ಮೈಸೂರಿನ ಅರಣ್ಯ ಇಲಾಖೆಯ ಕ್ಯಾಂಪ್ ಮುಂಭಾಗವೇ ಹರಿಯುತ್ತಿದ್ದ ಕಬಿನಿ ಹಿನ್ನೀರಿನಲ್ಲಿ ಈಜಲು ಹೋಗಿದ್ದ ಅರಣ್ಯ ರಕ್ಷಕ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಹೆಚ್. ಡಿ. ಕೋಟೆ ತಾಲೂಕಿನ ಅಂಕನಾಥಪುರ ಗ್ರಾಮದ ಸುಪ್ರೀತ್ (36) ಮೃತಪಟ್ಟಿದ್ದಾರೆ.
ಬುಧವಾರ ಸುಪ್ರೀತ್ ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಿ ರಾತ್ರಿ ಪಾಳಿಯ ಕರ್ತವ್ಯ ಮುಗಿಸಿ, ಬುಧವಾರ ಬೆಳಗ್ಗೆ ಸುಮಾರು 8 ಗಂಟೆಯ ವೇಳೆಗೆ ಉದ್ಬೂರು ಗೇಟ್ ಬಳಿಯ ಕಳ್ಳಬೇಟೆ ತಡೆ ಶಿಬಿರದ ಸಮೀಪ ತಮ್ಮ ಇಬ್ಬರು ಸಹೋದ್ಯೋಗಿಗಳಾದ ಅಯ್ಯಪ್ಪ ಹಾಗೂ ಅಮನ್ ಜೊತೆ ಈಜಲು ತೆರಳಿಗಿದ್ದರು.
ಈಜಾಡುತ್ತಿದ್ದ ವೇಳೆ ಆಯಾಸಗೊಂಡಿದ್ದ ಸುಪ್ರೀತ್ ತಮ್ಮ ಇಬ್ಬರು ಸಹೋದ್ಯೋಗಿಗಳಿಗೆ ತಾವು ದಡಕ್ಕೆ ಹೋಗುವುದಾಗಿ ಹೇಳಿ ನೀರಿನಿಂದ ಹೊರಬರಲು ಪ್ರಯತ್ನಿಸಿದ್ದಾರೆ. ಈ ವೇಳೆ ತೀರಾ ಆಯಾಸಗೊಂಡು ನೀರಿನಲ್ಲಿ ಮುಳುಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಹೋದ್ಯೋಗಿಗಳ ಚೀರಾಟದಿಂದ ವಿಷಯ ತಿಳಿದು ಸ್ಥಳೀಯರು ಕೂಡಲೇ ಸ್ಥಳಕ್ಕೆ ಆಗಮಿಸಿ, ಸುಪ್ರೀತ್ಗಾಗಿ ಹುಡುಕಾಟ ನಡೆಸಿದರು. ಎಲ್ಲಿಯೂ ಪತ್ತೆಯಾಗದ ಕಾರಣ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದರು.
ಕೂಡಲೇ ಘಟನಾ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕದಳದ ಸಹಾಯಕ ಠಾಣಾಧಿಕಾರಿ ಎಂ. ಜಿ. ಸೋಮಣ್ಣ, ಸಿಬ್ಬಂದಿ ಪುಂಡಲೀಕ ಲಮಾಣಿ, ಮುನಿಸಿದ್ದ ನಾಯಕ, ರಾಹುಲ್ ಪಾಟೀಲ್, ಹೇಮಂತ ಕುಮಾರ್ ಹಾಗೂ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು, ಪೊಲೀಸ್ ಇಲಾಖೆ ಸಿಬ್ಬಂದಿ, ಕಾರಾಪುರ, ಕಬಿನಿ ಜಂಗಲ್ ಲಾಡ್ಜ್ ಅಂಡ್ ರೆಸಾರ್ಟ್ ಸಿಬ್ಬಂದಿ, ಇಟ್ನ ಗ್ರಾಮದ ನುರಿತ ಈಜುಗಾರರ ಜತೆಗೆ ಕೇರಳದಿಂದ ಆಗಮಿಸಿದ್ದ ಮುಳುಗು ತಜ್ಞರು ಮೃತದೇಹಕ್ಕಾಗಿ ತೀವ್ರ ಶೋಧ ಕಾರ್ಯ ಆರಂಭಿಸಿದ್ದರು.
ಗುರುವಾರ ಬೆಳಗ್ಗೆ 6ರ ಸಮಯದಲ್ಲಿ ನೀರಿನಿಂದ ಮೃತದೇಹ ಮೇಲೆತ್ತಿದ್ದಾರೆ. ಮೃತ ಸುಪ್ರೀತ್ ಅವರಿಗೆ ಚಿಕ್ಕ ವಯಸ್ಸಿನ ಇಬ್ಬರು ಮಕ್ಕಳಿದ್ದು, ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ಅಂತರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



