ಚೇಸಿಂಗ್ ಮಾಸ್ಟರ್ ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ಅಬ್ಬರದ ಆಟದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 5 ವಿಕೆಟ್ ಗಳಿಂದ ಗುಜರಾತ್ ಟೈಟಾನ್ಸ್ ತಂಡವನ್ನು ಸೋಲಿಸಿ ಐಪಿಎಲ್ ಟಿ-20 ಟೂರ್ನಿಯಲ್ಲಿ ಪ್ಲೇಆಫ್ ಗೆ ಮತ್ತಷ್ಟು ಹತ್ತಿರವಾಗಿದೆ. ಈ ಮೂಲಕ ತವರಿನಲ್ಲಿ ಆಡಿದ ಕೊನೆಯ ಲೀಗ್ ಪಂದ್ಯ ಗೆದ್ದು ಆರ್ ಸಿಬಿ ಬೀಗಿತು.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡ 20 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 205 ರನ್ ಸಂಪಾದಿಸಿತು.
ಕಠಿಣ ಗುರಿ ಬೆಂಬತ್ತಿದ ಆರ್ ಸಿಬಿ 7 ಎಸೆತಗಳು ಬಾಕಿ ಇರುವಂತೆಯೇ 5 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು. ಇದು ಬೆಂಗಳೂರಿನಲ್ಲಿ ಆರ್ ಸಿಬಿ ಅತ್ಯಧಿಕ ಮೊತ್ತವನ್ನು ಯಶಸಸ್ವಿಯಾಗಿ ಬೆಂಬತ್ತಿದ ದಾಖಲೆ ಬರೆದರೆ, ಸಾಯಿ ಸುದರ್ಶನ್ ಶತಕ ವ್ಯರ್ಥಗೊಂಡಿತು.
ಆರ್ ಸಿಬಿ ತಂಡ ಆಡಿದ 7 ಪಂದ್ಯಗಳಲ್ಲಿ 5 ಜಯ ಹಾಗೂ 2 ಸೋಲಿನೊಂದಿಗೆ 10 ಅಂಕ ಸಂಪಾದಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿತು. ಗುಜರಾತ್ ಟೈಟಾನ್ಸ್ 7 ಪಂದ್ಯಗಳಲ್ಲಿ 3 ಜಯ ಹಾಗೂ 4 ಸೋಲಿನೊಂದಿಗೆ 6 ಅಂಕದೊಂದಿಗೆ 7ನೇ ಸ್ಥಾನಕ್ಕೆ ಕುಸಿದಿದ್ದು, ಪ್ಲೇಆಫ್ ಹಾದಿಯನ್ನು ಕಗ್ಗಂಟು ಮಾಡಿಕೊಂಡಿತು.
ಫಿಲ್ ಸಾಲ್ಟ್ ಬದಲು ಕಣಕ್ಕಿಳಿದ ಜೇಕಬ್ ಬೆಥಾಲಿ (14) ಬೇಗನೇ ನಿರ್ಗಮಿಸಿದರು. ಮೊದಲ ಎಸೆತದಲ್ಲಿ ಜೀವದಾನ ಪಡೆದ ವಿರಾಟ್ ಕೊಹ್ಲಿ 44 ಎಸೆತಗಳಲ್ಲಿ 8 ಬೌಂಡರಿ ಮತ್ತು 4 ಸಿಕ್ಸರ್ ಒಳಗೊಂಡ 81 ರನ್ ಬಾರಿಸಿ ಔಟಾದರೆ, ದೇವದತ್ ಪಡಿಕ್ಕಲ್ 27 ಎಸೆತಗಳಲ್ಲಿ 9 ಬೌಂಡರಿ ಮತ್ತು 6 ಸಿಕ್ಸರ್ ಸಹಾಯದಿಂದ 55 ರನ್ ಸಿಡಿಸಿ ನಿರ್ಗಮಿಸಿದರು. ಇವರಿಬ್ಬರು ಎರಡನೇ ವಿಕೆಟ್ ಗೆ 111 ರನ್ ಜೊತೆಯಾಟ ನಿಭಾಯಿಸಿದರು. ಕೊನೆಯಲ್ಲಿ ಕೃನಾಲ್ ಪಂಡ್ಯ (ಅಜೇಯ 23) ಟಿಮ್ ಡೇವಿಡ್ (10) ಮತ್ತು ರಜತ್ ಪಟಿದಾರ್ (10) ಕಿರು ಕಾಣಿಕೆ ನೀಡಿದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ಸಾಯಿ ಸುದರ್ಶನ್ ಅವರ ಶತಕದಿಂದ ಬೃಹತ್ ಮೊತ್ತ ಕಲೆಹಾಕಿತು. ಸಾಯಿ ಸುದರ್ಶನ್ 58 ಎಸೆತಗಳಲ್ಲಿ 11 ಬೌಂಡರಿ ಮತ್ತು 5 ಸಿಕ್ಸರ್ ಸಹಾಯದಿಂದ ಬರೋಬ್ಬರಿ 100 ರನ್ ಗಳಿಸಿದರು. ಇದರು ಅವರ ಎರಡನೇ ಹಾಗೂ ಒಟ್ಟಾರೆ ಮೂರನೇ ಶತಕವಾಗಿದೆ. ಗಿಲ್ ಮತ್ತು ಸಾಯಿ ಮೊದಲ ವಿಕೆಟ್ ಗೆ 128 ರನ್ ಜೊತೆಯಾಟದಿಂದ ಭರ್ಜರಿ ಆರಂಭ ನೀಡಿದರು. ಗಿಲ್ 32 ರನ್ ಗಳಿಸಿ ಔಟಾದರು. ಕೊನೆಯಲ್ಲಿ ಜೇಸನ್ ಹೋಲ್ಡರ್ 10 ಎಸೆತದಲ್ಲಿ 23 ರನ್ ಬಾರಿಸಿ ತಂಡದ ಮೊತ್ತ 200ರ ಗಡಿ ದಾಟಿಸಿದರು.



