ಕಾಂತಾರಾ ಚಾಪ್ಟರ್-1 ಚಿತ್ರದ ಕಂಟಕ ಮುಂದುವರಿದಿದ್ದು, ಹಾಸ್ಯ ಕಲಾವಿದ ರಾಕೇಶ್ ಪೂಜಾರಿ ನಿಧನದ ಬೆನ್ನಲ್ಲೇ ಮತ್ತೊಬ್ಬ ಕಲಾವಿದ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆಯಲ್ಲಿ ಗುರುವಾರ ಈ ದುರ್ಘಟನೆ ನಡೆದಿದ್ದು, ಕಲಾವಿದ ವಿ.ಕೆ. ವಿಜು ಹೃದಯಾಘಾತದಿಂದ ಅಸುನೀಗಿದ್ದಾರೆ.
ಕೇರಳದ ತ್ರಿಶೂಲ್ ಮೂಲದ ಜ್ಯೂನಿಯರ್ ಕಲಾವಿದ ವಿ.ಕೆ. ವಿಜು ಕಾಂತಾರಾ ಚಾಪ್ಟರ್-1 ಚಿತ್ರದ ಚಿತ್ರೀಕರಣಕ್ಕಾಗಿ ಆಗುಂಬೆಯ ಹೋಂಸ್ಟೇನಲ್ಲಿ ತಂಗಿದ್ದರು. ರಾತ್ರಿ ಏಕಾಏಕಿ ಎದೆನೋವು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ಸಾಗಿಸಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ಮುಂಜಾನೆ ಮೃತಪಟ್ಟಿದ್ದಾರೆ.
ಇದರೊಂದಿಗೆ ಕಾಂತಾರಾ ಚಿತ್ರದಲ್ಲಿ ಸರಣಿ ದುರಂತಗಳು ಮುಂದುವರಿಯುತ್ತಿದ್ದು, ವಿವಿಧ ಕಾರಣಗಳಿಂದ ಮೃತಪಟ್ಟವರ ಸಂಖ್ಯೆ 3ಕ್ಕೇರಿದೆ. ಕಾಕತಾಳೀಯ ಎಂಬಂತೆ ಒಂದೇ ದಿನಾಂಕದಲ್ಲಿ ರಾಕೇಶ್ ಪೂಜಾರಿ ಮತ್ತು ವಿಕೆ ವಿಜು ಮೃತಪಟ್ಟಿರುವುದು.
ಮೇ 12 ರಂದು ರಾಕೇಶ್ ಪೂಜಾರಿ ಅವರು ಹೃದಯಾಘಾತದಿಂದಲೇ ನಿಧನವಾಗಿದ್ದರು ಅದಾಗಿ ಸರಿಯಾಗಿ ಒಂದು ತಿಂಗಳ ಅಂತಾರದಲ್ಲಿ ಅಂದರೆ ಜೂನ್ 12ರಂದು ಮತ್ತೊಬ್ಬ ಕಲಾವಿದ ವಿಜು ವಿಕೆ ಎಂಬುವವರು ಶಿವಮೊಗ್ಗದ ಆಗುಂಬೆ ಹೋಂ ಸ್ಟೇನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಜೂನಿಯರ್ ಕಲಾವಿದ ಕಪಿಲ್ ಎಂಬುವವರು ತಿಂಗಳ ಹಿಂದೆ ಸೌಪರ್ಣಿಕ ನದಿಯಲ್ಲಿ ಈಜುಲು ಹೋಗಿ ಮುಳುಗಿ ಮೃತಪಟ್ಟರೆ, ಕಾಮಿಡಿ ಕಿಲಾಡಿಗಳು ಖ್ಯಾತಿಯ ರಾಕೇಶ್ ಪೂಜಾರಿ ಮದುವೆ ಸಮಾರಂಭದಲ್ಲಿ ಕುಣಿಯುವಾಗ ಹೃದಯಾಘಾತದಿಂದ ಮೃತಪಟ್ಟಿದ್ದರು. ಇದೀಗ ಈ ಸಾಲಿಗೆ ವಿಕೆ ವಿಜು ಸೇರ್ಪಡೆಯಾಗಿದ್ದಾರೆ.



