ನವದೆಹಲಿ: ಎರಡು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆದ ಚುನಾವಣೆಯಲ್ಲಿ ಮತದಾರರು ಭರ್ಜರಿಯಾಗಿ ಪ್ರತಿಕ್ರಿಯಿಸಿದ್ದು, ಬಿಸಿಲಿನ ನಡುವೆಯೂ ಪ್ರಮಾಣದಲ್ಲಿ ಮತದಾನ ಮಾಡಿದ್ದಾರೆ.
ಕೇರಳಂ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಹಾಗೂ ಕೇಂದ್ರಾಡಳಿ ಪ್ರದೇಶವಾದ ಪುದುಚೇರಿಯಲ್ಲಿ ಗುರುವಾರ ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡದಂತೆ ಶಾಂತಿಯುತವಾಗಿ ಮತದಾನವಾಗಿದೆ.
ಸಂಜೆ 6 ಗಂಟೆಗೆ ಮತದಾನ ಅಂತ್ಯಗೊಂಡಾಗ ಕೇರಳದಲ್ಲಿ ಶೇ.78.23, ಅಸ್ಸಾಂನಲ್ಲಿ ಶೇ.85.64 ಮತ್ತು ಪುದುಚೇರಿಯಲ್ಲಿ ಶೇ.89.87ರಷ್ಟು ಮತದಾನವಾಗಿದೆ. ಇದು ಕಳೆದ ಬಾರಿಗೆ ಹೋಲಿಸಿದರೆ ದಾಖಲೆ ಮತದಾನವಾಗಿದೆ.
ಅಸ್ಸಾಂನಲ್ಲಿ 126 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಕಳೆದ ಬಾರಿ ಶೇ.82.04ರಷ್ಟು ಮತದಾನವಾಗಿತ್ತು.
ಕೇರಳದಲ್ಲಿ 140 ಸ್ಥಾನಗಳಿಗೆ ಮತದಾನ ನಡೆದಿದ್ದು, ಸಿಪಿಎಂ ಮುಖಂಡ ಪಿಣರಾಯ್ ವಿಜಯನ್ ಮೂರನೇ ಬಾರಿ ಅಧಿಕಾರ ಹಿಡಿಯುವ ಮೂಲಕ ಹ್ಯಾಟ್ರಿಕ್ ಗಳಿಸುವ ವಿಶ್ವಾಸದಲ್ಲಿದ್ದಾರೆ. ಈ ಬಾರಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಪ್ರಬಲ ಪೈಪೋಟಿ ನೀಡಿದೆ.
ಪುದುಚೇರಿಯಲ್ಲಿ ಇದೇ ಮೊದಲ ಬಾರಿ ದಾಖಲೆಯ ಶೇ. 90ರಷ್ಟು ಮತದಾನ ದಾಖಲಾಗಿದೆ. 2006ರಲ್ಲಿ ದಾಖಲೆಯ ಶೇ.86ರಷ್ಟು ಮೊದಲ ಬಾರಿ ಮತದಾನವಾಗಿತ್ತು. ಈ ಬಾರಿ ಈ ದಾಖಲೆಯನ್ನೂ ಅಳಿಸಿ ಹಾಕಿದೆ.
ಚುನಾವಣಾ ಅಧಿಕಾರಿ ಸಾವು
ವಿಧಾನಸಭಾ ಚುನಾವಣೆ ನಡೆಯುತ್ತಿರುವಂತೆಯೇ ಗುರುವಾರ ಅಸ್ಸಾಂನ ಸೋನಿತ್ಪುರ ಜಿಲ್ಲೆಯಲ್ಲಿ ಚುನಾವಣಾ ಅಧಿಕಾರಿಯೊಬ್ಬರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ. ದೇಬೆನ್ ಹೊರೊ (45) ಅವರನ್ನು ನಡುರ್ ಕ್ಷೇತ್ರದ ಎರಡನೇ ಚುನಾವಣಾ ಅಧಿಕಾರಿಯಾಗಿ ನಿಯೋಜಿಸಲಾಗಿತ್ತು ಎಂದು ತಿಳಿಸಿದೆ.
ಹೋರೆ ಅವರನ್ನು ಡೋಲಾಪಾನಿ ಎಲ್ಪಿ ಶಾಲೆಯ ಮತಗಟ್ಟೆ ಸಂಖ್ಯೆ 230 ರಲ್ಲಿ ನಿಯೋಜಿಸಲಾಗಿತ್ತು. ಇಂದು ಬೆಳಗ್ಗೆ ಅವರು ಹಾಸಿಗೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರನ್ನು ಆಂಬ್ಯುಲೆನ್ಸ್ ಮೂಲಕ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ವೈದ್ಯರು ಅವರನ್ನು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.
ಸಾವಿಗೆ ಕಾರಣವನ್ನು ಇನ್ನೂ ದೃಢಪಡಿಸಲಾಗಿಲ್ಲ, ಆದರೂ ವೈದ್ಯರು ಆಧಾರವಾಗಿರುವ ವೈದ್ಯಕೀಯ ಸ್ಥಿತಿ ಇದಕ್ಕೆ ಕಾರಣ ಎಂದು ಶಂಕಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೋರೆ ಚರಿದೂರ್ ಸರ್ಕಾರಿ ಶಾಲೆಯಲ್ಲಿ ಸಹಾಯಕ ಶಿಕ್ಷಕರಾಗಿದ್ದರು.



