500 ಕೋಟಿ ರೂ. ಕೊಟ್ಟವರಿಗೆ ಪಂಜಾಬ್ ಮುಖ್ಯಮಂತ್ರಿ ಸಿಗುತ್ತದೆ. ಆದರೆ ನಮ್ಮ ಬಳಿ ಹಣವಿಲ್ಲ, ಆದರೆ ಮುಖ್ಯಮಂತ್ರಿ ಸ್ಥಾನ ನೀಡಿದರೆ ಪಂಜಾಬ್ ಅನ್ನು ಬಂಗಾರದ ರಾಜ್ಯವನ್ನಾಗಿ ಬದಲಾಯಿಸುತ್ತೇವೆ ಎಂದು ಮಾಜಿ ಕ್ರಿಕೆಟಿಗ ಹಾಗೂ ರಾಜಕಾರಣಿ ನವಜ್ಯೋತ್ ಸಿಂಗ್ ಸಿದ್ದು ಪತ್ನಿ ನವಜ್ಯೋತಿ ಕೌರ್ ಸಿದ್ದು ಹೇಳಿದ್ದಾರೆ.
ಪಂಜಾಬ್ ರಾಜ್ಯಪಾಲ ಗುಲಾಬ್ ಚಾಂದ್ ಕಟಾರಿಯಾ ಅವರನ್ನು ಶನಿವಾರ ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಜಾಬ್ ಮುಖ್ಯಮಂತ್ರಿ ಸ್ಥಾನದ ಅಭ್ಯರ್ಥಿಯನ್ನಾಗಿ ಪತಿ ನವಜ್ಯೋತ್ ಸಿಂಗ್ ಸಿದ್ದು ಅವರನ್ನು ಘೋಷಿಸಿದರೆ ಮಾತ್ರ ಅವರು ರಾಜಕೀಯಕ್ಕೆ ಮರಳುತ್ತಾರೆ ಎಂದು ಹೇಳಿದರು.
ಯಾವುದೇ ಪಕ್ಷಕ್ಕಾದರೂ ನಾವು ಹಣ ಕೊಟ್ಟು ಮುಖ್ಯಮಂತ್ರಿ ಸ್ಥಾನ ಪಡೆಯುವ ಸ್ಥಿತಿಯಲ್ಲಿ ಇಲ್ಲ. ಆದರೆ ಮುಖ್ಯಮಂತ್ರಿ ಮಾಡಿದರೆ ಪಂಜಾಬ್ ಹಾಗೂ ಪಂಜಾಬಿಗಳ ಜೀವನವನ್ನು ಬಂಗಾರದಂತೆ ಮಾಡುತ್ತೇವೆ ಎಂದು ಹೇಳಿದರು.
ಯಾರಾದರೂ ಮುಖ್ಯಮಂತ್ರಿ ಸ್ಥಾನಕ್ಕೆ ಹಣ ಕೇಳಿದ್ದಾರೆಯೇ ಎಂದು ಪ್ರಶ್ನಿಸಿದರೆ ಯಾರೂ ನಮ್ಮ ಬಳಿ ಕೇಳಿಲ್ಲ. ಆದರೆ ೫೦೦ ಕೋಟಿ ರೂ. ಕೊಟ್ಟರೆ ಸಿಎಂ ಮಾಡುತ್ತಾರೆ ಎಂಬುದು ಗೊತ್ತಿದೆ ಎಂದು ಅವರು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು.
ಪತಿ ಸಿದ್ದು ಕಾಂಗ್ರೆಸ್ ಪಕ್ಷದ ಜೊತೆ ಗಾಢ ಸಂಬಂಧ ಹೊಂದಿದ್ದಾರೆ. ಪ್ರಿಯಾಂಕಾ ವಾದ್ರಾ ಜೊತೆ ಒಡನಾಟ ಹೊಂದಿದ್ದಾರೆ. ಆದರೆ ಯಾರೂ ಸಿದ್ದು ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡುತ್ತಾರೆ ಎಂದು ಭಾವಿಸುವುದಿಲ್ಲ. ಏಕೆಂದರೆ ಈಗಾಗಲೇ ೫ ಮಂದಿ ಮುಖ್ಯಮಂತ್ರಿ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ ಎಂದು ಅವರು ಹೇಳಿದರು.



