Wednesday, July 15, 2026
Google search engine
Homeರಾಜಕೀಯಹೈಕಮಾಂಡ್ ಆಮೀಷವೊಡ್ಡಿ ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಕೆಳಗಿಸಿದ ಡಿಕೆ ಶಿವಕುಮಾರ್: ಹೆಚ್.ಡಿ.ದೇವೇಗೌಡ ಬಾಂಬ್

ಹೈಕಮಾಂಡ್ ಆಮೀಷವೊಡ್ಡಿ ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಕೆಳಗಿಸಿದ ಡಿಕೆ ಶಿವಕುಮಾರ್: ಹೆಚ್.ಡಿ.ದೇವೇಗೌಡ ಬಾಂಬ್

ಬೆಂಗಳೂರು: ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯನವರನ್ನು ಇಳಿಸಿ ತಮ್ಮನ್ನು ಮುಖ್ಯಮಂತ್ರಿ ಮಾಡುವುದಕ್ಕಾಗಿ ಹೈಕಮಾಂಡ್’ಗೆ ಒಡ್ಡಿರುವ ಆಮಿಷಗಳನ್ನು ಈಡೇರಿಸಲು ಸಿಎಂ ಡಿ.ಕೆ. ಶಿವಕುಮಾರ್ ಬಿಡದಿ ಟೌನ್ ಶಿಪ್ ಯೋಜನೆಯನ್ನು ಕೈಗೆತ್ತಿಕೊಂಡಿದ್ದಾರೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ  ಅತ್ಯಂತ ಗಂಭೀರ ಆರೋಪ ಮಾಡಿದರು.

ಈ ಟೌನ್ಶಿಪ್’ಗೆ ಭೂಮಿ ಕೊಡಲು ರೈತರು ಸ್ಪಷ್ಟವಾಗಿ ನಿರಾಕರಿಸುತ್ತಿದ್ದಾರೆ. ಬಡರೈತರ ಹೊಟ್ಟೆಯ ಮೇಲೆ ಹೊಡೆಯಬೇಡಿ. ಹೈಕಮಾಂಡ್ ಗೆ ಒಡ್ಡಿರುವ ಆಮಿಷಗಳನ್ನು ಈಡೇರಿಸಲು ಬೇರೆ ಬೇರೆ ದಾರಿಗಳಿವೆ. ದಯಮಾಡಿ ಈ ಯೋಜನೆಯನ್ನು ಇಲ್ಲಿಗೇ ಕೈಬಿಡಿ. ಒಂದು ವೇಳೆ ಯೋಜನೆಯನ್ನು ನೀವು ಕೈ ಬಿಡದಿದ್ದರೆ ವಿಧಾನಸೌಧದ ಪಕ್ಕದಲ್ಲಿರುವ ಮಹಾತ್ಮ ಗಾಂಧಿ ಅವರ ಪ್ರತಿಮೆಯ ಮುಂದೆ ಧರಣಿ ಕೂರುತ್ತೇನೆ. ಅಂತಹ ಪರಿಸ್ಥಿತಿಗೆ ನನ್ನನ್ನು ದೂಡಬೇಡಿ ಎಂದು ರಾಜ್ಯ ಸರ್ಕಾರಕ್ಕೆ ನೇರ ಎಚ್ಚರಿಕೆ ನೀಡಿದರು ಮಾಜಿ ಪ್ರಧಾನಿಗಳು.

ಜೆಡಿಎಸ್ ಪಕ್ಷದ ಕೇಂದ್ರ ಕಚೇರಿ ಜೆಪಿ ಭವನದಲ್ಲಿ ಕಿಕ್ಕಿರಿದ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು; ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಯಾವ ಅಧಿಕಾರಿ ಕೂಡ ಸರ್ವೆ ಮಾಡುತ್ತೇವೆ ಎಂದು ಬಿಡದಿಗೆ ಹೋಗಲಿಲ್ಲ. ಹೊಸ ಮುಖ್ಯಮಂತ್ರಿ ಬಂದು ಒಂದು ತಿಂಗಳು ಕೂಡ ಆಗಲಿಲ್ಲ, ಆಗಲೇ ಅಧಿಕಾರಿಗಳನ್ನು ಬಿಟ್ಟು ಸರ್ವೆ ಮಾಡಿಸಿ ಭೂಮಿಯನ್ನು ಕಿತ್ತುಕೊಳ್ಳಲು ಹೊರಟಿದ್ದಾರೆ. ಯಾವ ಕಾರಣದಿಂದ ನೀವು ಈ ಯೋಜನೆಗೆ ಕೈ ಹಾಕಿದ್ದೀರ ಎಂಬುದು ನನಗೆ ಗೊತ್ತಿದೆ ಎಂದು ದೇವೇಗೌಡರು ಸಿಡಿಮಿಡಿಯಾದರು.

