ಸಂಘಟಿತ ದಾಳಿ ನಡೆಸಿದ ಕರ್ನಾಟಕದ ಬೌಲರ್ ಗಳು ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದ ಮೊದಲ ದಿನವೇ ಮೇಲುಗೈ ಸಾಧಿಸಿದೆ.
ಮುಂಬೈನಲ್ಲಿ ಶುಕ್ರವಾರ ಆರಂಭಗೊಂಡ 4ನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮುಂಬೈ ತಂಡವನ್ನು ಮೊದಲ ಇನಿಂಗ್ಸ್ ನಲ್ಲಿ 120 ರನ್ ಗಳಿಗೆ ಆಲೌಟ್ ಮಾಡಿದ ಕರ್ನಾಟಕ ದಿನದಾಂತ್ಯಕ್ಕೆ ಮೊದಲ ಇನಿಂಗ್ಸ್ ನಲ್ಲಿ 2 ವಿಕೆಟ್ ಕಳೆದುಕೊಂಡು 110 ರನ್ ಗಳಿಸಿದ್ದು ಮುನ್ನಡೆ ಸಾಧಿಸಲು ಕೇವಲ 10 ರನ್ ಗಳಿಸಬೇಕಾಗಿದೆ.
ತವರಿನ ಅಂಗಳದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಲು ನಿರ್ಧರಿಸಿದ ಮುಂಬೈ ತಂಡ 48.1 ಓವರ್ ಗಳಲ್ಲಿ ಚಹಾ ವಿರಾಮಕ್ಕೂ ಮುನ್ನವೇ 120 ರನ್ ಗೆ ಪತನಗೊಂಡಿತು. ತಂಡದ ಪರ ಆರಂಭಿಕ ಅಖಿಲ್ ಹೆರ್ವಾಡ್ಕರ್ 138 ಎಸೆತಗಳಲ್ಲಿ 9 ಬೌಂಡರಿ ಸಹಾಯದಿಂದ 60 ರನ್ ಗಳಿಸಿದ್ದು ಬಿಟ್ಟರೆ ಉಳಿದ ಯಾವುದೇ ಬ್ಯಾಟ್ಸ್ ಮನ್ ಗಳು ನೆಲಕಚ್ಚಿ ಆಡಲು ಕರ್ನಾಟಕದ ಬೌಲರ್ ಗಳು ಅವಕಾಶವನ್ನೇ ನೀಡಲಿಲ್ಲ.
ಕರ್ನಾಟಕದ ಪರ ವಿದ್ವತ್ ಕಾವೇರಪ್ಪ, ಪ್ರಸಿದ್ಧ ಕೃಷ್ಣ ಮತ್ತು ಶ್ರೇಯಸ್ ಗೋಪಾಲ್ ತಲಾ 3 ವಿಕೆಟ್ ಪಡೆದು ಮುಂಬೈ ಪತನಕ್ಕೆ ಕಾರಣವಾದರು. ವಿದ್ಯಾಧರ್ ಪಟೇಲ್ 1 ವಿಕೆಟ್ ಕಿತ್ತರು.
ನಂತರ ಕಣಕ್ಕಿಳಿದ ಕರ್ನಾಟಕ ತಂಡಕ್ಕೆ ಕೆಎಲ್ ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಮೊದಲ ವಿಕೆಟ್ ಗೆ 50 ರನ್ ಪೇರಿಸಿ ಉತ್ತಮ ಆರಂಭ ನೀಡಿದರು. ಕೆಎಲ್ ರಾಹುಲ್ 26 ಎಸೆತಗಳಲ್ಲಿ 6 ಬೌಂಡರಿ ಒಳಗೊಂಡ 28 ರನ್ ಗಳಿಸಿದ್ದಾಗ ಅವಸ್ತಿ ದಾಳಿಗೆ ವಿಕೆಟ್ ಕೈ ಚೆಲ್ಲಿ ನಿರಾಸೆ ಮೂಡಿಸಿದರು.
ಮಯಾಂಕ್ ಅಗರ್ವಾಲ್ 81 ಎಸೆತಗಳಲ್ಲಿ 8 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 54 ರನ್ ಬಾರಿಸಿ ಅರ್ಧಶತಕದ ಗೌರವದೊಂದಿಗೆ ವಿಕೆಟ್ ಕಾಯ್ದುಕೊಂಡಿದ್ದಾರೆ. ನಾಯಕ ದೇವದತ್ ಪಡಿಕ್ಕಲ್ (17) ಮತ್ತೊಮ್ಮೆ ವಿಫಲರಾದರು. 3ರನ್ ಗಳಿಸಿರುವ ಕರುಣ್ ನಾಯರ್ ಮತ್ತು ಮಯಾಂಕ್ ವಿಕೆಟ್ ಕಾಯ್ದುಕೊಂಡಿದ್ದಾರೆ.



