ಜೂನ್ 3ರಂದು ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ನಿರ್ಧರಿಸಿದ್ದು, ಈ ಸಂಬಂಧ ಶನಿವಾರ ರಾಜ್ಯಪಾಲರನ್ನು ಭೇಟಿ ಮಾಡಿ ಹಕ್ಕು ಮಂಡಿಸಲಿದ್ದಾರೆ.
ಜೂನ್ 4 ಬುಧವಾರ ಸಂಜೆ ಗೋಧೋಳಿ ಮುಹೂರ್ತದಲ್ಲಿ ಡಿಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ದ್ವಾರಾಕಾನಾಥ್ ಗುರೂಜಿ ನೀಡಿದ ಮೂರು ಮುಹೂರ್ತಗಳಲ್ಲಿ ಡಿಕೆ ಶಿವಕುಮಾರ್ ಈ ದಿನಾಂಕ ಆಯ್ಕೆ ಮಾಡಿಕೊಳ್ಳಲು ಕಾರಣ ರಾಹುಲ್ ಗಾಂಧಿ ಈ ದಿನಾಂಕದಂದು ಲಭ್ಯರಿದ್ದಾರೆ ಎಂಬ ಕಾರಣಕ್ಕೆ ಎಂದು ತಿಳಿದು ಬಂದಿದೆ.
ಡಿಕೆ ಶಿವಕುಮಾರ್ ಜೊತೆ 10 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ 10 ಜನರನ್ನು ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಧರಿಸಲಾಗುವುದು ಎಂದು ಹೇಳಲಾಗಿದೆ.
ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ದಿನಗಳು ಕಳೆಯುತ್ತಾ ಬಂದರೂ ಸರ್ಕಾರ ರಚನೆಗೆ ಹಕ್ಕು ಮಂಡನೆಗೆ ಡಿಕೆ ಶಿವಕುಮಾರ್ ತರಾತುರಿ ಮಾಡದೇ ಇರುವುದು ಅಚ್ಚರಿ ಆಗಿದೆ. ಬುಧವಾರ ಸಂಜೆ ನಡೆಯುವ ಶಾಸಕಾಂಗ ಪಕ್ಷ ಸಭೆಯಲ್ಲಿ ಡಿಕೆ ಶಿವಕುಮಾರ್ ಅವರನ್ನು ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಮಾಡಲಾಗುವುದು. ಇದೇ ವೇಳೆ ಸಚಿವ ಸ್ಥಾನಕ್ಕೆ ಶಾಸಕರ ಆಯ್ಕೆ ಕೂಡ ನಡೆಯಲಿದೆ ಎಂದು ಹೇಳಲಾಗಿದೆ.
ಡಿಕೆ ಶಿವಕುಮಾರ್ ಈಗಾಗಲೇ ಸಚಿವರ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ. ಇದರಲ್ಲಿ ಹೊಸ ಶಾಸಕರು ಹಾಗೂ ಹಿಂದಿನ ಸರ್ಕಾರದ ವೇಳೆ ಕೈಬಿಡಲಾಗಿದ್ದ ಪ್ರಮುಖ ಹಾಗೂ ಹಿರಿಯ ಶಾಸಕರಿಗೂ ಸ್ಥಾನ ನೀಡುವ ಸಾಧ್ಯತೆ ಇದೆ. ಈ ಮೂಲಕ ಎಲ್ಲರ ವಿಶ್ವಾಸ ಪಡೆದು ಸರ್ಕಾರ ರಚನೆಗೆ ಮುಂದಾಗಲಿದ್ದಾರೆ ಎಂದು ತಿಳಿದು ಬಂದಿದೆ.
ಪೂರ್ವಾಷಾಡ ನಕ್ಷತ್ರ, ತುಲಾ ಲಗ್ನ ಶುಭ ಮುಹೂರ್ತದಲ್ಲಿ ಗ್ರಹಗಳು ಬಲವಾಗಿರುತ್ತವೆ. ಗುರು ಉಚ್ಚಸ್ಥಿತಿಯಲ್ಲಿ ಇರುತ್ತಾನೆ ಅನ್ನೋದು ನಂಬಿಕೆ. ಅಲ್ಲದೇ ಬುಧವಾರ ಹೊಸತನ, ಹೊಸತನ್ನ ಆರಂಭಿಸೋಕೆ ಒಳ್ಳೆಯ ದಿನ ಅನ್ನೋ ನಂಬಿಕೆಯೂ ಜ್ಯೋತಿಷ್ಯ ಶಾಸ್ತ್ರದಲ್ಲಿದೆ. ಸಂಧ್ಯಾಕಾಲ ಶುಭ ಮುಹೂರ್ತವಾಗಿದ್ದು, ಈ ವಿಶೇಷ ಮುಹೂರ್ತದಲ್ಲಿ ಡಿಕೆ ಪ್ರಮಾಣ ಸ್ವೀಕರಿಸುವ ಮೂಲಕ ರಾಜ್ಯಭಾರ ಶುರು ಮಾಡಲಿದ್ದಾರೆ.



