ಗೆಳೆಯನ ಪತ್ನಿ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಪ್ರಿಯಕರ 30 ವರ್ಷದ ಗೆಳೆತನ ಮೆರೆತು ಸ್ನೇಹಿತನನ್ನೇ ಭೀಕರವಾಗಿ ಕೊಲೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
39 ವರ್ಷದ ರಿಯಲ್ ಎಸ್ಟೇಟ್ ಉದ್ಯಮಿ ವಿಜಯ್ ಕುಮಾರ್ ಅಲಿಯಾಸ್ ಜಯ್ ಕುಮಾರ್ ಕೊಲೆಯಾಗಿದ್ದು, ಕಳೆದ 30 ವರ್ಷಗಳ ಸ್ನೇಹಿತ ಧನಂಜಯ ಕೊಲೆ ಮಾಡಿದ್ದಾನೆ.
ಮಾಗಡಿ ರಸ್ತೆಯ ಸುಂಕದಕಟ್ಟೆಯಲ್ಲಿ ಒಟ್ಟಿಗೆ ವಿಜಯ್ ಕುಮಾರ್ ಮತ್ತು ಧನಂಜಯ್ ಬೆಳೆದಿದ್ದರು. ವಿಜಯ್ ಕುಮಾರ್ 10 ವರ್ಷಗಳ ಹಿಂದೆ ಆಶಾಗಳನ್ನು ಮದುವೆ ಆಗಿದ್ದು, ಕಾಮಾಕ್ಷಿಪಾಳ್ಯದಲ್ಲಿ ವಾಸವಾಗಿದ್ದರು. ದಂಪತಿಗೆ ಒಂದು ಮಗುವೂ ಇತ್ತು. ಆದರೆ ಸ್ನೇಹಿತನಾಗಿದ್ದ ಧನಂಜಯ್ ಪದೇಪದೆ ಮನೆಗೆ ಬರುತ್ತಿದ್ದು ಆಶಾಳ ಜೊತೆ ಅಕ್ರಮ ಸಂಬಂಧ ಬೆಳೆಸಿದ್ದ.
ಇವರಿಬ್ಬರು ಆಕ್ಷೇಪಾರ್ಹ ಭಂಗಿಯಲ್ಲಿ ಇದ್ದ ಫೋಟೊಗಳನ್ನು ನೋಡಿದ ವಿಜಯ್ ಕುಮಾರ್ ಸ್ನೇಹಿತನ ಜೊತೆ ಜಗಳವಾಡಿ ಪತ್ನಿಯ ಜೊತೆ ಕಡಬಗೆರೆ ಬಳಿಯ ಮಾಚೋಹಳ್ಳಿಯಲ್ಲಿ ಬಾಡಿಗೆ ಮನೆ ಮಾಡಿ ಸ್ಥಳ ಬದಲಾಯಿಸಿದ್ದ. ಆದರೆ ಆಶಾಳನ್ನು ಬಿಟ್ಟಿರಲು ಆಗದ ಧನಂಜಯ್ ಆ ಮನೆಗೂ ಪದೇಪದೆ ಬರಲು ಆರಂಭಿಸಿದ. ಇದರಿಂದ ಸ್ನೇಹಿತರ ನಡುವೆ ದೊಡ್ಡ ಜಗಳವೇ ನಡೆದಿತ್ತು.
ಸೋಮವಾರ ವಿಜಯ್ ಸಂಜೆಯವರೆಗೂ ಮನೆಯಲ್ಲಿಯೇ ಇದ್ದು, ನಂತರ ಹೊರಗೆ ಹೋದಾಗ ಆಶಾ ಮತ್ತು ಧನಂಜಯ ನಡುವಿನ ಪಿತೂರಿಯ ಪರಿಣಾಮವೇ ಈ ಕೊಲೆ ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.
ಕೆಲಸದ ನಿಮಿತ್ತವಾಗಿ ಸಂಜೆ ಮನೆಯಿಂದ ಹೊರಗೆ ಹೋದ ವಿಜಯ್ ಕುಮಾರ್, ಮಾಚೋಹಳ್ಳಿಯ ಡಿ-ಗ್ರೂಪ್ ಲೇಔಟ್ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ನೆಲಮಂಗಲ ಬಳಿಯ ಕಡಬಗೆರೆ ಕ್ರಾಸ್ನ ಜಯಪ್ರಿಯ ಅಪಾರ್ಟ್ಮೆಂಟ್ ಬಳಿ ಆಶಾ ಹಾಗೂ ಧನಂಜಯ್ ಸೇರಿ ಕೊಲೆ ಮಾಡಿ ಪರಾರಿಯಾಗಿದ್ದರು ಎನ್ನಲಾಗಿದೆ.
ಮಾದನಾಯಕನಹಳ್ಳಿ ಪೊಲೀಸರು ಆಶಾಳನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಕಾಣೆಯಾಗಿರುವ ಧನಂಜಯನಿಗಾಗಿ ಹುಡುಕಾಟ ನಡೆಸಿದ್ದಾರೆ.



