ದಾವಣಗೆರೆ: ಜಾತ್ರೆ ಮುಗಿಸಿಕೊಂಡು ಊರಿಗೆ ಮರಳಲು ಹತ್ತಿದ ಬಸ್ ನಲ್ಲಿ ಮಕ್ಕಳ ಎದುರೇ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆಘಾತಕಾರಿ ಘಟನೆ ವಿಜಯನಗರದಲ್ಲಿ ನಡೆದಿದೆ.
ಕೊಟ್ಟೂರು ತಾಲೂಕಿನ ಅಲಬೂರ ನಿವಾಸಿ ಪ್ರಕಾಶ ಮಡಿವಾಳರ (42), ಹರಪನಹಳ್ಳಿ ತಾಲೂಕಿನ ಅರಸೀಕೆರೆ ನಿವಾಸಿಗಳಾದ ಕಂಡಕ್ಟರ್ ರಾಜಶೇಖರ್ (40) ಹಾಗೂ ಬಸ್ ಎಜೆಂಟ್ ಸುರೇಶ್ (46) ಅವರನ್ನು ಅರಸೀಕೆರೆ ಪೊಲೀಸರು ಬಂಧಿಸಿದ್ದಾರೆ.
ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗದ ಚನ್ನಾಪುರ ಗ್ರಾಮದ ಬಳಿ ಮಂಗಳವಾರ ತಡರಾತ್ರಿ ಘಟನೆ ನಡೆದಿದ್ದು, ಬೆಳಗಾವಿ ಮೂಲದ ಮಹಿಳೆ ಉಚ್ಚಂಗಿದುರ್ಗದ ಉಚ್ಚಂಗೆಮ್ಮ ಜಾತ್ರೆಗೆ ಮಕ್ಕಳ ಜೊತೆ ಬಂದಿದ್ದರು. ಜಾತ್ರೆ ಮುಗಿಸಿಕೊಂಡು ದಾವಣಗೆರೆಗೆ ಹೋಗಲು ಬಸ್ ಹತ್ತಿದಾಗ ಬಸ್ ಸಿಬ್ಬಂದಿ ಅತ್ಯಾಚಾರ ಎಸಗಿದ್ದಾರೆ.
ಬನಶಂಕರಿ ಎಂಬ ಹೆಸರಿನ ಖಾಸಗಿ ಬಸ್ ಆರೋಪಿಗಳು ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸುತ್ತಿದ್ದ ವೇಳೆ ಮಹಿಳೆ ಕಿರುಚಾಡಿದ್ದಾರೆ. ಮಹಿಳೆಯ ಕಿರುಚಾಟ ಕೇಳಿ ಸಾರ್ವಜನಿಕರು ರಕ್ಷಿಸಿದ್ದಾರೆ.
ಬಸ್ನಲ್ಲಿ 10 ಪ್ರಯಾಣಿಕರಿದ್ದರು. ಮಹಿಳೆ ಬಸ್ ಹತ್ತಿದ ನಂತರ ಮುಂದಿನ ನಿಲ್ದಾಣದಲ್ಲಿ ಬಸ್ನಲ್ಲಿದ್ದ 10 ಮಂದಿ ಪ್ರಯಾಣಿಕರು ಇಳಿದಿದ್ದಾರೆ. ಬಸ್ನಲ್ಲಿ ಮಹಿಳೆ ಮತ್ತು ಆಕೆಯ ಇಬ್ಬರು ಮಕ್ಕಳು ಮಾತ್ರ ಇದ್ದರು. ಎರಡು ಸಣ್ಣ ಮಕ್ಕಳೊಂದಿಗೆ ಒಬ್ಬಂಟಿ ಮಹಿಳೆ ಇರುವುದನ್ನು ಮೂರು ಜನ ಆರೋಪಿಗಳು ಗಮನಿಸಿದ್ದಾರೆ.
ಬಸ್ ಚಾಲಕ ಮಾರ್ಗ ಬದಲಿಸಿ ಉಚ್ಚಂಗಿದುರ್ಗದಿಂದ ದಾವಣಗೆರೆ ಕಡೆಗೆ ಹೋಗುವ ಬದಲು ಚನ್ನಾಪುರದ ಕಡೆಗೆ ಬಸ್ ತೆಗೆದುಕೊಂಡು ಹೋಗಿದ್ದಾನೆ. ಅಲ್ಲಿ ಮೂವರು ಸೇರಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



