ಆಹಾ! ಎಲ್ಲೆಡೆ ಮಾವಿನ ಘಮಲು ಹರಡಲು ಆರಂಭವಾಗುತ್ತಿದೆ. ಮಾವನ್ನು ಖರೀದಿಸಲು ಅಂಗಡಿಗಳಿಗೆ ಮುಗಿ ಬೀಳುವ ಸಮಯ. ಆದರೆ ಮಾವು ಸವಿಯುವ ಮುನ್ನ ಆರೋಗ್ಯದ ಮೇಲೂ ಕಾಳಜಿ ವಹಿಸಿದರೆ ಒಳಿತಲ್ಲವೇ…!
ಮಲ್ಗೋವಾ ಕೆ.ಜಿ.ಗೆ 90 ರಿಂದ 120 ರೂ.ಗಳಿದ್ದರೆ, ರಸಪುರಿ ಮತ್ತು ಬಾದಾಮಿ 80-90 ರೂಗಳಿವೆ. ಇನ್ನುಳಿದಂತೆ ಮಲ್ಲಿಕ, ತೋತಾಪುರಿ, ಅಪ್ಪೆಮಿಡಿ, ಸೇಂಧೂರ, ವಾಲಜಾ, ಬೈಗನಪಲ್ಲಿ, ಕೇಸರ್, ರತ್ನಗಿರಿ ಹಣ್ಣುಗಳ ಮಾರಾಟ ವಿರಳವಾಗಿದ್ದರೂ ಬೆಲೆಗಳು ಮಾತ್ರ ಗಗನಮುಖಿಯಾಗಿ ಕೈ ಸುಡುತ್ತಿದೆ. ಆದ್ರೂ ಸಹ ಕೊಂಡು ಕೊಳ್ಳುವುದು ಕಡಿಮೆ ಮಾಡಿಲ್ಲ.
ತಿನ್ನುವ ಮುನ್ನ ಎಚ್ಚರ!
ಕೆಲ ವ್ಯಾಪಾರಿಗಳು ಮರದಲ್ಲಿರುವ ಕಾಯಿಗಳನ್ನೇ ಕಿತ್ತು ಹಣ್ಣು ಮಾಡಿ ಮಾರಾಟಕ್ಕೆ ಮುಂದಾಗುತ್ತಾರೆ, ಹಾಗಾಗಿ ಮಾವಿನ ಕಾಯಿಯನ್ನು ಹಣ್ಣು ಮಾಡಲು ರಾಸಾಯನಿಕ ಬಳಕೆ ಮಾಡುತ್ತಾರೆ. ಕ್ಯಾಲ್ಸಿಯಂ ಕಾರ್ಬೈಡ್ ಎಂಬ ರಾಸಾಯನಿಕ ವಸ್ತುವನ್ನು ಮಾವಿನ ಕಾಯಿಯನ್ನು ಹಣ್ಣಾಗಿ ಪರಿವರ್ತಿಸಲು ಬಳಕೆ ಮಾಡುತ್ತಿದ್ದು, ಇದು ಆರೋಗ್ಯದ ಮೇಲೆ ನಿಧಾನವಾಗಿ ಕೆಟ್ಟ ಪರಿಣಾಮ ಬೀರುತ್ತದೆ.
ಪತ್ತೆಹಚ್ಚುವುದು ಹೇಗೆ?
ಹಣ್ಣುಗಳು ಅಲ್ಲಲ್ಲಿ ಒಣಗಿದ ರೀತಿಯಲ್ಲಿ ಕಾಣುವುದು, ಅದರ ಮೇಲೆ ಚುಕ್ಕೆಗಳಿರುವುದು, ರುಚಿ ಇಲ್ಲದೇ ಇರುವುದು ಕಂಡುಬಂದರೆ ಅದು ರಾಸಾಯನಿಕ ವಸ್ತುವಿನಿಂದ ಮಾಗಿಸಿದ ಹಣ್ಣು ಎಂಬುವುದು ತಿಳಿಯುತ್ತದೆ.
ಸಮಸ್ಯೆಗಳು ಏನು?
ಈ ಹಣ್ಣುಗಳ ಸೇವೆನೆಯಿಂದ ಮೊದಲಿಗೆ ಹೊಟ್ಟೆ ನೋವು ಕಾಣಿಸಿಕೊಂಡರೆ ನಂತರ ನಿಧಾನವಾಗಿ ಗ್ಯಾಸ್ಟ್ರೀಕ್, ಉಬ್ಬಸ, ವಾಂತಿ, ಹೊಟ್ಟೆ ಹುರಿ, ಅತಿಸಾರದಂತಹ ಸಮಸ್ಯೆ ಗಳು ಕಾಣಿಸಿಕೊಳ್ಳುತ್ತದೆ. ಏನು ಆಗುವುದಿಲ್ಲವೆಂದು ತಿನ್ನಲು ಹೋದರೆ ಕರುಳಿನ ತೊಂದರೆಯಾಗುವುದರ ಜೊತೆಗೆ ಕ್ಯಾನ್ಸರ್ ಆಗುವ ಸಾಧ್ಯತೆಯೂ ಇದೆ. ಹೀಗಾಗಿ ಮಾವು ಖರೀದಿಯ ಜೊತೆ ಅನಾರೋಗ್ಯವನ್ನು ತೆಗೆದುಕೊಂಡು ಹೋಗಬೇಡಿ ಎಂಬುದು ನಮ್ಮ ಕಾಳಜಿ !



