ಚಲಿಸುತ್ತಿದ್ದ ನಮ್ಮ ಮೆಟ್ರೋ ರೈಲಿಗೆ ಹಾರಿ ವಿವಾಹಿತ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಕೆಂಗೇರಿ ಮೆಟ್ರೋ ನಿಲ್ದಾಣ ಬಳಿ ನಡೆದಿದೆ.
ಶುಕ್ರವಾರ ಬೆಳಿಗ್ಗೆ 8 ಗಂಟೆ ಸುಮಾರಿಗೆ ರೈಲು ಬರುತ್ತಿದ್ದಾಗ ಹಳಿ ಮೇಲೆ ಹಾರಿ ವಿಜಯಪುರ ಮೂಲದ ಶಾಂತನಗೌಡ ಪಾಟೀಲ್ (38) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನೇರಳೆ ಮಾರ್ಗದ ಚಲಘಟ್ಟದಿಂದ ಬರುತ್ತಿದ್ದ ರೈಲಿಗೆ ಕೆಂಗೇರಿ ಮೆಟೋ ನಿಲ್ದಾಣದಲ್ಲಿ ಶಾಂತಗೌಡ ಪಾಟೀಲ್ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಿಂದ ಕೆಂಗೇರಿಯಿಂದ ವೈಟ್ ಫೀಲ್ಡ್ ಹೋಗಬೇಕಿದ್ದ ಮೆಟ್ರೋ ಸಂಚಾರ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಗಿದೆ.
ಶಾಂತನಗೌಡ ಕಳೆದ ಒಂದು ವರ್ಷದಿಂದ ಕೆಲಸಕ್ಕೆ ಹೋಗಿರಲಿಲ್ಲ. ಕೆಲವು ತಿಂಗಳ ಹಿಂದೆ ಕೆಲಸ ಸಿಕ್ಕಿದ್ದರೂ ಹೋಗಿರಲಿಲ್ಲ. ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದ ಶಾಂತಗೌಡ ಆತ್ಮಹತ್ಯೆಗೆ ಕಾರಣ ಎಂದು ಹೇಳಲಾಗಿದೆ. ಶಾಂತಗೌಡಕ್ಕೆ ಒಂದು ವರ್ಷವೂ ಪೂರೈಸದ ಮಗುವಿದೆ.
ಶಾಂತಗೌಡ ಮೆಟ್ರೋ ನಿಲ್ದಾಣಕ್ಕೆ ಬೈಕ್ ನಲ್ಲಿ ಬಂದಿದ್ದು, ಮೆಟ್ರೋದಲ್ಲಿ ನಿಲ್ಲಿಸಿದ ಬೈಕ್ ಅನ್ನು ಸ್ನೇಹಿತನಿಗೆ ನೀಡುವಂತೆ ಹೇಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ಮೃತರ ಜೇಬಿನಲ್ಲಿ ಆಧಾರ್ ಕಾರ್ಡ್ ದೊರೆತಿದೆ. ಶಾಂತನಗೌಡ ಪಾಟೀಲ್ ಮೂಲತಃ ವಿಜಯಪುರ ಜಿಲ್ಲೆಯವರು ಎಂಬುದು ಗೊತ್ತಾಗಿದೆ.
ನೇರಳೆ ಮಾರ್ಗದ ಮೆಟ್ರೋ ರೈಲುಗಳು ಪ್ರಸ್ತುತ ಮೈಸೂರು ರಸ್ತೆ ನಿಲ್ದಾಣದವರೆಗೆ ಮಾತ್ರ ಸಂಚರಿಸುತ್ತಿವೆ. ಮೈಸೂರು ರಸ್ತೆ ಮತ್ತು ಚಲ್ಲಘಟ್ಟ ನಡುವಿನ ಸೇವೆಗಳು ಕೆಂಗೇರಿ ನಿಲ್ದಾಣದಲ್ಲಿ ಸಂಭವಿಸಿದ ಆತ್ಮಹತ್ಯೆ ಪ್ರಯತ್ನದ ಕಾರಣ ತಾತ್ಕಾಲಿಕವಾಗಿ ಸ್ಥಗಿತಗೊಂಡಿವೆ.
ಪ್ರಯಾಣಿಕರಿಗೆ ಉಂಟಾದ ತೊಂದರೆಗೆ ವಿಷಾದ ವ್ಯಕ್ತಪಡಿಸುತ್ತೇವೆ ಎಂದು ನಮ್ಮ ಮೆಟ್ರೋ ಎಕ್ಸ್ ಮೂಲಕ ಬೆಳಗ್ಗೆ 8.55ರ ಸುಮಾರಿಗೆ ಮಾಹಿತಿ ನೀಡಿತ್ತು. ಬಳಿಕ ಒಂದು ಗಂಟೆಯ ಬಳಿಕ ಜ್ಞಾನಭಾರತಿ ಮತ್ತು ಚಲ್ಲಘಟ್ಟ ನಡುವಿನ ಮೆಟ್ರೋ ಸೇವೆಗಳು ಇಂದು ಬೆಳಿಗ್ಗೆ 09:40 ಗಂಟೆಯಿಂದ ಸಂಪೂರ್ಣವಾಗಿ ಪುನರ್ ಆರಂಭಿಸಲಾಗಿದೆ. ಸಂಪೂರ್ಣ ನೇರಳೆ ಮಾರ್ಗದಲ್ಲಿ ರೈಲುಗಳು ಈಗ ಎಂದಿನಂತೆ ಸಂಚರಿಸುತ್ತಿವೆ ಎಂದು ಮಾಹಿತಿ ನೀಡಿದೆ.