ಸಿದ್ದರಾಮಯ್ಯ ಅವರನ್ನು ಇಳಿಸಲು ದೊಡ್ಡ ಪ್ಲಾನ್ ಮಾಡಿದರು. ಅದಕ್ಕಾಗಿ ಹೈಕಮಾಂಡ್ ಅನ್ನು ಒಲಿಸಿಕೊಳ್ಳಲು ನಾನಾ ಆಮಿಷಗಳನ್ನು ಒಡ್ಡಲಾಯಿತು. ಆ ಆಮಿಷಗಳನ್ನು ಪೂರೈಸಲು ಬಡರೈತರ ಭೂಮಿಗೆ ಕೈ ಹಾಕಿದ್ದೀರಿ. ಚುನಾವಣಾ ಫಂಡ್ ಬಗ್ಗೆ ಕೂಡ ಹೈಕಮಾಂಡ್’ಗೆ ಡಿ.ಕೆ. ಶಿವಕುಮಾರ್ ಆಶ್ವಾಸನೆ ಕೊಟ್ಟಿದ್ದಾರೆ. ಇದೆಲ್ಲವನ್ನು ಸರಿದೂಗಿಸಿಕೊಳ್ಳಲು ಬಿಡದಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಮಾಜಿ ಪ್ರಧಾನಿಗಳು ಹಾಲಿ ಮುಖ್ಯಮಂತ್ರಿ ಡಿಕೆಶಿ ವಿರುದ್ಧ ಗಂಭೀರ ಆರೋಪ ಮಾಡಿದರು.

ಬಿಡದಿಯ ಒಂದು ಗ್ರಾಮದಲ್ಲಿ ಜಂಟಿ ಸರ್ವೆ ಮಾಡಲು ಹೋದ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗಾಗಿ ತುರ್ತು ಮಾಧ್ಯಮಗೋಷ್ಠಿ ಕರೆದಿದ್ದೇನೆ. ಮಂಡಹಳ್ಳಿ ಎನ್ನುವ ಆ ಹಳ್ಳಿಯಲ್ಲಿ ಶೇಕಡ 40ರಷ್ಟು ಜನ ಹಳ್ಳಿ ಬಿಟ್ಟು ಬೆಂಗಳೂರಿಗೆ ಬಂದಿದ್ದಾರೆ. ಅಂತಹವರು ಜಮೀನು ಕೊಡಲು ಸಿದ್ಧ ಎಂದು ಹೇಳುತ್ತಿದ್ದಾರೆ. ಅವರಲ್ಲಿ ಅನೇಕರು ಹಳ್ಳಿಯಲ್ಲಿ ನೆಲೆಸಿಲ್ಲ. ಅಷ್ಟೂ ಜನರಿಗೆ ಸೇರಿ ಇರುವ ಭೂಮಿ ಕೇವಲ 17 ಎಕರೆ ಮಾತ್ರ. 500 ಎಕರೆ ಇರುವ ಜಾಗದ ರೈತರು ಭೂಮಿ ಕೊಡುವುದಿಲ್ಲ ಎನ್ನುತ್ತಿದ್ದಾರೆ. ಹೀಗಾಗಿ ಅಲ್ಲಿ ಗಲಾಟೆಯಾಗಿದೆ ಎಂದು ಮಾಜಿ ಪ್ರಧಾನಿಗಳು ಹೇಳಿದರು.

ತಮ್ಮ ಭೂಮಿಯನ್ನು ಬಲವಂತವಾಗಿ ಕಿತ್ತುಕೊಳ್ಳಲು ಬಂದರೆ ಯಾರಿಗೆ ಆದರೂ ಕೋಪ ಬರುವುದು ಸಹಜ. ಅದರಂತೆಯೇ ರೈತರು ಪ್ರತಿಕ್ರಿಯಿಸಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿ ಅವರು ಕಂದಾಯ ಅಧಿಕಾರಿಗಳ ಮನವಿಯ ಮೇರೆಗೆ ಅಲ್ಲಿಗೆ ಹೋದೆವು ಎಂದು ಹೇಳುತ್ತಾರೆ. ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡಿದರೆ ಯಾರಾದರೂ ಬೆಂಬಲ ಕೊಡುತ್ತಾರೆ. ಆದರೆ ಇಲ್ಲಿ ಸರ್ಕಾರವೇ ಕಾನೂನನ್ನು ಮೀರಿ ವರ್ತಿಸಿದೆ. ಕಂದಾಯ ಇಲಾಖೆ ಅಧಿಕಾರಿಗಳು ಕೊಟ್ಟಿರುವ ದೂರಿನ ಆಧಾರದ ಮೇಲೆ ಪೊಲೀಸರು ರೈತರ ಮೇಲೆ ಎಫ್ ಐಆರ್ ದಾಖಲಿಸಿದ್ದಾರೆ. ಅಷ್ಟೇ ಅಲ್ಲದೆ ಜಿಲ್ಲಾಧಿಕಾರಿ ಹೇಳಿದಂತೆ ಕ್ರಮ ಜರುಗಿಸುತ್ತೇವೆ ಎಂದು ಎಸ್ಪಿ ಹೇಳಿದ್ದಾರೆ. ಇಷ್ಟು ಸಾಲದು ಎಂಬಂತೆ ಐಜಿ ಅವರು ಕೂಡ ಹೋಗಿ ಪರಿಶೀಲನೆ ಮಾಡಿದ್ದಾರೆ. ಪೊಲೀಸರು ಗಾಯಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ. ಹಾಗೆಯೇ ಹೆಣ್ಣುಮಕ್ಕಳು ಕೂಡ ತಮಗಾಗಿರುವ ನೋವು ಹೇಳಿಕೊಂಡಿದ್ದಾರೆ. ರೈತರು ಬದುಕಬೇಕಲ್ಲವೇ? ಇವತ್ತು ಐಜಿ, ಪೊಲೀಸ್ ವರಿಷ್ಟಾಧಿಕಾರಿ ಎಲ್ಲರೂ ರೈತರ ಮಕ್ಕಳೇ ಅಲ್ಲವೇ ಎಂದು ಮಾಜಿ ಪ್ರಧಾನಿಗಳು ಹೇಳಿದರು.

ಭೂಮಿ ಕೊಡಲ್ಲ ಎಂದು ಹೇಳಿದ ಮೇಲೆಯೂ ಸರ್ವೇ ಮಾಡಲು ಬಂದಿದ್ದನ್ನು ಏನೆಂದು ಕರೆಯಬೇಕು? ಅತಿಕ್ರಮಣ ಮಾಡಲು ಬಂದರೆ ಸುಮ್ಮನಿರು ಸಾಧ್ಯವೇ? ಸರ್ಕಾರ ರೈತರ ನೋವನ್ನು ಅರ್ಥ ಮಾಡಿಕೊಳ್ಳಬೇಕು. ಮಹಿಳೆಯರು ಮೇಲೆ ಎಫ್ ಐಆರ್ ಹಾಕಿದರೆ ಅವರ ಬದುಕು ಹೇಗೆ ನಡೆಯುತ್ತದೆ? ಸರ್ಕಾರ ಸೂಕ್ಷ್ಮವಾಗಿ ವರ್ತಿಸಬೇಕಾಗುತ್ತದೆ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ನನ್ನ ಪತ್ರಕ್ಕೆ ಸಿಎಂ ಕಚೇರಿ ಹಿಂಬರಹವನ್ನೇ ನೀಡಿಲ್ಲ:

ಈ ರಾಜ್ಯದ ಮುಖ್ಯಮಂತ್ರಿಗಳಿಗೆ ನಾನು ಕಳೆದ ಜೂನ್ 25ರಂದು ಪತ್ರ ಬರೆದಿದ್ದೇನೆ. ಇವತ್ತು ಜುಲೈ 14. ಹೆಚ್ಚು ಕಮ್ಮಿ 20 ದಿನ ಆಗಿದೆ. ಅವರಿಗೆ ಪತ್ರ ತಲುಪಿರುತ್ತದೆ ಎಂದು ಭಾವಿಸಿದ್ದೇನೆ. ಆದರೂ ಅವರಿಗೆ ತಲುಪಿದೆಯೋ ಇಲ್ಲವೋ ಎಂಬ ಬಗ್ಗೆ ನನಗೆ ಈವರೆಗೆ ಹಿಂಬರಹವನ್ನು ಕೊಟ್ಟಿಲ್ಲ. ನಾನು ಒಬ್ಬ ರೈತರ ಮಗ. ಈಗ ನನಗೆ ಯಾವ ಅಧಿಕಾರ ಇಲ್ಲ. ರೈತನ ಮಗನಾಗಿ ನಾನು ಪತ್ರ ಬರೆದಿದ್ದೇನೆ. ಅದಕ್ಕೆ ಒಂದು ಹಿಂಬರಹ ಕೊಡುವ ಸೌಜನ್ಯ ಮುಖ್ಯಮಂತ್ರಿಗಳ ಕಚೇರಿಗೆ ಇಲ್ಲದಾಗಿದೆ ಎಂದು ಮಾಜಿ ಪ್ರಧಾನಿಗಳು ಬೇಸರ ವ್ಯಕ್ತಪಡಿಸಿದರು.

ರೈತರ ಮೇಲೆ ದಬ್ಬಾಳಿಕೆ ನಡೆಯುತ್ತಿದ್ದರೆ ನೋಡಿಕೊಂಡು ಸುಮ್ಮನೆ ಕೂರಲು ಸಾಧ್ಯವಿಲ್ಲ. ಮಹಾತ್ಮ ಗಾಂಧೀಜಿ ಪ್ರತಿಮೆಯ ಮುಂದೆ ಧರಣಿ ಕೂರುತ್ತೇನೆ. ಈಗಲೂ ನಾನು ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತಿದ್ದೇನೆ, ಧರಣಿ ಕೂರುವ ಪರಿಸ್ಥಿತಿಗೆ ನನ್ನನ್ನು ದೂಡಬೇಡಿ. ರೈತರ ಮೇಲೆ ಹಾಕಿರುವ ಎಫ್’ಐಆರ್ ಅನ್ನು ತಕ್ಷಣವೇ ವಾಪಸ್ ಪಡೆಯಬೇಕು ಎಂದು ವಿನಂತಿಸುತ್ತೇನೆ. ನೀವು ಕೂಡ ರೈತರ ಮಕ್ಕಳೇ ಅಲ್ಲವೇ? ರೈತರ ಕಷ್ಟ ನೋವು ಅರ್ಥ ಮಾಡಿಕೊಳ್ಳುವ ಶಕ್ತಿ ‌ಇದೆ. ಸದ್ಯಕ್ಕೆ ಏನೋ ಸರ್ವೆ ನಿಲ್ಲಿಸಿದ್ದಾರೆ. ಅದನ್ನು ನಾನು ಸ್ವಾಗತ ಮಾಡುತ್ತೇನೆ. ಬಿಡದಿ ಉಪನಗರ ಯೋಜನೆಯನ್ನು ತಕ್ಷಣವೇ ಕೈಬಿಡಬೇಕು. ಇಲ್ಲವಾದರೆ ಧರಣಿ ಕೂರುವ ನನ್ನ ನಿರ್ಧಾರ ಅಚಲ ಎಂದು ದೇವೇಗೌಡರು ಸರ್ಕಾರಕ್ಕೆ ಸ್ಪಷ್ಟ ಎಚ್ಚರಿಕೆ ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments