ಸರ್ಕಾರಿ ಬಸ್ಸೊಂದು ಕಂದಕಕ್ಕೆ ಉರುಳಿ ಬಿದ್ದು 21 ಮಂದಿ ಸಾವಿಗೀಡಾಗಿದ್ದಾರೆ. 61 ಮಂದಿ ಗಾಯಗೊಂಡ ಘಟನೆ ಜಮ್ಮು ಮತ್ತು ಕಾಶ್ಮೀರ ಉಧಮ್ಪುರದ ಕನೋಟ್ ಗ್ರಾಮದಲ್ಲಿ ಸಂಭವಿಸಿದೆ.
ಬಸ್ ರಾಮನಗರದಿಂದ ಉಧಮ್ಪುರಕ್ಕೆ ಹೋಗುತ್ತಿದ್ದಾಗ ಕನೋಟ್ ಗ್ರಾಮದ ಬಳಿಕ ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದಿದೆ. ಇದರಿಂದ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ.
ಬಸ್ನಲ್ಲಿ ಎಷ್ಟು ಜನರಿದ್ದರು ಎಂಬ ಬಗ್ಗೆ ನಿಖರ ಮಾಹಿತಿ ಗೊತ್ತಾಗಿಲ್ಲ. ಆದರೆ ಓರ್ವ ವ್ಯಕ್ತಿಯ ಸ್ಥಿತಿ ತೀವ್ರ ಗಂಭೀರವಾಗಿದ್ದು, ಅವರನ್ನು ವಿಮಾನದ ಮೂಲಕ ಜಮ್ಮುವಿನಲ್ಲಿನ ಆಸ್ಪತ್ರೆಗೆ ರವಾನಿಸಲಾಗಿದೆ.
“ರಾಮನಗರ-ಉಧಮ್ಪುರ ಮಾರ್ಗದಲ್ಲಿ ಸರ್ಕಾರಿ ಬಸ್ ದುರಂತಕ್ಕೀಡಾಗಿದೆ. ಡಿಐಜಿ ಯು-ಆರ್ ರೇಂಜ್, ಎಸ್ಎಸ್ಪಿ ಉಧಮ್ಪುರ ಮತ್ತು ಇತರ ಅಧಿಕಾರಿಗಳು ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳದಲ್ಲಿದ್ದಾರೆ. ರಕ್ಷಣಾ ಕಾರ್ಯಾಚರಣೆಗಳನ್ನು ಪ್ರಾರಂಭಿಸಲಾಗಿದೆ. ಅಗತ್ಯ ನೆರವು ನೀಡಲಾಗುತ್ತಿದೆ” ಎಂದು ಉಧಮ್ಪುರ ಪೊಲೀಸರು ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಕೇಂದ್ರ ಸಚಿವರಿಂದ ಸಂತಾಪ:
ಉಧಮ್ಪುರ ಉಪ ಆಯುಕ್ತ ಮಿಂಗಾ ಶೆರ್ಪಾ ಅವರೊಂದಿಗೆ ಮಾತನಾಡಿ ಪರಿಸ್ಥಿತಿಯ ಬಗ್ಗೆ ನಿಗಾ ವಹಿಸಿದ್ದಾರೆ. ಅಲ್ಲದೇ, ಗಂಭೀರವಾಗಿ ಗಾಯಗೊಂಡವರಿಗೆ ತಕ್ಷಣದ ಚಿಕಿತ್ಸೆ ಒದಗಿಸಲು ವಿಮಾನದಲ್ಲಿ ಸಾಗಿಸಲು ವ್ಯವಸ್ಥೆ ಮಾಡುವಂತೆ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಸೂಚಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ “ಉಧಂಪುರದಲ್ಲಿ ನಡೆದ ದುರಂತ ಹೃದಯವಿದ್ರಾವಕವಾಗಿದೆ. ಮೃತ ಕುಟುಂಬಗಳಿಗೆ ನನ್ನ ಸಂತಾಪಗಳು. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲು ಪ್ರಾರ್ಥಿಸುವೆ. ಗಾಯಾಳುಗಳಿಗೆ ಎಲ್ಲ ವ್ಯವಸ್ಥೆ ನೀಡುವಂತೆ ಜಿಲ್ಲಾ ಆಡಳಿತ, ಪೊಲೀಸ್, ಎಸ್ಡಿಆರ್ಎಫ್ ಮತ್ತು ಆರೋಗ್ಯ ಇಲಾಖೆಗೆ ನಿರ್ದೇಶನ ನೀಡಿದ್ದೇನೆ” ಎಂದು ತಿಳಿಸಿದ್ದಾರೆ.



