Friday, April 25, 2025
Google search engine
Homeರಾಜಕೀಯರಾಜ್ಯಪಾಲರ ತೀರ್ಮಾನ ರದ್ದುಗೊಳಿಸಿದ ಸುಪ್ರೀಂಕೋರ್ಟ್ ಆದೇಶ ಸ್ವಾಗತಿಸಿದ ಸಿದ್ದರಾಮಯ್ಯ

ರಾಜ್ಯಪಾಲರ ತೀರ್ಮಾನ ರದ್ದುಗೊಳಿಸಿದ ಸುಪ್ರೀಂಕೋರ್ಟ್ ಆದೇಶ ಸ್ವಾಗತಿಸಿದ ಸಿದ್ದರಾಮಯ್ಯ

ಬೆಂಗಳೂರು: ತಮಿಳುನಾಡು ರಾಜ್ಯಪಾಲರ ತೀರ್ಮಾನಗಳನ್ನು ರದ್ದುಪಡಿಸಿದ ಸುಪ್ರೀಂಕೋರ್ಟ್ ನಿರ್ಧಾರವನ್ನು ಸ್ವಾಗತಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಸುಪ್ರೀಂಕೋರ್ಟ್ ಆದೇಶ ರಾಜ್ಯಪಾಲರ ಮೂಲಕ ಮೋದಿ ಸರ್ಕಾರದ ತೆರೆಮರೆ ತಂತ್ರವನ್ನು ಬಯಲು ಮಾಡಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಎಕ್ಸ್ ನಲ್ಲಿ ಬುಧವಾರ ಸುಪ್ರೀಂಕೋರ್ಟ್ ಆದೇಶವನ್ನು ಸ್ವಾಗತಿಸಿ ಪ್ರತಿಕ್ರಿಯೆ ನೀಡಿರುವ ಅವರು, ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿದ್ದ ತಮಿಳುನಾಡಿನ ರಾಜ್ಯಪಾಲರಾದ ಆರ್.ಎನ್.ರವಿ ಅವರನ್ನು ತರಾಟೆಗೆ ತೆಗೆದುಕೊಂಡು, ಏಕಪಕ್ಷೀಯವಾಗಿ ಅವರು ಕೈಗೊಂಡಿರುವ ತೀರ್ಮಾನಗಳನ್ನು ರದ್ದುಪಡಿಸಿರುವ ಸುಪ್ರೀಂ ಕೋರ್ಟ್ ತೀರ್ಪು ದೇಶದ ಎಲ್ಲ ರಾಜ್ಯಪಾಲರು ಮತ್ತು ತೆರೆಯ ಹಿಂದೆ ಆಟವಾಡುತ್ತಿದ್ದ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆಯ ಪಾಠವಾಗಿದೆ ಎಂದಿದ್ದಾರೆ.

ಸುಪ್ರೀಂಕೋರ್ಟಿನ ತೀರ್ಪು ರಾಜ್ಯಪಾಲ ಹುದ್ದೆಯ ಕರ್ತವ್ಯಗಳ ಇತಿ-ಮಿತಿಯನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಿರುವ ಕಾರಣದಿಂದಾಗಿ ಈ ಬಗ್ಗೆ ಇದ್ದ ಗೊಂದಲಗಳು ನಿವಾರಣೆಯಾಗಿದೆ. ರಾಜ್ಯ ಸರ್ಕಾರ ಅಂಗೀಕರಿಸಿದ ಮಸೂದೆಗಳಿಗೆ ರಾಪ್ಟ್ರಪತಿಗಳ ಅಂಕಿತ ಪಡೆಯುವ ಪ್ರಕ್ರಿಯೆ ಗರಿಷ್ಠ ಮೂರು ತಿಂಗಳ ಅವಧಿಯೊಳಗೆ ನಡೆಯಬೇಕು ಎಂದು ಕಾಲಮಿತಿಯನ್ನು ಸುಪ್ರೀಂ ಕೋರ್ಟ್ ನಿಗದಿಪಡಿಸಿರುವುದರಿಂದ ಇಲ್ಲಿಯ ವರೆಗಿನ ಗೊಂದಲಗಳು ನಿವಾರಣೆಯಾಗಿದೆ ಎಂದು ಅವರು ಹೇಳಿದರು.

ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ರಾಜ್ಯಪಾಲರು ಸಂವಿಧಾನದ ಆಶಯ ಮತ್ತು ಸಾಂವಿಧಾನಿಕ ಹುದ್ದೆಯ ಘನತೆ-ಗೌರವವನ್ನು ಗಾಳಿಗೆ ತೂರಿ ಕೇಂದ್ರ ಸರ್ಕಾರದ ಕೈಗೊಂಬೆಗಳಾಗಿ ವರ್ತಿಸುತ್ತಿರುವ ಆರೋಪಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚು ಕೇಳಿ ಬರತೊಡಗಿವೆ. ಇದರಿಂದಾಗಿ ಗೌರವಾನ್ವಿತ ರಾಜ್ಯಪಾಲರ ಹುದ್ದೆ ಜನತೆಯ ವಿಶ್ವಾಸವನ್ನು ಕಳೆದುಕೊಳ್ಳುವಂತಾಗಿದೆ ಎಂದು ಅವರು ನುಡಿದರು.

ತಮ್ಮ ಪಕ್ಷವನ್ನು ಜನ ತಿರಸ್ಕರಿಸಿದ ರಾಜ್ಯಗಳಲ್ಲಿ ತಮ್ಮ ಅಣತಿಯನ್ನು ಪಾಲಿಸುವ ರಾಜ್ಯಪಾಲರನ್ನು ನೇಮಿಸಿ ಅವರ ಮೂಲಕ ಪರೋಕ್ಷವಾಗಿ ಆಡಳಿತವನ್ನು ನಿಯಂತ್ರಿಸಲು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾಡುತ್ತಿರುವ ಪ್ರಯತ್ನ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬಗೆಯುತ್ತಿರುವ ದ್ರೋಹವಾಗಿದೆ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಕರ್ನಾಟಕದಲ್ಲಿ ಕೂಡಾ ವಿಧಾನಮಂಡಲ ಅಂಗೀಕರಿಸಿದ ಕೆಲವು ಮಸೂದೆಗೆಳ ಬಗ್ಗೆ ರಾಷ್ಟ್ರಪತಿಗಳ ಅಂಕಿತ ಪಡೆಯಲು ರಾಜ್ಯಪಾಲರು ವಿಳಂಬ ಧೋರಣೆಯನ್ನು ಅನುಸರಿಸುತ್ತಿರುವುದು ಸಂಘರ್ಷಕ್ಕೆ ಕಾರಣವಾಗಿದೆ. ಹೀಗಿದ್ದರೂ ನಮ್ಮ ಸರ್ಕಾರ ಅನಗತ್ಯವಾಗಿ ಈ ಬೆಳವಣಿಗೆಗೆ ರಾಜಕೀಯ ಬೆರೆಸದೆ ಸಂಯಮದಿಂದ ನಡೆದುಕೊಂಡಿದೆ. ರಾಜ್ಯ ಸರ್ಕಾರ ಮತ್ತು ರಾಜಭವನದ ನಡುವಿನ ಅನಗತ್ಯ ಸಂಘರ್ಷವನ್ನು ಸುಪ್ರೀಂ ಕೋರ್ಟ್ ನ ಈ ತೀರ್ಪು ಶಾಶ್ವತವಾಗಿ ಕೊನೆಗೊಳಿಸಲಿದೆ ಎಂದು ನಂಬಿದ್ದೇನೆ ಎಂದು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments