ಶಿಡ್ಲಘಟ್ಟ : ನಗರದಾದ್ಯಂತ ಇಂದು ಹಲವು ಗಣೇಶ ಮೂರ್ತಿಗಳು ವಿಸರ್ಜನೆಗೆ ತೆರಳುತ್ತಿದ್ದ ವೇಳೆಯಲ್ಲಿ ಜನರಿಗೆ ಮುಸ್ಲಿಂಮರಿಂದ ನೀರಿನ ಪ್ಯಾಕೇಟ್, ಮಜ್ಜಿಗೆ, ವಿವಿಧ ಬಗೆಯ ಹಣ್ಣುಗಳ ಜ್ಯೂಸ್ ವಿತರಣೆ ಮಾಡುವ ಮೂಲಕ ಸೌಹಾರ್ದತೆ ಮೆರೆದಿರುವ ಘಟನೆ ಶಿಡ್ಲಘಟ್ಟದಲ್ಲಿ ನಗರದಲ್ಲಿ ನಡೆದಿದೆ.
ಹಿಂದೂಗಳು ಗೌರಿ – ಗಣೇಶ ಹಬ್ಬದ ಪ್ರಯುಕ್ತ ಎಲ್ಲೆಡೆ ಹಬ್ಬದ ಸಂಭ್ರಮ ಆಚರಿಸುತ್ತಿದ್ದು, ನಗರದಲ್ಲಿ ಸುಮಾರು 50 ಕ್ಕೂ ಹೆಚ್ಚು ಕಡೆ ಗಣೇಶಮೂರ್ತಿ ಪ್ರತಿಷ್ಟಾಪನೆ ಮಾಡಿ ಭಕ್ತಿ ಭಾವದಿಂದ ಪೂಜೆ ಕಾರ್ಯಕ್ರಮಗಳು ನೆರವೇರಿಸಿ ಆರಾಧಿಸಿದ್ದಾರೆ.

ಇಂದು ಕೆಲವು ಯುವಕರ ಗುಂಪುಗಳು, ಗಣೇಶಮೂರ್ತಿಗಳು ವಿಸರ್ಜನೆ ಮಾಡಲು ತೆರಳುತ್ತಿದ್ದ ವೇಳೆ ಮೆರವಣಿಗೆಯಲ್ಲಿ ಭಾಗಹಿಸಿದ್ದ ನೂರಾರು ಮಂದಿಗೆ ನಗರದ ಮಯೂರ ವೃತ್ತದ ಬಳಿ ಅಹಿಂದಾ ಚಳುವಳಿ ಮತ್ತು ಕಲಾಂ ಪೌಂಢೇಷನ್ ಚಾರಿಟೇಬಲ್ ಟ್ರಸ್ಟಿನ ಪದಾಧಿಕಾರಿಗಳು, ಮುಸ್ಲಿಂ ಸಮುದಾಯದ ಮುಖಂಡರು, ವಿಶೇಷವಾಗಿ ಮಹಿಳೆಯರು ಭಾಗವಹಿಸಿ ಜನರಿಗೆ ತಂಪಾದ ನೀರು, ಮಜ್ಜಿಗೆ, ಹಣ್ಣಿನ ಜ್ಯೂಸ್ ನ್ನು ಹಂಚುವ ಮೂಲಕ ಸೌಹಾರ್ದತೆ ಮೆರೆದಿದ್ದಾರೆ.
ಸುದ್ದಿಗಾರರೊಂದಿಗೆ ಅಹಿಂದಾ ಚಳುವಳಿ ಹಾಗೂ ಕಲಾಂ ಪೌಂಢೇಶನ್ ಟ್ರಸ್ಟಿನ ಪದಾಧಿಕಾರಿ ಶ್ರೀಮತಿ ರುಕ್ಸಾನ ಅವರು ಮಾತನಾಡಿ ಶಿಡ್ಲಘಟ್ಟದಲ್ಲಿ ಹಿಂದೂ – ಮುಸ್ಲಿಂರು ಎಲ್ಲರೂ ಒಗ್ಗಟ್ಟಾಗಿ ಬದುಕುತ್ತಿದ್ದೇವೆ. ಗಣೇಶ ಮೂರ್ತಿಗಳು ವಿಸರ್ಜನೆ ವೇಳೆ ನೀರು, ಜ್ಯೂಸ್ ಹಂಚುವುದು ನಮಗೆ ತುಂಬಾ ಖುಷಿಯಾಗಿದೆ. ಸಮಾಜಕ್ಕೆ ನಾವೆಲ್ಲರೂ ಒಂದಾಗಿದ್ದೇವೆ ಎಂಬ ಉತ್ತಮ ಸಂದೇಶವನ್ನು ಈ ಮೂಲಕ ಸಾರಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಹಿಂದಾ ಚಳುವಳಿ ಹಾಗೂ ಕಲಾಂ ಫೌಂಡೇಶನ್ ಚಾರಿಟೇಬಲ್ ಟ್ರಸ್ಟಿನ ಮುಖಂಡರಾದ ಅಪ್ಸರ್ ಪಾಷ, ಶ್ರೀಮತಿ ರುಕ್ಸಾನ, ಬಾಬು, ಸಲ್ಮಾನ್ ಖಾನ್, ಜಾವೀದ್, ರೇಷ್ಮಾ, ದಿಲ್ ಶಾದ್, ನಸೀಮಾ ಸೇರಿದಂತೆ ಇತರರು ಹಾಜರಿದ್ದರು.



