ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು ಕೂಲಿ ಕಾರ್ಮಿಕನನ್ನು ಯುವಕರು ಹೊಡೆದು ಕೊಲೆ ಮಾಡಿದ ಭೀಕರ ಘಟನೆ ಮೈಸೂರು ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ನಡೆದಿದೆ.
ಗುಂಡ್ಲುಪೇಟೆ ಪಟ್ಟಣದ ಜನತಾ ಕಾಲೋನಿಯ ನಿವಾಸಿ ಶಿವು (36) ಎಂಬಾತನನ್ನು ಕೊಲೆ ಮಾಡಲಾಗಿದೆ.
ಮೃತ ವ್ಯಕ್ತಿ ಗಾರೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದು ಕಳೆದ ಸೋಮವಾರ ತಡರಾತ್ರಿ ಮನೆಯಿಂದ ಹೊರಗಡೆ ತೆರಳಿದ್ದ ಸಮಯದಲ್ಲಿ ಪಟ್ಟಣದ ಊಟಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಬಳಿ ಇರುವ ಶ್ರೀ ಮದ್ದಾನೇಶ್ವರ ಶಾಲೆಯ ಬಳಿ ಇಬ್ಬರು ಯುವಕರು ಕೆಲಸದ ವಿಚಾರದಲ್ಲಿ ಶಿವು ಮೇಲೆ ಜಗಳ ತೆಗೆದು ಮಾತಿನ ಚಕುಮುಕಿ ನಡೆದು ಮಾರಾಣಾಂತಿಕ ಹಲ್ಲೆ ನಡೆಸಿದ್ದಾರೆ.
ಹಲ್ಲೆಯಿಂದ ಎದೆ, ಮುಖ, ಕಿವಿಗೆ ತೀವ್ರ ಪೆಟ್ಟಾಗಿದ್ದ ಶಿವು ನೋವಿನಲ್ಲಿಯೇ ಮನೆಗೆ ಮರಳಿದ್ದಾನೆ. ತಕ್ಷಣ ಶಿವು ಪೋಷಕರು ಚಿಕಿತ್ಸೆ ಕೊಡಿಸಲು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಷ್ಟರಲ್ಲಾಗಲೇ ಶಿವು ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದ್ದಾರೆ.
ಈಗಾಗಲೇ ಪ್ರಕರಣ ದಾಖಲಿಸಿ ಕೊಂಡ ಪಟ್ಟಣ ಪೋಲೀಸರು ಘಟನೆಗೆ ಸಂಬಂಧಿಸಿದಂತೆ ಶಿವು ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪದಡಿ ಪಟ್ಟಣದ ನಿವಾಸಿ ನಿಜಾಮುದ್ದೀನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಮತ್ತೊಬ್ಬ ಆರೋಪಿ ಪತ್ತೆಗೆ ಶೋಧ ಕಾರ್ಯ ನಡೆದಿದೆ.
ಮೃತಪಟ್ಟ ವ್ಯಕ್ತಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಚಾಮರಾಜನಗರ ಸರ್ಕಾರಿ ವೈದ್ಯಕೀಯ ಭೋದನಾ ಆಸ್ಪತ್ರೆಗೆ ರವಾನಿಸಲಾಯಿತು. ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.


