ಪ್ರಿಯಕರನ ಜೊತೆಗೂಡಿ ಗಂಡನನ್ನು ಕೊಂದು ಸುಳಿವು ಸಿಗಬಾರದು ಎಂದು ಶವವನ್ನು ಸುಟ್ಟುಹಾಕಿ ಧರ್ಮಸ್ಥಳಕ್ಕೆ ಹೋಗಿದ್ದಾನೆ ಎಂದು ಕತೆ ಕಟ್ಟಿದ ಪತ್ನಿ ಮಾರನೇ ದಿನ ನಾಗರಪಂಚಮಿ ಹಬ್ಬವನ್ನು ಆಚರಿಸಿದ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಬುದಗೂಂಪದಲ್ಲಿ ಪತಿ ದ್ಯಾಮಣ್ಣ ವಜ್ರಬಂಡಿ (38) ನನ್ನು ಪತ್ನಿ ನೇತ್ರಾವತಿ ಹಾಗೂ ಮೂರು ಮಕ್ಕಳ ತಂದೆಯಾದ ಪ್ರಿಯಕರ ಶಾಮಣ್ಣ ಜೊತೆಗೂಡಿ ಕೊಲೆ ಮಾಡಿ ಗಂಡನ ಮನೆಯವರಿಗೆ ಧರ್ಮಸ್ಥಳಕ್ಕೆ ಹೋಗಿರುವುದಾಗಿ ಕತೆ ಕಟ್ಟಿದ್ದಾರೆ.
ಜುಲೈ 25ರಂದು ಜಮೀನಿನಲ್ಲಿ ರಾಡ್ ನಿಂದ ಹಲ್ಲೆ ನಡೆಸಿ ದ್ಯಾಮಣ್ಣನನ್ನು ಕೊಲೆ ಮಾಡಿ 5 ಕಿಲೋ ಮೀಟರ್ ದೂರದವರೆಗೆ ಶವ ಹೊತ್ತೊಯ್ದು ಪೆಟ್ರೋಲ್ ಸುರಿದು ಶವ ಸುಟ್ಟು ಹಾಕಿದ್ದಾರೆ.
ಆರೋಪಿ ಶ್ಯಾಮಣ್ಣ ಮತ್ತು ನೇತ್ರಾವತಿ ಕಾಮನೂರ ನಿವಾಸಿಗಳಾಗಿದ್ದಾರೆ. ನೇತ್ರಾವತಿಯನ್ನು ಬೂದಗುಂಪ ಗ್ರಾಮದ ದ್ಯಾಮಣ್ಣ ಜೊತೆ ಮದುವೆ ಆಗಿತ್ತು. ನೇತ್ರಾವತಿ ಹಾಗೂ ಶ್ಯಾಮಣ್ಣ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಾನೆಂದು ಪತಿಯನ್ನು ಇಬ್ಬರೂ ಸೇರಿ ಕೊಲೆ ಮಾಡಿದ್ದಾರೆ.
ಜುಲೈ 25ರಂದು ಕೊಲೆ ಮಾಡಿ 5 ದಿನ ಮನೆಯಲ್ಲೇ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಇದ್ದ ನೇತ್ರಾವತಿಯನ್ನು ದ್ಯಾಮಣ್ಣನ ಮನೆಯವರು ವಿಚಾರಿಸಿದಾಗ ಪತಿ ಧರ್ಮಸ್ಥಳಕ್ಕೆ ಹೋಗಿದ್ದಾರೆಂದು ಕಥೆ ಕಟ್ಟಿದ್ದಳು.
ಅನುಮಾನಗೊಂಡ ದ್ಯಾಮಣ್ಣ ಸಹೋದರರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ವಿಚಾರಣೆ ನಡೆಸಿದ ಬಳಿಕ ನೇತ್ರಾವತಿ ಸತ್ಯ ಒಪ್ಪಿಕೊಂಡಿದ್ದಾಳೆ. ನೇತ್ರಾವತಿ ಹಾಗೂ ಶ್ಯಾಮಣ್ಣನನ್ನು ಪೊಲೀಸರು ಬಂಧಿಸಿದ್ದಾರೆ.
ಅಪರಿಚಿತ ಶವ ಪತ್ತೆಯಾದಾಗ ಗುರುತು ಸಿಗದ ಹಿನ್ನೆಲೆ ಕೊಪ್ಪಳ ಮುನಿರಾಬಾದ್ ಪೊಲೀಸರೇ ಶವ ಸಂಸ್ಕಾರ ಮಾಡಿದ್ದರು. ಗುರುವಾರ ವಿಷಯ ತಿಳಿದ ಬಳಿಕ ದ್ಯಾಮಣ್ಣ ಕುಟುಂಬಸ್ಥರು ಶವಕ್ಕೆ ಮಣ್ಣು ಹಾಕಿ ಶಾಸ್ತ್ರ ನೆರವೇರಿಸಿದ್ದಾರೆ.


