Monday, May 25, 2026
Google search engine
Homeರಾಜ್ಯರಾಜ್ಯದಲ್ಲಿ ದೈಹಿಕ ಶಿಕ್ಷಕರ ನೇಮಕಾತಿಗೆ ಕ್ರಮ: ಸಚಿವ ಮಧು ಬಂಗಾರಪ್ಪ ಘೋಷಣೆ

ರಾಜ್ಯದಲ್ಲಿ ದೈಹಿಕ ಶಿಕ್ಷಕರ ನೇಮಕಾತಿಗೆ ಕ್ರಮ: ಸಚಿವ ಮಧು ಬಂಗಾರಪ್ಪ ಘೋಷಣೆ

ಶಿವಮೊಗ್ಗ: ರಾಜ್ಯದಲ್ಲಿ ದೈಹಿಕ ಶಿಕ್ಷಕರ ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ನಗರದ ಜಿಲ್ಲಾ ಪಂಚಾಯತ್ ಅವರಣದಲ್ಲಿ ಶುಕ್ರವಾರ ಮಾತನಾಡಿದ ಅವರು, ದೈಹಿಕ ಶಿಕ್ಷಕರನ್ನು ಅತಿಥಿ ಶಿಕ್ಷಕರಂತೆ ನೇಮಕಾತಿ ಮಾಡಲಾಗುವುದಿಲ್ಲ, ಒಟ್ಟು 18 ಸಾವಿರ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳುವುದಾಗಿ ಈ ಹಿಂದೆ ನಾನೇ ಹೇಳಿದ್ದೇನೆ. ಅದರಲ್ಲಿ ದೈಹಿಕ ಶಿಕ್ಷಕರೂ ಸೇರಿದ್ದಾರೆ. ಆದಷ್ಟು ಬೇಗ ಶಿಕ್ಷಕರನ್ನು ನೇಮಕಾತಿ‌ ಮಾಡಿಕೊಳ್ಳಲಾಗುವುದು ಎಂದರು.

ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ನಡೆಯುತ್ತಿದೆ. ಆದರೆ ಈಗ ಅವರನ್ನು ವರ್ಗಾವಣೆ ಮಾಡಿ ಕಳುಹಿಸದೆ, ಶೈಕ್ಷಣಿಕ ವರ್ಷ ಮುಗಿದ ನಂತರವೇ ವರ್ಗಾಯಿಸಲು ಸೂಚಿಸಿದ್ದೇನೆ. ಶಿವಮೊಗ್ಗದ ದುರ್ಗಿಗುಡಿಯಲ್ಲಿ ಶಿಕ್ಷಕರ ಕೊರತೆ ಸಮಸ್ಯೆ ನನ್ನ ಗಮನಕ್ಕೆ ಬಂದಿದೆ. ನೂರಾರು ವರ್ಷದ ಶಾಲೆ ಇದು. ಶೀಘ್ರವಾಗಿ ಶಿಕ್ಷಕರ ಕೊರತೆ ಪರಿಹರಿಸುವ ಕಾರ್ಯ ಮಾಡುತ್ತೇನೆ ಎಂದು ಅವರು ಹೇಳಿದರು.

ಅನುದಾನರಹಿತ ಶಾಲೆಗಳ‌ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿ, 1995ರಿಂದ ಇದುವರೆಗಿನ ಅನುದಾನ ನೀಡಲು ನಾನು ಸಿಎಂ ಅವರಿಗೆ ವರದಿ ಕಳುಹಿಸಿದ್ದೇನೆ. ಸಿಎಂ ನೀಡಿದರೆ ನಾನು ಕೊಡುತ್ತೇನೆ. ಹಣಕಾಸು ವಿಭಾಗದ ಅನುಮತಿ ಸಿಕ್ಕರೆ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.

ಮುಂಬರುವ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಶಿಕ್ಷಣ ಇಲಾಖೆಯ ಎರಡು ಮಸೂದೆiಳನ್ನು ಮಂಡಿಸಲಾಗುತ್ತದೆ ಎಂದು ತಿಳಿಸಿದರು.

