Thursday, May 14, 2026
Google search engine
Homeರಾಜಕೀಯಬಿಜೆಪಿ ಕಾರ್ಯಕರ್ತೆಯ ವಿವಸ್ತ್ರ ಪ್ರಕರಣದಲ್ಲಿ ಕಾಂಗ್ರೆಸ್ ನಿಂದ ವಿಡಿಯೋ ಬ್ಲಾಕ್ ಮೇಲ್: ಬಿಜೆಪಿ ನಾಯಕರು ಕಿಡಿ

ಬಿಜೆಪಿ ಕಾರ್ಯಕರ್ತೆಯ ವಿವಸ್ತ್ರ ಪ್ರಕರಣದಲ್ಲಿ ಕಾಂಗ್ರೆಸ್ ನಿಂದ ವಿಡಿಯೋ ಬ್ಲಾಕ್ ಮೇಲ್: ಬಿಜೆಪಿ ನಾಯಕರು ಕಿಡಿ

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿದ ವಿಚಾರ ದೇಶದ ಸುದ್ದಿಯಾಗಿದೆ. ಜನರು ಇದರ ಸತ್ಯಾಂಶ ತಿಳಿಯಲು ಬಯಸುತ್ತಿದ್ದಾರೆ. ಆದ್ದರಿಂದ ಘಟನೆಯ ನ್ಯಾಯಾಂಗ ತನಿಖೆ ಮಾಡಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಆಗ್ರಹಿಸಿದ್ದಾರೆ.

ಮಹಿಳೆಯನ್ನು ವಿವಸ್ತ್ರಗೊಳಿಸಿದ ಪ್ರಕರಣ ಸಂಬಂಧ ಆರ್. ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಧಾನಪರಿಷತ್ ಸದಸ್ಯರಾದ ಶ್ರೀಮತಿ ಭಾರತಿ ಶೆಟ್ಟಿ ಅವರು ಇಂದು ಸಂತ್ರಸ್ತ ಮಹಿಳೆಯ ಮನೆಗೆ ಭೇಟಿ ನೀಡಿದ್ದರು. ಬಳಿಕ ಆರ್.ಅಶೋಕ್ ಅವರು ಮಾಧ್ಯಮಗಳ ಜೊತೆ ಮಾತನಾಡಿದರು.

ಆ ಹೆಣ್ಮಗಳೇ ಬಟ್ಟೆ ಬಿಚ್ಚಿಕೊಂಡಿದ್ದಾರೆ ಎನ್ನುತ್ತಾರೆ. ಹಾಗಿದ್ದರೆ ಪೊಲೀಸರು ಕತ್ತೆ ಕಾಯುತ್ತಿದ್ದರೇ? 40 ಜನ ಪೊಲೀಸರು, ವ್ಯಾನ್ ನಿಮ್ಮದೇ, ಚಾಲಕನೂ ನಿಮ್ಮವನೇ, ಪೊಲೀಸ್- ಕಾನೂನು ನಿಮ್ಮದೇ ಇರುವಾಗ ನಿಮ್ಮಿಂದ ತಡೆಯಲಾಗಲಿಲ್ಲವೇ ಎಂದು ಕೇಳಿದರು. ಇದು ಶುದ್ಧ ಸುಳ್ಳು ಎಂದರು. ಯಾವ ಪೊಲೀಸರು ಇವತ್ತು ಕಳ್ಳತನ ಮಾಡಲು ಇಳಿದಿದ್ದಾರೆ; 7 ಕೋಟಿ ಬ್ಯಾಂಕ್ ದರೋಡೆ ಮಾಡಿದ್ದು ನಮಗೆಲ್ಲ ಗೊತ್ತಿರುವ ಘಟನೆ. ಅದೇ ಪೊಲೀಸರು ದುಶ್ಶಾಸನನ ರೀತಿಯಲ್ಲಿ ಹಲ್ಲೆ ಮಾಡಿ ವಿವಸ್ತ್ರಗೊಳಿಸಿದ ಘಟನೆ ನಡೆದಿದೆ ಎಂದು ಟೀಕಿಸಿದರು.

ಇದರ ತನಿಖೆ ಆಗಲಿ ಎಂದ ಅವರು, ಮಹಿಳಾ ಪರ ವಾದ ಮಾಡಬೇಕಾದ ರಾಜ್ಯ ಮಹಿಳಾ ಆಯೋಗದವರು ಏನೂ ಆಗಿಲ್ಲವೆಂದು ಬೆಂಗಳೂರಿನಲ್ಲೇ ಹೇಳಿಕೆ ಕೊಟ್ಟಿದ್ದಾರೆ ಎಂದು ಆಕ್ಷೇಪಿಸಿದರು. ರಾಷ್ಟ್ರೀಯ ಮಹಿಳಾ ಆಯೋಗ ನೋಟಿಸ್ ಕೊಟ್ಟಿದೆ ಎಂದರು. ತನಿಖೆ ಮಾಡದೇ ನೀವು ಕ್ಲೀನ್ ಚಿಟ್ ಕೊಟ್ಟಿದ್ದು ಹೇಗೆ ಎಂದು ಸರಕಾರ, ಪೊಲೀಸ್ ಇಲಾಖೆಯು ಉತ್ತರಿಸಲಿ ಎಂದು ಆಗ್ರಹಿಸಿದರು.

ಒಬ್ಬರನ್ನು ಕರೆದೊಯ್ಯಲು 40 ಜನರು ಬೇಕಾಗಿದ್ದರೇ? ಯಾರ ಒತ್ತಡದ ಮೇಲೆ ಇದನ್ನು ಮಾಡಿದ್ದೀರಿ? ಯಾರ ಸೂಚನೆ ಇತ್ತು? ಎಂದು ಕೇಳಿದರು. ಇದನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿ ಎಂದರು. ಅದುವರೆಗೂ ಪೊಲೀಸ್ ಇನ್‍ಸ್ಪೆಕ್ಟರನ್ನು ಅಮಾನತುಗೊಳಿಸಿ; ವ್ಯಾನ್ ಒಳಗಿದ್ದವರನ್ನೂ ಅಮಾನತು ಮಾಡಿ ಎಂದು ಒತ್ತಾಯಿಸಿದರು.

ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ,  ಮಾತನಾಡಿ, ಸುಜಾತ ಹಂಡಿ ಅವರನ್ನು ಬಂಧಿಸಲು ಕೌನ್ಸಿಲರ್ ದೂರು ಕೊಟ್ಟಿದ್ದರು. ಇನ್‍ಸ್ಪೆಕ್ಟರ್ ಅವರು ಬಂಧನ ಸಂಬಂಧ ಸುಮಾರು ಜನರನ್ನು ಕರೆದೊಯ್ದಾಗ ಆದ ಘಟನೆ ಎಂಥದ್ದೆಂದು ಪೊಲೀಸರು ತನಿಖೆ ಮಾಡಿ ಹೇಳಲಿ ಎಂದು ಆಗ್ರಹಿಸಿದರು.

ಇಡೀ ದೇಶದಲ್ಲಿ ಇದೊಂದು ತಲೆತಗ್ಗಿಸುವ ಘಟನೆ ಎಂದು ರಾಷ್ಟ್ರೀಯ ಮಹಿಳಾ ಆಯೋಗವು ಕೂಡ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ನೋಟಿಸ್ ಕೊಟ್ಟಿದೆ. ಇದರ ಕುರಿತು ಪರಿಶೀಲಿಸುವುದು ನಮ್ಮ ಧರ್ಮ ಎಂದು ನುಡಿದರು. ಒಂದು ವಿಡಿಯೋ ಇವತ್ತು ಹರಿದಾಡುತ್ತಿದ್ದು ಇದನ್ನು 3-4 ವರ್ಷಗಳ ಹಿಂದೆ ಕೌನ್ಸಿಲರ್ ಮತ್ತು ಹಂಡಿಯವರು ಒಟ್ಟಿಗೆ ಇದ್ದಾಗ ನಡೆದ ಘಟನೆ ಎಂಬುದು ಈಗ ಹೊರಕ್ಕೆ ಬರುತ್ತಿದೆ. ಈ ವಿಡಿಯೋ ಕಾಂಗ್ರೆಸ್ಸಿನ ನೀತಿಯನ್ನು ಸ್ಪಷ್ಟವಾಗಿ ಹೊರಹಾಕಿದೆ. ಇನ್ನು ಮುಂದೆ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಪಕ್ಷದ ನಾಯಕರ ಜೊತೆ ಬಹಳ ಹುಶಾರಾಗಿರಬೇಕು. ನಿಮ್ಮಿಂದ ತಪ್ಪು ಮಾಡಿಸಿ ನಿಮ್ಮ ವಿಡಿಯೋ ಇಟ್ಟುಕೊಂಡಿರುತ್ತಾರೆ. ಪಾರ್ಟಿ ಬಿಟ್ಟರೆ ಅಥವಾ ವಿರೋಧ ಮಾಡಿದಾಗ ಹೊರಕ್ಕೆ ಬಿಡುತ್ತಾರೆ ಎಂಬುದು ಸ್ಪಷ್ಟಗೊಂಡಿದೆ ಎಂದರು. ಕಾಂಗ್ರೆಸ್ ನಾಯಕರು ತಮ್ಮ ಪಕ್ಷದ ಕಾರ್ಯಕರ್ತರ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್‍ಮೇಲ್ ಮಾಡುವ ಕೆಲಸ ಮಾಡುತ್ತಾರೆ. ಕಾಂಗ್ರೆಸ್ ಕಾರ್ಯಕರ್ತರು ಎಚ್ಚರದಿಂದಿರಿ ಎಂದು ಕಿವಿಮಾತು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments