Sunday, June 28, 2026
Google search engine
Homeರಾಜಕೀಯರಾಜ್ಯ ಸರಕಾರದಿಂದಲೇ ಭೂಕಬಳಿಕೆ: ಛಲವಾದಿ ನಾರಾಯಣಸ್ವಾಮಿ ಆರೋಪ

ರಾಜ್ಯ ಸರಕಾರದಿಂದಲೇ ಭೂಕಬಳಿಕೆ: ಛಲವಾದಿ ನಾರಾಯಣಸ್ವಾಮಿ ಆರೋಪ

ಕಾಂಗ್ರೆಸ್ ಸರಕಾರವು ಬಡವರಿಗೆ ಮನೆ ಕೊಡಬೇಕು; ಭೂರಹಿತರಿಗೆ ಭೂಮಿ ಕೊಡಬೇಕಿತ್ತು. ಆದರೆ, ಈ ಕೆಲಸವನ್ನು ಮಾಡುತ್ತಿಲ್ಲ. ತಾನೇ ಭೂಮಿ ಕಬಳಿಸುವ ಕೆಲಸ ಮಾಡುತ್ತಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ.

ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭೂಕಬಳಿಕೆಯಲ್ಲಿ ಸರಕಾರವೇ ನಿರತವಾಗಿದೆ. ಸರಕಾರವು ತಾಲ್ಲೂಕು, ಜಿಲ್ಲೆ, ಮಂಡಲ, ಪಂಚಾಯಿತಿ- ಹೀಗೆ ಎಲ್ಲ ಕಡೆ ನಿವೇಶನ ಪಡೆಯಲು ಅದಕ್ಕೆ ಅಧಿಕಾರ ಇಲ್ಲ. ಕಾನೂನು ಉಲ್ಲಂಘಿಸಿ ಅದು ಕಾಂಗ್ರೆಸ್ ಪಕ್ಷದ ಕಚೇರಿ ನಿರ್ಮಾಣಕ್ಕೆ ಲೀಸ್‍ಗೆ ಮುಧೋಳದಲ್ಲಿ ನಿವೇಶನ ಪಡೆಯಲು ಮುಂದಾಗಿತ್ತು. ಆದರೆ, ಇಲಾಖೆಯು ಅದನ್ನು ತಿರಸ್ಕರಿಸಿತ್ತು ಎಂದರು.

ಚಿಕ್ಕಬಳ್ಳಾಪುರದಲ್ಲಿ ಒಂದು ಸಿಎ ನಿವೇಶನವನ್ನು ಕಾಂಗ್ರೆಸ್ ಪಕ್ಷದ ಕಚೇರಿ ನಿರ್ಮಾಣಕ್ಕೆ ಪಡೆಯಲು ಮುಂದಾಗಿತ್ತು. 3,404 ಚದರ ಮೀಟರ್‍ನ 4 ಕೋಟಿ 8 ಲಕ್ಷ 51,120 ರೂ. ಬೆಲೆಯ ನಿವೇಶನ ಇದಾಗಿದೆ. ಇದನ್ನು ಅವರು ತಮಗೆ ಪಡೆದುಕೊಂಡಿದ್ದಾರೆ. ಅವರದೇ ಪೆನ್, ಅವರದೇ ಪುಸ್ತಕ, ಅವರದೇ ಅಧಿಕಾರ, ಅವರೇ ಬರಕೊಳ್ಳುವುದು, 20 ಲಕ್ಷ 42,556 ರೂ.ಗೆ ಇದನ್ನು ಪಡೆದಿದ್ದಾರೆ. ಕೇವಲ ಶೇ 5 ಮೌಲ್ಯಕ್ಕೆ ಇದನ್ನು ತೆಗೆದುಕೊಂಡಿದ್ದಾಗಿ ಟೀಕಿಸಿದರು. ತುಮಕೂರು, ಗ್ರಾಮಾಂತರ ಜಿಲ್ಲೆ, ಚಾಮರಾಜನಗರ, ದಕ್ಷಿಣ ಕನ್ನಡ, ಉಡುಪಿ- ಹೀಗೆ ಎಲ್ಲ ಜಿಲ್ಲೆಗಳಲ್ಲಿ ನಿವೇಶನವನ್ನು ತೆಗೆದುಕೊಂಡಿದ್ದಾರೆ ಎಂದು ಆಕ್ಷೇಪಿಸಿದರು.
ಬಾದಾಮಿಯಲ್ಲಿ 613 ಚದರ ಮೀಟರ್‍ನ ನಿವೇಶನಕ್ಕೆ 24 ಲಕ್ಷದ 52 ಸಾವಿರ ಮೌಲ್ಯದ ಬದಲಾಗಿ 1 ಲಕ್ಷ 22 ಸಾವಿರಕ್ಕೆ ಪಡೆದಿದ್ದಾರೆ.

