ಜಾತಿ ರಹಿತ ಸಮಾಜದ ಹೆಸರಿನಲ್ಲಿ ಸಮಾಜ ಮತ್ತೆ ಹಿಮ್ಮುಖವಾಗಿ ಹೋಗಬೇಕೆ ಎಂದು ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಹೊಸ ನಿಯಮಗಳ ಕುರಿತು ಕೇಂದ್ರ ಸರ್ಕಾರವನ್ನು ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಮುಖ್ಯನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠ ಗುರುವಾರ 2026ರ ಹೊಸ ನಿಯಮಗಳ ಜಾರಿಗೆ ತಡೆ ನೀಡಿದ್ದು, 2012ರ ಯುಜಿಸಿ ನಿಯಮಗಳು ಮುಂದಿನ ಆದೇಶದವರೆಗೂ ಮುಂದುವರಿಸಲು ಸೂಚಿಸಿತು.
ಯುಜಿಸಿ ಹೊಸ ನಿಯಮಗಳಲ್ಲಿ ಜಾತಿ ರಹಿತ ಸಮಾಜ ಕಟ್ಟುವ ಉದ್ದೇಶದಿಂದ ಬದಲಾವಣೆ ತರಲಾಗುತ್ತದೆ ಎಂಬ ಕೇಂದ್ರ ವಾದವನ್ನು ತಿರಸ್ಕರಿಸಿದ ಸುಪ್ರೀಂಕೋರ್ಟ್, ಭಾರತ ಹಿಮ್ಮುಖವಾಗಿ ಚಲಿಸುತ್ತಿದೆಯೇ ಎಂದು ಕಳವಳ ವ್ಯಕ್ತಪಡಿಸಿತು.
75 ವರ್ಷಗಳ ನಂತರ, ಜಾತಿರಹಿತ ಸಮಾಜವನ್ನು ಸಾಧಿಸುವ ವಿಷಯದಲ್ಲಿ ನಾವು ಏನನ್ನು ಸಾಧಿಸಿದ್ದೇವೆಯೋ, ಅದು ಈಗ ಹಿಮ್ಮುಖ ದಿಕ್ಕಿನಲ್ಲಿ ಸಾಗುತ್ತಿದ್ದೇವೆಯೇ ಎಂದು ಅನಿಸುತ್ತಿದೆ. ಭಾರತೀಯ ಸಂಸ್ಥೆಗಳಲ್ಲಿ ಒಳಗೊಳ್ಳುವಿಕೆ ಮತ್ತು ಏಕತೆ ಕಾಪಾಡುವ ಅಗತ್ಯ ಇಂದಿಗೂ ಇದೆ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿತು.
ನಾನು ಜಾತಿರಹಿತ ಸಮಾಜದ ಕಡೆ ಮುಂದೆ ಹೆಜ್ಜೆ ಹಾಕಬೇಕಿದೆ. ಆದರೆ ಆಡಳಿತ ಯಂತ್ರ ಸಾರಾಗವಾಗಿ ನಡೆಯಬೇಕಾದರೆ ಶೋಷಿತರಿಗೆ ರಕ್ಷಣೆ ಬೇಕಾಗಿದೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿತು.
ಅಮೆರಿಕದಲ್ಲಿ ಐತಿಹಾಸಿಕವಾಗಿ ಪ್ರತ್ಯೇಕಿಸಲಾದ ಶಾಲೆಗಳಂತಹ ವ್ಯವಸ್ಥೆಗಳನ್ನು ಪುನರಾವರ್ತಿಸುವ ಅಪಾಯಗಳನ್ನು ಎತ್ತಿ ತೋರಿಸಿದ ಸುಪ್ರೀಂ ಕೋರ್ಟ್, “ನಾವು ಶಾಲೆಗಳನ್ನು ಪ್ರತ್ಯೇಕಿಸುವ ಹಂತಕ್ಕೆ ಹೋಗಬಾರದು, ಅಮೆರಿಕದಲ್ಲಿ ಬಿಳಿಯ ಮಕ್ಕಳು ಸಹ ಬೇರೆ ಬೇರೆ ಶಾಲೆಗಳಿಗೆ ಹೋಗುತ್ತಾರೆ” ಎಂದು ಹೇಳಿದೆ.
ಭಾರತದ ಏಕತೆ ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಪ್ರತಿಫಲಿಸಬೇಕು. ಈ ಮೂಲಕ ಶಿಕ್ಷಣದಲ್ಲಿ ಏಕತೆಯ ಮಹತ್ವವನ್ನು ನ್ಯಾಯಾಲಯ ಒತ್ತಿ ಹೇಳಿತು.



