ಉತ್ತರಾಖಂಡ್ ನ ಉತ್ತರ ಕಾಶಿಯಲ್ಲಿ ಮೇಘಸ್ಫೋಟದಿಂದ ಸಂಭವಿಸಿದ ಭೀಕರ ಪ್ರವಾಹ ಸೇನಾ ಶಿಬಿರಕ್ಕೆ ನುಗ್ಗಿದ್ದರಿಂದ ರಕ್ಷಣೆಗೆ ಬಂದಿದ್ದ ಕನಿಷ್ಠ 10 ಯೋಧರು ಮೃತಪಟ್ಟಿದ್ದಾರೆ.
ಮಂಗಳವಾರ ಮಧ್ಯಾಹ್ನ 1.45ಕ್ಕೆ ದಾರಲಿ ಗ್ರಾಮದ ಸಮೀಪದ ಖೀರ್ ಲೇಕ್ ನಲ್ಲಿ ಮೇಘಸ್ಫೋಟ ಸಂಭವಿಸಿದ್ದು, ಕೇವಲ 4 ಕಿ.ಮೀ. ದೂರದ ಹರ್ಷಿಲ್ ನಲ್ಲಿದ್ದ ಸೇನಾ ಶಿಬಿರದ ಮೇಲೆ ಪ್ರವಾಹದ ನೀರು ನುಗ್ಗಿದೆ.
ಕಲ್ಲು, ಮಣ್ಣು, ಕೇಸರಿನಿಂದ ತುಂಬಿದ್ದ ಪ್ರವಾಹದ ನೀರು ಸುಮಾರು 150 ಯೋಧರು ಉಳಿದುಕೊಂಡಿದ್ದ ಸೇನಾ ಶಿಬಿರದ ಮೇಲೆ ನುಗ್ಗಿದೆ. ಮೇಘಸ್ಫೋಟ ಸಂಭವಿಸಿದ ಕೇವಲ 10 ನಿಮಿಷಗಳಲ್ಲಿ 4 ಕಿ.ಮೀ. ಸಾಗಿದ ಪ್ರವಾಹ ಸೇನೆ ಶಿಬಿರವನ್ನು ಆವರಿಸಿಕೊಂಡಿದೆ.
ದಾರಲಿ ಗ್ರಾಮದಲ್ಲಿ ಮನೆ, ಅಂಗಡಿ ಹಾಗೂ ಹೋಟೆಲ್ ಗಳು ಇರುವ ಸಣ್ಣ ಗ್ರಾಮವಾಗಿದ್ದು, ಈ ಗ್ರಾಮದ ಮೇಲೆ ಮೇಘಸ್ಫೋಟದ ಪ್ರವಾಹ ಅಪ್ಪಳಿಸಿದೆ. ಇದರಿಂದ ಕನಿಷ್ಠ 4 ಮಂದಿ ಮೃತಪಟ್ಟಿದ್ದು 50 ಮಂದಿ ನಾಪತ್ತೆಯಾಗಿದ್ದಾರೆ.
ಘಟನಾ ಸ್ಥಳದಲ್ಲಿ ಎನ್ ಡಿಆರ್ ಎಫ್ ಮತ್ತು ಎಸ್ ಡಿಆರ್ ಎಫ್ ಸಿಬ್ಬಂದಿ ಆಗಮಿಸಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ. ಮೇಘಸ್ಫೋಟದ ಹಾನಿ ತೀವ್ರವಾಗಿದೆ. ಆದರೆ ಪ್ರವಾಹದ ನೀರು ಇಳಿದಿದ್ದರೂ ಬಹುತೇಕ ಗ್ರಾಮ ಕೆಸರಿನಿಂದ ಮುಚ್ಚಿಕೊಂಡಿದೆ. ನಾವು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದೇವೆ ಎಂದು ಎನ್ ಡಿಆರ್ ಎಫ್ ಅಧಿಕಾರಿ ತಿಳಿಸಿದ್ದಾರೆ.