ಇದು ಕೂಡ ಶೇ 5ರಷ್ಟಿದೆ. ಕೊಪ್ಪಳದಲ್ಲಿ 1 ಕೋಟಿ 31 ಲಕ್ಷದ 31,975 ರೂ. ಬದಲು 6,56,598 ರೂ.ಗೆ ಅಂದರೆ ಶೇ 5 ದರಕ್ಕೆ ಪಡೆದಿದ್ದಾರೆ. ಚನ್ನರಾಯಪಟ್ಟಣದಲ್ಲಿ 1.36 ಲಕ್ಷಕ್ಕೆ ತೆಗೆದುಕೊಂಡಿದ್ದಾರೆ. ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ 1 ಕೋಟಿ 45 ಲಕ್ಷ 78 ಸಾವಿರದ ನಿವೇಶನವನ್ನು 7 ಲಕ್ಷ 28 ಸಾವಿರಕ್ಕೆ ಬರೆದುಕೊಂಡಿದ್ದಾರೆ. ಗೌರಬಿದನೂರಿನಲ್ಲಿ 90 ಲಕ್ಷ 80,900 ರೂ ಬೆಲೆಯ ನಿವೇಶನವನ್ನು 4 ಲಕ್ಷ 54 ಸಾವಿರಕ್ಕೆ ತೆಗೆದುಕೊಂಡಿದ್ದಾರೆ. ಸಾರ್ವಜನಿಕ ಸೌಕರ್ಯಕ್ಕಾಗಿ ಇರುವ ನಿವೇಶನಗಳಿವು ಎಂದು ಗಮನಕ್ಕೆ ತಂದರು.

ಮಾನ್ವಿಯಲ್ಲಿ 37 ಲಕ್ಷ 87,500 ರೂ. ನಿವೇಶನವನ್ನು 1 ಲಕ್ಷ 89 ಸಾವಿರ, ಶಹಾಪುರದಲ್ಲಿ 95 ಲಕ್ಷ 71,144 ರೂ. ಸೈಟನ್ನು 4 ಲಕ್ಷ 78 ಸಾವಿರ ಅಂದರೆ ಕೇವಲ ಶೇ 5 ಮೌಲ್ಯಕ್ಕೆ ಪಡೆದಿದ್ದು, ಬಸವಕಲ್ಯಾಣದಲ್ಲಿ ಹಾಗೇ ಮಾಡಿದ್ದಾರೆ. ಅಲ್ಲಿ ದರ ವಿಧಿಸಿಲ್ಲ. ಲಿಂಗಸುಗೂರಿನಲ್ಲಿ 46 ಲಕ್ಷ 99,200 ರೂ. ದನ್ನು 2 ಲಕ್ಷ 34ಕ್ಕೆ ಬರೆದುಕೊಂಡಿದ್ದಾರೆ. ತುಮಕೂರು ಪಾಲಿಕೆ ವ್ಯಾಪ್ತಿಯಲ್ಲಿ 1 ಕೋಟಿ 70 ಸಾವಿರದ ನಿವೇಶನವನ್ನು 8 ಲಕ್ಷ 50 ಸಾವಿರಕ್ಕೆ ಬರೆದುಕೊಂಡಿದ್ದಾರೆ ಎಂದು ದೂರಿದರು.

ಹುಬ್ಬಳ್ಳಿ- ಧಾರವಾಡದಲ್ಲಿ ನಿವೇಶನಕ್ಕೆ ದರ ಹಾಕಿಲ್ಲ ಎಂದು ಆಕ್ಷೇಪಿಸಿದರು. ನಾಗರಿಕ ಸೌಲಭ್ಯ ನಿವೇಶನಗಳನ್ನು ಕಾಂಗ್ರೆಸ್ ಭವನ ಟ್ರಸ್ಟಿಗೆ ಮಂಜೂರು ಮಾಡಲು ಅವಕಾಶ ಇಲ್ಲ ಎಂದು ಅಧಿಕಾರಿÀಗಳು ತಿಳಿಸಿದ್ದಾರೆ. ಆದರೆ, ಇದನ್ನು ಸಚಿವ ಸಂಪುಟದ ಮುಂದೆ ಮಂಡಿಸಿ, ಅಲ್ಲಿ ಅನುಮೋದನೆ ಕೊಟ್ಟು ಸದ್ರಿ ನಾಗರಿಕ ಸೌಲಭ್ಯ ನಿವೇಶನಗಳನ್ನು ಮಂಜೂರು ಮಾಡಲಾಗಿದೆ ಎಂದು ದಾಖಲೆಗಳನ್ನು ಓದಿ ಹೇಳಿದರು. ಇದು ಬೈರತಿ ಸುರೇಶ್ ಅವರು ಕೊಟ್ಟ ವರದಿ ಎಂದು ವಿವರಿಸಿದರು.

ಅಧಿಕಾರಿಗಳು ಇದರ ಮಂಜೂರಾತಿ ಕಾನೂನುಬಾಹಿರ ಎಂದು ತಿಳಿಸಿದ್ದರು. ಆದರೂ, ಸರಕಾರದ ಸಚಿವ ಸಂಪುಟದ ಸಭೆಯಲ್ಲಿ ಮಂಡಿಸಿ ವಿಶೇಷವಾದ ಅನುಮೋದನೆ ಕೊಟ್ಟಿದ್ದಾರೆ ಎಂದು ಟೀಕಿಸಿದರು. ಬೆಂಗಳೂರು ಗ್ರಾಮಾಂತರ, ತುಮಕೂರು, ಚಾಮರಾಜನಗರ, ದಕ್ಷಿಣ ಕನ್ನಡ, ಉಡುಪಿಯಲ್ಲಿ ಕಂದಾಯ ಇಲಾಖೆಯಲ್ಲೂ ಇದೇರೀತಿ ತಿಳಿಸಿದ್ದಾರೆ. ಕಾಂಗ್ರೆಸ್ ಪಕ್ಷವು ಕಂದಾಯ ಇಲಾಖೆಯಿಂದ 5 ನಿವೇಶನಗಳು, ಪುರಸಭೆ- ಸ್ಥಳೀಯ ಸಂಸ್ಥೆಗಳಿಂದ 26 ನಿವೇಶನಗಳನ್ನು ಭೂಕಬಳಿಕೆ ಮಾಡಿದೆ ಎಂದು ದೂರಿದರು.

ನಿವೇಶನ ವಾಪಸ್ ಪಡೆಯಲು ಆಗ್ರಹ

ಇವೆಲ್ಲವೂ ಸರಕಾರಿ ದಾಖಲೆಗಳು, ನಾವ್ಯಾರೂ ಸೃಷ್ಟಿಸಿದ್ದಲ್ಲ. ಅವರಿಂದ ಪಡೆದ ದಾಖಲೆಗಳಿವು ಎಂದು ಪ್ರದರ್ಶಿಸಿದರು. ಕಾನೂನು ಇಲಾಖೆ ಇದನ್ನು ಪರಿಶೀಲಿಸಲಿ. ಈ ಎಲ್ಲ ನಿವೇಶನಗಳನ್ನು ಸರಕಾರ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು. ಮುಖ್ಯಮಂತ್ರಿಗಳು ಭೂಕಬಳಿಕೆ ಮಾಡಿ ಮುಡಾದಲ್ಲಿ ಸಿಕ್ಕಿ ಬಿದ್ದಿದ್ದರು. ಅವರು ಜೈಲಿಗೆ ಹೋಗುವುದು ಗ್ಯಾರಂಟಿ ಆದಾಗ ನಿವೇಶನಗಳನ್ನು ವಾಪಸ್ ಕೊಟ್ಟಿದ್ದರು.

ಈ ಭೂಕಬಳಿಕೆಯಿಂದ ನೀವು ಜೈಲಿಗೆ ಹೋಗುವ ಪರಿಸ್ಥಿತಿ ಬರಲಿದೆ ಎಂದು ಎಚ್ಚರಿಸಿದರು. ಅದರಿಂದ ತಪ್ಪಿಸಿಕೊಳ್ಳಲು ಕೂಡಲೇ ನಿವೇಶನಗಳನ್ನು ವಾಪಸ್ ಕೊಡಿ ಎಂದು ಒತ್ತಾಯಿಸಿದರು. ವಾಪಸ್ ಕೊಡದೇ ಇದ್ದರೆ ಕೋರ್ಟ್ ಮೊರೆ ಹೋಗಲೂ ಸಿದ್ಧ ಎಂದು ಅವರು ಪ್ರಶ್ನೆಗೆ ಉತ್ತರಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments