ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್ ಚಾಲಕರು ಎರಡು ಸಲ ಅಪಘಾತವೆಸಗಿ, ತಪ್ಪು ಸಾಬೀತಾದರೇ ಕೆಲಸದಿಂದಲೇ ವಜಾ ಮಾಡುವ ಕಠಿಣ ನಿರ್ಧಾರವನ್ನು ಸಂಸ್ಥೆ ಕೈಗೊಂಡಿದೆ.
ಬಸ್ ಚಾಲನೆ ವೇಳೆ ಮೊಬೈಲ್ ನಲ್ಲಿ ಚಾಲಕ ಮಾತನಾಡಿದರೇ ಕೆಲಸದಿಂದ ಅಮಾನತು ಮಾಡಲಾಗುತ್ತದೆ. ಈ ಹೊಸ ನಿಯಮ ಶುಕ್ರವಾರ ಜಾರಿಯಾಗಲಿದೆ ಎಂದು ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕ ಪ್ರಭಾಕರ್ ರೆಡ್ಡಿ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೊದಲ ಸಲ ಅಪಘಾತವೆಸಗಿದ್ದರೇ 6 ತಿಂಗಳು ಅಮಾನತು ಮಾಡುತ್ತೇವೆ. ಅಮಾನತು ಅವಧಿ ಮುಗಿದ ಮೇಲೆ ತರಬೇತಿ ನೀಡಿ ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳುತ್ತೇವೆ. ಮೊದಲ ಸಲ ಅಪಘಾತವೆಸಗಿದ ಚಾಲಕರಿಗೆ ಮೂರು ಇನ್ಕ್ರಿಮೆಂಟ್ ಕಡಿತಗೊಳಿಸಲಾಗುತ್ತದೆ. ಎರಡನೇ ಸಲ ಅಪಘಾತವೆಸಗಿದರೆ ಬಿಎಂಟಿಸಿ ಸಂಸ್ಥೆಯಿಂದಲೇ ವಜಾ ಮಾಡಲಾಗುತ್ತದೆ ಎಂದರು.
ಚಾಲಕರಿಗೆ ವಿಶೇಷ ತರಬೇತಿ
ಎಲೆಕ್ಟ್ರಿಕ್ ಬಸ್ ಚಾಲಕರು ಚಾಲನೆ ವೇಳೆ ವೇಳೆ ಫೋನ್ನಲ್ಲಿ ಮಾತಾಡಿದರೇ, ಬಸ್ ಕಂಪನಿಗೆ 5 ಸಾವಿರ ರೂಪಾಯಿ ದಂಡ,15 ದಿನಗಳ ಕಾಲ ಅಮಾನತು ಮಾಡಲಾಗುತ್ತದೆ. ಸೋಮವಾರದಿಂದ ಬಿಎಂಟಿಸಿ ಚಾಲಕರಿಗೆ ವಿಶೇಷ ತರಬೇತಿ ನೀಡಲಾಗುತ್ತದೆ. ಚಾಲಕರಿಗೆ ಯೋಗ ತರಬೇತಿ ನೀಡಲಾಗುತ್ತದೆ.
ಮಾರ್ಗಸೂಚಿಯಲ್ಲಿ ಏನಿದೆ?
ಬೆಂಗಳೂರು ಮಹಾನಗರವು ಅಧಿಕ ಸಂಚಾರ ದಟ್ಟಣೆಯಿಂದ ಕೂಡಿದ್ದು, ಲಕ್ಷಾಂತರ ಜನರು ಸಂಸ್ಥೆಯ ವಾಹನಗಳಲ್ಲಿ ಪ್ರಯಾಣಿಸುತ್ತಿದ್ದು, ಸದರಿ ಪ್ರಯಾಣಿಕರ ಸುರಕ್ಷತೆಯ ಜೊತೆಗೆ ಸಹ ಸವಾರ ಸಾರ್ವಜನಿಕರ ಸುರಕ್ಷತೆಯು ಸಂಸ್ಥೆಯ ಆದ್ಯ ಕರ್ತವ್ಯವಾಗಿರುತ್ತದೆ.
ಬೆಂಗಳೂರು ಮಹಾನಗರದಲ್ಲಿ ಈಗಾಗಲೇ ಮಳೆಗಾಲ ಆರಂಭವಾಗಿದ್ದು, ರಸ್ತೆಗಳಲ್ಲಿ ನೀರು ನಿಲ್ಲುವುದು, ರಸ್ತೆ ಗುಂಡಿಗಳು ದುರಸ್ಥಿ ಹಾಗೂ ಇನ್ನಿತರ ಕಾರಣಗಳಿಂದ ಸಂಸ್ಥೆಯ ವಾಹನಗಳಿಂದ, ಸಂಭವಿಸುವ ಅಪಘಾತ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅಪಘಾತಗಳಲ್ಲಿ ದ್ವಿಚಕ್ರ ವಾಹನ ಸವಾರ, ಪಾದಚಾರಿ ಹಾಗೂ ಬಸ್ಸಿಗೆ ಹತ್ತುವ-ಇಳಿಯುವ ಪ್ರಯಾಣಿಕರು ಭಾಗಿಯಾಗಿರುವುದು ಕಂಡುಬಂದಿರುತ್ತದೆ.
ವಿಭಾಗೀಯ ನಿಯಂತ್ರಣಾಧಿಕಾರಿಗಳು, ವಿಭಾಗೀಯ ಸಂಚಾರ ಅಧಿಕಾರಿಗಳು, ಘಟಕ ವ್ಯವಸ್ಥಾಪಕರು ಘಟಕಗಳಲ್ಲಿ ದ್ವಾರ ಸಭೆಯ ಮೂಲಕ ಪ್ರತಿ ದಿನ ಬೆಳಿಗ್ಗೆ, ಮಧ್ಯಾಹ್ನ, ಸಾಯಂಕಾಲ ಚಾಲನಾ ಸಿಬ್ಬಂದಿಗಳಿಗೆ ಸುರಕ್ಷಿತ ಚಾಲನೆಗೆ ಸಂಬಂಧ ಕೆಲ ಅಂಶಗಳ ಕುರಿತು ಅರಿವು ಮೂಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಸುರಕ್ಷಿತ ಚಾಲನೆ ವಿವರ:
ವಾಹನಗಳ ನಡುವೆ ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು̤
ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸಬೇಕು.
ಸಂಚಾರ ನಿಯಮಗಳ ಉಲ್ಲಂಘನೆಯಿಂದ ಉಂಟಾಗುವ ಅನಾನುಕೂಲಗಳ ಬಗ್ಗೆ ಗಮನವಿರಬೇಕು.
ವಾಹನದ ಬ್ರೇಕ್, ಹೆಡ್ಲೈಟ್, ವೈಪರ್ಗಳು ಸುಸ್ಥಿತಿಯಲ್ಲಿರುವಂತೆ ಕ್ರಮವಹಿಸಬೇಕು.
ರಸ್ತೆಯಲ್ಲಿರುವ ರಸ್ತೆ ಉಬ್ಬುಗಳನ್ನು ಹಾಗೂ ರಸ್ತೆ ಗುಂಡಿಗಳನ್ನು ಗಮನಿಸಿ ಸುರಕ್ಷಿತವಾಗಿ ಚಾಲನೆ ಮಾಡಬೇಕು.
ಇಳಿಜಾರು, ರಸ್ತೆ ತಿರುವುಗಳಲ್ಲಿ ಎಚ್ಚರಿಕೆಯಿಂದ ಬ್ರೇಕ್, ಇಂಡಿಕೇಟರ್ ಹಾಗೂ ಪಾರ್ಕಿಂಗ್ ಲೈಟ್ಗಳ ಉಪಯೋಗ ಮಾಡಬೇಕು.
ರಾತ್ರಿ ವೇಳೆಯಲ್ಲಿ ಸೂಕ್ತ ಎಚ್ಚರಿಕೆ ಸಂಜ್ಞೆಗಳಿಲ್ಲದೆ ನಿಂತ ವಾಹನಗಳ ಬಗ್ಗೆ ಎಚ್ಚರಿಕೆ ವಹಿಸಬೇಕು.
ಕರ್ತವ್ಯ ನಿರತ ಸಮಯದಲ್ಲಿ ಚಾಲನಾ ಸಿಬ್ಬಂದಿಗಳು ಮೊಬೈಲ್ ಬಳಬಾರದು .
ಬಸ್ ನಿಲ್ದಾಣಗಳಲ್ಲಿ ಬಾಗಿಲು ತೆರೆದು ಚಲಿಸುತ್ತಿರುವ ಬಸ್ನ್ನು ಪ್ರಯಾಣಿಕರು ಇಳಿಯಲು/ಹತ್ತಲು ಪ್ರಯತ್ನಿಸಿ ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ಹಿಂದಿನ ಚಕ್ರಕ್ಕೆ ಸಿಲುಕಿ ಅಪಘಾತವಾಗಿರುವ ಪ್ರಕರಣಗಳು ಹೆಚ್ಚಾಗಿ ಕಂಡುಬಂದಿದೆ.
ನಿಗದಿತ ಬಸ್ ನಿಲ್ದಾಣಗಳಲ್ಲಿ ಬಸ್ನ್ನು ನಿಲ್ಲಿಸಿ, ಪ್ರಯಾಣಿಕರನ್ನು ಇಳಿಸಿ ಬಸ್ ಹತ್ತಿಸಿಕೊಂಡು ಬಾಗಿಲು ಮುಚ್ಚಿದ ನಂತರವೇ ವಾಹನವನ್ನು ಚಾಲನೆ ಮಾಡಬೇಕು.
ವಾಹನವನ್ನು ರಸ್ತೆಯ ಮಧ್ಯದಲ್ಲಿ ಟ್ರಾಫಿಕ್ ಸಿಗ್ನಲ್ನಲ್ಲಿ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸಿ ಹತ್ತಿಸಿ ಕೊಳ್ಳುವುದನ್ನು ನಿಷೇಧಿಸಿದ್ದು, ಕಟ್ಟುನಿಟ್ಟಾಗಿ ಪಾಲಿಸಬೇಕು.
ಶಾಲೆ, ಆಸ್ಪತ್ರೆ, ತಿರುವು, ಏರು ರಸ್ತೆ ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಎಚ್ಚರ ವಹಿಸಿ ಚಾಲನೆ ಮಾಡಬೇಕು.
ಬಸ್ಸನ್ನು ಎಡಕ್ಕೆ-ಬಲಕ್ಕೆ ತಿರುಗಿಸುವಾಗ ಅಥವಾ ನಿಲ್ಲಿಸುವಾಗ ಎರಡೂ ಕಡೆಯ ಸೈಡ್ ಮಿರರ್ ಅನ್ನು ಗಮನಿಸಿ ಎಚ್ಚರಿಕೆಯಿಂದ ವಾಹನವನ್ನು ಚಾಲನೆ ಮಾಡಬೇಕು.
ವಾಹನಗಳ ಎಡಭಾಗದಿಂದ ಮುನ್ನುಗ್ಗಬಾರದು.
ಬಲ ಭಾಗದಲ್ಲಿ ವೇಗವಾಗಿ ಚಲಿಸುವ ವಾಹನಗಳಿಗೆ ದಾರಿ ಬಿಡಬೇಕು.
ಪಥ ನಿಯಮ ಪಾಲಿಸಿ, ಏಕಮುಖ ಸಂಚಾರದ ರಸ್ತೆಯಲ್ಲಿ ಸುರಕ್ಷತೆಯಿಂದ ಚಾಲನೆ ಮಾಡಬೇಕು.
ಮಳೆ, ಗಾಳಿ ಸಮಯದಲ್ಲಿ ವಾಹನವನ್ನು ನಿಗದಿತ ವೇಗದಲ್ಲಿ ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಬೇಕು.
ಬಸ್ ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಂಚಾರ ಸಿಬ್ಬಂದಿಗಳು ಬಸ್ ನಿಂತ ನಂತರ, ಬಾಗಿಲು ತೆರೆದು ಹಾಗೂ ಹೊರಟ ನಂತರ ಬಾಗಿಲು ಮುಚ್ಚುವುದನ್ನು ಮೇಲ್ವಿಚಾರಣೆ ಮಾಡಬೇಕು.
ಬಸ್ ನಿಲ್ದಾಣದ ತಿರುವುಗಳಲ್ಲಿ ಸಂಚರಿಸುವ ಪಾದಚಾರಿ ಪ್ರಾಯಾಣಿಕರನ್ನು ಗಮನಿಸಿ ಸಂಚರಿಸಿದಂತೆ ಅರಿವು ಮೂಡಿಸುವುದು.