ಹೈಕಮಾಂಡ್ ತೀರ್ಮಾನ:

ಸಿಎಂ ಯಾರಾಗಬೇಕು ಎಂಬುದನ್ನು ಕಾಂಗ್ರೆಸ್​​ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಮಾಧ್ಯಮಗಳಲ್ಲಿ ತೋರಿಸಿದಷ್ಟು ನಮ್ಮ ಪಕ್ಷದಲ್ಲಿ ಏನೂ ಆಗಿಲ್ಲ‌, ಏನೇ ಇದ್ದರೂ ಹೈಕಮಾಂಡ್ ನಿರ್ಧರಿಸಲಿದೆ. ಸಚಿವ ಸಂಪುಟ ವಿಸ್ತರಣೆ ಹಾಗೂ ಪುನರಚನೆ ಕುರಿತೂ ಸಹ ಹೈಕಮಾಂಡ್ ಹೇಳಲಿದೆ ಎಂದರು.

ಪ್ರತಿಪಕ್ಷದವರು ಮೊದಲು ತಮ್ಮ ಪಕ್ಷದ ಬಾಗಿಲು ನೋಡಿ‌ಕೊಳ್ಳಲಿ‌. ಅವರು ನಮ್ಮ ಪಕ್ಷದ ಬಗ್ಗೆ ಮಾತನಾಡುವುದು ಬೇಡ. ನಮ್ಮ ಪಕ್ಷದ ಹೈಕಮಾಂಡ್ ನಿಮ್ಮ‌ ನಿಮ್ಮ ಕೆಲಸ ಮಾಡಿ ಎಂದು ಹೇಳಿದೆ, ನಾನು ಅದನ್ನು ನೋಡಿ‌ಕೊಂಡು ಹೋಗುತ್ತಿದ್ದೇನೆ. ನಿನ್ನೆ ಸಚಿವ ಸಂಪುಟದಲ್ಲಿ ಒಳ್ಳೆಯ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಪಕ್ಷದ ವಿಚಾರದಲ್ಲಿ ಬಾಯಿ ಮುಚ್ಚಿಕೊಂಡು ಇರಿ ಎಂದು ಹೈಕಮಾಂಡ್ ಹೇಳಿದೆ. ನಾನು ಹಾಗೆಯೇ ಇರುತ್ತೇನೆ ಎಂದು ಪ್ರತಿಕ್ರಿಯಿಸಿದರು.

ಗೊಂದಲ ಬಗೆಹರಿಸಲಿ:

ಇದೇ ಸಂದರ್ಭದಲ್ಲಿ ಮಾತನಾಡಿದ ಸಾಗರ ಶಾಸಕ ಹಾಗೂ ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ದಿ ನಿಗಮದ ಅಧ್ಯಕ್ಷ ಬೇಳೂರು ಗೋಪಾಲಕೃಷ್ಣ, ಪಕ್ಷದಲ್ಲಿ ಇರುವ ಗೊಂದಲವನ್ನು ಹೈಕಮಾಂಡ್ ಆದಷ್ಟು ಬೇಗ ಬಗೆಹರಿಸಬೇಕು ಎಂದು ವಿನಂತಿಸಿದರು. ಭಾರತಕ್ಕೆ ರಾಹುಲ್ ಗಾಂಧಿ ಮರಳಿದ್ದು, ಒಂದು ನಿರ್ಧಾರ ತೆಗೆದುಕೊಳ್ಳುತ್ತಾರೆ. ವಿಪಕ್ಷದರಿಗೆ ನಮ್ಮ ಪಕ್ಷ ಆಹಾರ ಆಗುವುದು ಬೇಡ. ಗೊಂದಲದ ಕುರಿತು ನಮ್ಮ ಪಕ್ಷದ ಕಾರ್ಯಕರ್ತರಿಗೆ ಉತ್ತರ ಕೊಡಲು ಆಗಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ನಾನೂ ಸಹ ಎಲ್ಲರನ್ನೂ ಭೇಟಿ ಮಾಡಿ, ಅವರ ಕೈ-ಕಾಲು ಹಿಡಿದಿದ್ದೇನೆ. ಪದೇ ಪದೆ ಅದನ್ನೇ ಮಾಡಲು ಅಗಲ್ಲ‌. ಮಂತ್ರಿಮಂಡಲ ವಿಸ್ತರಣೆ ಅಥವಾ ಪುನಾರಚನೆಯಾದರೆ ನಮ್ಮಂತಹ ಶಾಸಕರಿಗೆ ಸಚಿವರಾಗುವ ಅವಕಾಶ ಸಿಗಬಹುದು ಎಂದು ಗೋಪಾಲಕೃಷ್ಣ ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments