ಬೆಂಗಳೂರು: ಪತಿಯಿಂದ ಕೊಲೆಯಾದ ವೈದ್ಯೆ ಕೃತಿಕಾ ರೆಡ್ಡಿಗಾಗಿ ಕುಟುಂಬದವರು ನಿರ್ಮಿಸಿದ್ದ ೪ ಕೋಟಿ ರೂ. ಮೌಲ್ಯದ ಮನೆಯನ್ನು ಇಸ್ಕಾನ್ ದೇವಸ್ಥಾನಕ್ಕೆ ದಾನ ಮಾಡಿದ್ದಾರೆ.
ಪ್ರೊಪೋಫಾಲ್ ಎಂಬ ಸೆಡೇಟಿವ್ನ ಓವರ್ಡೋಸ್ ಇಂಜೆಕ್ಷನ್ ನಿಂದ ಕೊಲೆಯಾದ ವೈದ್ಯೆ ಕೃತಿಕಾ ರೆಡ್ಡಿ ಅವರ ಸಾವನ್ನು ಸಹಜ ಸಾವು ಎಂದು ಬಿಂಬಿಸಲು ಪತಿ ಮಹೇಂದ್ರ ರೆಡ್ಡಿ ಯತ್ನಿಸಿದ್ದು, ೬ ತಿಂಗಳ ನಂತರ ಮಣಿಪಾಲದಲ್ಲಿ ಸಿಕ್ಕಿಬಿದ್ದಿದ್ದ.
ಮಗಳ ಸಾವಿನ ನೋವಿನಲ್ಲಿರುವ ತಂದೆ ಮುನಿರೆಡ್ಡಿಯು ಮಗಳು ವಾಸವಿದ್ದ ಮುನೆಕೋಳಾದ ಮನೆಯನ್ನು ಇಸ್ಕಾನ್ಗೆ ದಾನ ಮಾಡಿದ್ದಾರೆ. ಮಗಳಿಗಾಗಿ ನಾಲ್ಕು ಕೋಟಿ ಖರ್ಚು ಮಾಡಿ ಮನೆ ಕಟ್ಟಿದ್ದರು. ಮಗಳ ನೆನಪು ಕಾಡಲಿದೆ ಎಂದು ಇಸ್ಕಾನ್ ದೇವಸ್ಥಾನಕ್ಕೆ ಮನೆ ದಾನ ಮಾಡಿದ್ದಾರೆ.
ಕೃತಿಕಾರೆಡ್ಡಿ ಹಲವು ಸಮಾಜ ಸೇವಾ ಕನಸುಗಳನ್ನು ಕಂಡಿದ್ದ ಕಾರಣದಿಂದ ಆಕೆಗೆ ಶಾಂತಿ ದೊರೆಯಲು ಆಕೆ ವಾಸಿಸುತ್ತಿದ್ದ 4 ಕೋಟಿ ಮೌಲ್ಯದ ಮನೆಯನ್ನು ಇಸ್ಕಾನ್ನವರ ಆಶ್ರಮಕ್ಕೆ ದಾನ ಮಾಡಿದ್ದೇವೆ, ಆ ಮನೆಯಲ್ಲಿ ಇರುವುದು ನಮ್ಮಿಂದಾಗದು. ಆದ್ದರಿಂದ ದೇವರಿಗೆ ಸಮರ್ಪಿಸಿದ್ದೇವೆ ಎಂದು ಕೃತಿಕಾ ಸಹೋದರಿ ಡಾ. ನಿಖಿತಾ ತಿಳಿಸಿದ್ದಾರೆ.
ದಾಲ್ ಬಳಿ ವೆಡ್ಡಿಂಗ್ ಶೂಟ್
ಕೃತಿಕಾ-ಮಹೇಂದ್ರರ ಮದುವೆ ಭಾರಿ ಅದ್ಧೂರಿಯಾಗಿ ನಡೆದಿತ್ತು.ಕಾಶ್ಮೀರ ಸೇರಿ ಬರೋಬ್ಬರಿ 6 ಸ್ಥಳದಲ್ಲಿ ಪ್ರೀ ವೆಡ್ಡಿಂಗ್ ಶೂಟ್ ಮಾಡಲಾಗಿತ್ತು. 2024ರ ಫೆಬ್ರವರಿಯಲ್ಲಿ ಕಾಶ್ಮೀರಕ್ಕೆ ತೆರಳಿದ್ದ ಜೋಡಿ ಮೇ 26ರಂದು ಹೊಸಜೀವನಕ್ಕೆ ಕಾಲಿಟ್ಟಿದ್ದರು.
ಕೊಲೆಯಾದ ವೈದ್ಯೆ ಕೃತಿಕಾ ರೆಡ್ಡಿ ಅವರದು ಶ್ರೀಮಂತ ಕುಟುಂಬವಾಗಿದ್ದು,ಹಣಕಾಸಿಗೆ ಯಾವುದೇ ತೊಂದರೆ ಇರಲಿಲ್ಲ,ತಂದೆ ಮುನಿರೆಡ್ಡಿ ನೂರಾರು ಕೋಟಿ ಆಸ್ತಿ ಒಡೆಯನಾಗಿದ್ದಾರೆ.ಮುನ್ನೇಕೊಳಲುವಿನ ಜಮೀನ್ದಾರರಾಗಿದ್ದ ಮುನಿರೆಡ್ಡಿಗೆ ತಿಂಗಳಿಗೆ ಹತ್ತಾರು ಲಕ್ಷ ಬಾಡಿಗೆಯೇ ಬರಲಿದೆ. ಹೀಗಾಗಿ ಮಗಳ ಮದುವೆಯನ್ನು ಅದ್ದೂರಿಯ ಮಾಡಿಕೊಟ್ಟಿದ್ದರು. ಇತ್ತ ಕೊಲೆಗಡುಕ ಡಾಕ್ಟರ್ ಮಹೇಂದ್ರ ರೆಡ್ಡಿ ಕುಟುಂಬ ಅವರ ಕುಟುಂಬವು ಶ್ರೀಮಂತವಾಗಿತ್ತು, ಆದರೂ ಮಹೇಂದ್ರ ಕ್ಲಿನಿಕ್ ಆರಂಭಿಸಲು ಮುನಿರೆಡ್ಡಿಯೇ ಹಣಕಾಸಿನ ನೆರವು ನೀಡಿದ್ದರು ಎಂದು ತಿಳಿದುಬಂದಿದೆ.
ಅಕ್ರಮ ಸಂಬಂಧ ಶಂಕೆ
ಈ ನಡುವೆ ಮಹೇಂದ್ರ ರೆಡ್ಡಿಗೆ ಬೇರೆ ಯುವತಿಯೊಂದಿಗೆ ಅಕ್ರಮ ಸಂಬಂಧ ಇರುವ ಶಂಕೆ ಕೂಡ ವ್ಯಕ್ತವಾಗಿದೆ. ಅಕ್ರಮ ಸಂಬಂಧದಿಂದಲೇ ಮಗಳನ್ನು ಕೊಲೆ ಮಾಡಿರುವುದಾಗಿ ವೈದ್ಯ ಪತಿ ವಿರುದ್ಧ ಕೃತಿಕಾ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ಇದೇ ಕಾರಣಕ್ಕೆ ಆತ ಕೊಲೆ ಮಾಡಿದ್ದಾನೆ ಎನ್ನುವ ಶಂಕೆ ಕೂಡ ವ್ಯಕ್ತವಾಗಿದೆ,ಡಾ.ಕೃತಿಕಾ ಕೊಲೆಗೂ ಮುನ್ನ ಪತಿ ಮಹೇಂದ್ರ ರೆಡ್ಡಿ ಅನಸ್ತೇಷಿಯಾವನ್ನು ಮಡಿವಾಳದ ತನ್ನ ಸಹೋದರನ ಮೆಡಿಕಲ್ ಶಾಪ್ನಲ್ಲಿ ಖರೀದಿ ಮಾಡಿರುವುದು ತನಿಖೆಯಲ್ಲಿ ಪತ್ತೆಯಾಗಿದ್ದು,ಹಲವು ಆಯಾಮಗಳಲ್ಲಿ ಮಾರತಹಳ್ಳಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಅನಾರೋಗ್ಯ ಸಮಸ್ಯೆ
2024ರ ಮೇ 26ರಂದು ಮಹೇಂದ್ರ ಮತ್ತು ಕೃತಿಕಾ ರೆಡ್ಡಿಗೆ ಮದುವೆಯಾಗಿತ್ತು. ವೈದ್ಯೆಗೆ ಅಜೀರ್ಣ, ಗ್ಯಾಸ್ಟ್ರಿಕ್ ಮತ್ತು ಲೋ ಶುಗರ್ ಸಮಸ್ಯೆ ಇತ್ತು. ಈ ವಿಚಾರ ಮಹೇಂದ್ರನಿಗೆ ತಿಳಿಸದೆ ಮದುವೆ ಮಾಡಿದ್ದರು. ಮದುವೆಯಾದ ಬಳಿಕ ಈ ವಿಚಾರ ಮಹೇಂದ್ರನಿಗೆ ಗೊತ್ತಾಗಿತ್ತು. ನಿತ್ಯ ವಾಂತಿ ಹಾಗೂ ಇತರ ಸಮಸ್ಯೆಯಿಂದ ಕೃತಿಕಾ ಬಳಲ್ತಿದ್ದರು. ಇದೇ ಕಾರಣಕ್ಕೆ ಆರೋಪಿ ಕೊಲೆಗೆ ಸಂಚು ರೂಪಿಸಿದ್ದ ಎನ್ನಲಾಗಿದೆ.
ಆರೋಪಿ ಮಹೇಂದ್ರ ರೆಡ್ಡಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ 9 ದಿನಗಳ ಕಾಲ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಲಾಗಿದೆ ಎಂದು ವೈಟ್ ಫೀಲ್ಡ್ ಡಿಸಿಪಿ ಪರಶುರಾಮ್ ತಿಳಿಸಿದ್ದಾರೆ.
ಕೆಲಸ ಬಿಟ್ಟಿದ್ದ ವೈದ್ಯ:
ವೈದ್ಯೆ ಕೃತಿಕಾರೆಡ್ಡಿ ಕೊಲೆ ಪ್ರಕರಣದ ಆರೋಪಿ ಡಾ.ಮಹೇಂದ್ರ ರೆಡ್ಡಿ ಜುಲೈ ತಿಂಗಳಲ್ಲಿಯೇ ಕೆಲಸ ಬಿಟ್ಟಿದ್ದರು ಎಂದು ವಿಕ್ಟೋರಿಯಾ ಆಸ್ಪತ್ರೆಯ ಗ್ಯಾಸ್ಟ್ರೋ ಎಂಟ್ರಾಲಜಿ ವಿಭಾಗವು ಪ್ರಕಟಣೆಯಲ್ಲಿ ತಿಳಿಸಿದೆ.
ಆರೋಪಿ ಮಹೇಂದ್ರ ರೆಡ್ಡಿ 2023-24ನೇ ಶೈಕ್ಷಣಿಕ ವರ್ಷದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಅಂಗೀಕೃತ ಗ್ಯಾಸ್ಟ್ರೋ ಸರ್ಜನ್ ಆಗಿದ್ದರು. ಇದೇ ಮಾರ್ಚ್ನಲ್ಲಿ ಫೆಲೋಷಿಪ್ ಕೋರ್ಸ್ ಅನ್ನು ಪೂರ್ಣಗೊಳಿಸಿದ್ದಾರೆ.
ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿರುವ ಗ್ಯಾಸ್ಟ್ರೋ ಎಂಟ್ರಾಲಜಿ ಆಸ್ಪತ್ರೆಯಲ್ಲಿ ಮಾರ್ಚ್ನಿಂದ ಗುತ್ತಿಗೆ ಆಧಾರದ ಮೇಲೆ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅದಾದ ಬಳಿಕ 2025ರ ಜುಲೈ 2ರಂದು ಕೆಲಸದಿಂದ ಬಿಡುಗಡೆ ಹೊಂದಿದ್ದಾರೆ ಎಂದು ಆಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಿದೆ.



