ನಲ್ಲಿ ನೀರಿನಲ್ಲಿ ಕಾಲು ತೊಳೆಯಬೇಡ ಅಂದಿದ್ದಕ್ಕೆ ಶುರುವಾದ ಜಗಳ ಪಿಜಿ ಮಾಲೀಕನ ಕೊಲೆಯಲ್ಲಿ ಅಂತ್ಯವಾದ ಭೀಕರ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಕಸ್ತೂರಿನಗರ ಮುಖ್ಯ ರಸ್ತೆಯಲ್ಲಿ ಭಾನುವಾರ ಸಂಜೆ ಪಿಜಿ ಮಾಲೀಕ ಮಾಧವ್ ಮೇಟ್ಲಿ (37) ಅವರನ್ನು ಕೊಲೆ ಮಾಡಲಾಗಿದೆ. ರಾಕೇಶ್ (21) ಹಾಗೂ ಡಾನ್ ಬ್ರೈಟ್ಸನ್ (20) ಕೊಲೆ ಆಋೋಪಿಗಳನ್ನು ರಾಮಮೂರ್ತಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನಲ್ಲಿ ನೀರಿನಲ್ಲಿ ಕಾಲು ತೊಳೆಯಬೇಡಿ ಎಂದಿದ್ದಕ್ಕೆ ಬ್ಯಾಟ್ನಿಂದ ಹೊಡೆದು ಪಿ.ಜಿ ಮಾಲೀಕನನ್ನು ಆರೋಪಿಗಳು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮದ್ಯಪಾನ ಮಾಡಿದ್ದ ಆರೋಪಿಗಳು ಭಾನುವಾರ ಸಂಜೆ 6 ಗಂಟೆ ಸುಮಾರಿಗೆ ಪಿ.ಜಿ ಆವರಣದೊಳಗೆ ಬಂದು ನಲ್ಲಿ ನೀರಿನಲ್ಲಿ ಕಾಲು ತೊಳೆದುಕೊಳ್ಳುತ್ತಿದ್ದರು. ಆ ಸಂದರ್ಭದಲ್ಲಿ ಪಿ.ಜಿ ಮಾಲೀಕ ಮಾಧವ್ ಆಕ್ಷೇಪ ವ್ಯಕ್ತಪಡಿಸಿದಾಗ ಗಲಾಟೆಯಾಗಿತ್ತು.
ಆರೋಪಿಗಳಿಗೆ ಹೊಡೆಯಲು ಮಾಧವ್ ಬ್ಯಾಟ್ ತಂದಿದ್ದರು. ಆದರೆ, ಪಾನಮತ್ತರಾಗಿದ್ದ ಆರೋಪಿಗಳು, ಮಾಧವ್ ಕೈಯಿಂದ ಬ್ಯಾಟ್ ಕಿತ್ತುಕೊಂಡು ಅವರ ಮೇಲೆ ಹಲ್ಲೆಗೈದಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಮಾಧವ್ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ. ಇಬ್ಬರೂ ಆರೋಪಿಗಳನ್ನು ರಾಮಮೂರ್ತಿ ನಗರ ಠಾಣೆ ಪೊಲೀಸರು ಬಂಧಿಸಿದ್ದು, ಹೆಚ್ಚಿನ ತನಿಖೆ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.



