಆದ್ದರಿಂದ ಸಿನಿಮಾದಲ್ಲಿ ನಟಿಸಲು ಶುಲ್ಕ ಹೆಚ್ಚಿಸಿಕೊಂಡಿದ್ದರು.
ದೃಶ್ಯಂ-3ಯಲ್ಲಿ ನಟಿಸಬೇಕಾದರೆ 21 ಕೋಟಿ ರೂ. ನೀಡಬೇಕು ಮತ್ತು ಚಿತ್ರದಲ್ಲಿ ವಿಗ್ ಧರಿಸಲು ಅವಕಾಶ ನೀಡಬೇಕು ಎಂದು ಅಕ್ಷಯ್ ಖನ್ನಾ ಹೊಸ ಬೇಡಿಕೆ ಇಟ್ಟಿದ್ದರು.
ಅಜಯ್ ದೇವಗನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ದೃಶ್ಯಂ-3 ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, 2026 ಅಕ್ಟೋಬರ್ 2ರಂದು ಸಿನಿಮಾ ಬಿಡುಗಡೆ ಮಾಡುವುದಾಗಿ ತಂಡ ಘೋಷಿಸಿದ ಬೆನ್ನಲ್ಲೇ ಅಕ್ಷಯ್ ಖನ್ನಾ ವರಸೆಯಿಂದ ತಂಡ ಬೇಸತ್ತಿದೆ.
ಬಜೆಟ್ ಈಗಾಗಲೇ ನಿಗದಿಪಡಿಸಿದ್ದು, 21 ಕೋಟಿ ರೂ. ನೀಡಲು ಸಾಧ್ಯವಿಲ್ಲ. ಅಲ್ಲದೇ ಸಿನಿಮಾದ ಯೋಜನೆಗಳು ಸಿದ್ಧಗೊಂಡಿದ್ದು, ವಿಗ್ ಬೇಡ. ಸಹಜವಾಗಿ ಕಾಣಿಸಿಕೊಳ್ಳುವಂತೆ ತಂಡ ಮನವಿ ಮಾಡಿದರೂ ಅಕ್ಷಯ್ ಸೊಪ್ಪು ಹಾಕಲಿಲ್ಲ ಎಂದು ಮೂಲಗಳು ತಿಳಿಸಿವೆ.
ಅಕ್ಷಯ್ ಬೇಡಿಕೆ ಈಡೇರಿಸಲು ನಿರಾಕರಿಸಿದ ತಂಡ ಅಕ್ಷಯ್ ಖನ್ನಾ ಅವರನ್ನು ಕೈಬಿಟ್ಟು ಹಿಂದಿನ ಆವೃತ್ತಿಗಳಲ್ಲಿ ನಟಿಸಿದ್ದ ನಟರನ್ನೇ ವಾಪಸ್ ಕರೆಸಲು ತೀರ್ಮಾನಿಸಿದೆ. ಅಲ್ಲದೇ ಅಕ್ಷಯ್ ವಿರುದ್ಧ ದೂರು ನೀಡಲು ತಂಡ ಸಜ್ಜಾಗಿದೆ.
ದೃಶ್ಯಂ -2 ನಿರ್ಮಾಪಕ ಪನರೋಮಾ ಸ್ಟೋಡಿಯೋ ಮಾಲೀಕ ಕುಮಾರ್ ಮಂಗತ್ ಪಾಟಕ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಅಕ್ಷಯ್ ಮೊದಲು ಮಾತುಕತೆ ನಡೆದಾಗ ನಿಗದಿಯಾಗಿದ್ದ ಶುಲ್ಕಕ್ಕಿಂತ ಮೂರು ಪಟ್ಟು ಹೆಚ್ಚು ಕೇಳುತ್ತಿದ್ದಾರೆ. ಅಲ್ಲದೇ ಮಾತುಕತೆಗೆ ಕೂಡ ಅವರು ಸಿದ್ದರಿಲ್ಲ. ಫೋನ್ ಕರೆಗಳನ್ನು ಕೂಡ ಸ್ವೀಕರಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.



