ಚೆನ್ನೈ: ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾದ ಆರು ವರ್ಷಗಳ ಹಿಂದೆ ತೂತುಕುಡಿ ಜಿಲ್ಲೆಯಲ್ಲಿ ನಡೆದ ತಂದೆ-ಮಗನ ಲಾಕಪ್ ಡೆತ್ ಪ್ರಕರಣದಲ್ಲಿ ತಮಿಳುನಾಡಿನ 9 ಪೊಲೀಸರಿಗೆ ಮರಣದಂಡನೆ ಶಿಕ್ಷೆ ವಿಧಿಸಿ ತಮಿಳುನಾಡಿನ ಮಧುರೈ ಜಿಲ್ಲೆಯ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.
ವ್ಯಾಪಾರಿ ಪಿ. ಜಯರಾಜ್ ಮತ್ತು ಅವರ ಪುತ್ರ ಜೆ. ಬೆನಿಕ್ಸ್ ಅವರ ಕಸ್ಟಡಿ ಸಾವಿನ ಪ್ರಕರಣದಲ್ಲಿ ತಮಿಳುನಾಡಿನ ಮಧುರೈ ಜಿಲ್ಲೆಯ ನ್ಯಾಯಾಲಯವು ಸೋಮವಾರ ಒಂಬತ್ತು ಪೊಲೀಸರಿಗೆ ಮರಣದಂಡನೆ ಶಿಕ್ಷೆ ವಿಧಿಸಿದೆ.
ಇನ್ಸ್ಪೆಕ್ಟರ್ ಶ್ರೀಧರ್, ಸಬ್ ಇನ್ಸ್ಪೆಕ್ಟರ್ಗಳಾದ ಬಾಲಕೃಷ್ಣನ್ ಮತ್ತು ರಘು ಗಣೇಶ್, ಪೊಲೀಸ್ ಕಾನ್ ಸ್ಟೇಬಲ್ ಗಳಾದ ಮುರುಗನ್, ಸಮದುರೈ, ಮುತ್ತುರಾಜ, ಚೆಲ್ಲದುರೈ, ಥಾಮಸ್ ಫ್ರಾನ್ಸಿಸ್ ಮತ್ತು ವೇಲುಮುತ್ತು ಗಲ್ಲು ಶಿಕ್ಷೆಗೆ ಗುರಿಯಾದ ಪೊಲೀಸರು.
ಜೂನ್ 19, 2020 ರಂದು, ಮೊಬೈಲ್ ಅಂಗಡಿ ಮಾಲೀಕ ಪಿ ಜಯರಾಜ್ ಮತ್ತು ಅವರ ಪುತ್ರ ಜೆ. ಬೆನಿಕ್ಸ್ ಅವರ ಲಾಕಪ್ ಡೆತ್ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯ ಸೋಮವಾರ ಮಹತ್ವದ ತೀರ್ಪು ನೀಡಿದೆ.
ಜಯರಾಜ್ ಮತ್ತು ಬೆನಿಕ್ಸ್ ಲಾಕ್ಡೌನ್ ಸಮಯದಲ್ಲಿ ಅನುಮತಿ ನೀಡಿದ ಸಮಯಕ್ಕಿಂತ ಹೆಚ್ಚಿನ ಅವಧಿ ಅಂಗಡಿಯನ್ನು ತೆರೆದಿದ್ದಕ್ಕಾಗಿ ಪೊಲೀಸರು ಬಂಧಿಸಿದ್ದರು. ಇಬ್ಬರನ್ನು ಸಾಥನ್ಕುಲಂ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಈ ಅವಧಿಯಲ್ಲಿ ತಂದೆ-ಮಗ ಮೃತಪಟ್ಟಿದ್ದರು.
ಲಾಕಪ್ ನಲ್ಲಿ ಪೊಲೀಸರು ರಾತ್ರಿಯಿಡೀ ಹಲ್ಲೆ ನಡೆಸಿ ಹಿಂಸೆ ನೀಡಿದ್ದರಿಂದ ಗುದನಾಳದ ರಕ್ತಸ್ರಾವ ಸೇರಿ ಹಲವು ಗಂಭೀರ ಗಾಯಗಳಿಂದ ಮೃತಪಟ್ಟಿದ್ದರು. ಪೊಲೀಸರು ನೀಡಿದ ಹಿಂಸೆಯಿಂದ ಮೃತಪಟ್ಟಿರುವುದಾಗಿ ಸಂಬಂಧಿರು ದೂರು ನೀಡಿದ್ದರು.
ಮದ್ರಾಸ್ ಹೈಕೋರ್ಟ್ ನೀಡಿದ ನಿರ್ದೇಶನದ ಅನ್ವಯ ರಾಜ್ಯದ ಸಿಬಿ-ಸಿಐಡಿ ತನಿಖೆ ನಡೆಸಿ 10 ಪೊಲೀಸರನ್ನು ಬಂಧಿಸಿತು. ಬಂಧಿತರಲ್ಲಿ ಒಬ್ಬ ಇನ್ಸ್ಪೆಕ್ಟರ್, ಇಬ್ಬರು ಸಬ್-ಇನ್ಸ್ಪೆಕ್ಟರ್ಗಳು ಮತ್ತು ಹಲವಾರು ಕಾನ್ಸ್ಟೆಬಲ್ಗಳು ಪ್ರಕರಣದಲ್ಲಿ ಭಾಗಿಯಾಗಿದ್ದು ಆರೋಪಿಗಳಾಗಿದ್ದಾರೆ ಎಂದು ಆರೋಪ ಹೊರಿಸಿ ಎಫ್ ಐಆರ್ ದಾಖಲಿಸಿತ್ತು.
ತನಿಖೆಯ ಸಮಯದಲ್ಲಿ ತಂದೆ ಮತ್ತು ಮಗನ ಮೇಲೆ ಇಡೀ ಹಲ್ಲೆ ನಡೆಸಲಾಯಿತು ಮತ್ತು ಠಾಣೆಯಲ್ಲಿ ಟೇಬಲ್ಗಳು ಮತ್ತು ಲಾಠಿಗಳಲ್ಲಿ ರಕ್ತದ ಕಲೆಗಳಿವೆ ಎಂದು ತನಿಖಾಧಿಕಾರಿಗಳಿಗೆ ಮಹಿಳಾ ಕಾನ್ಸ್ಟೆಬಲ್ ನೀಡಿದ ಸಾಕ್ಷ್ಯ ಪ್ರಮುಖ ಸಾಕ್ಷಿಯಾಗಿ ಪರಿಗಣಿಸಲಾಯಿತು.
ಪೊಲೀಸರು ಹಲ್ಲೆ ನಡೆಸಿದ ಸಿಸಿಟಿವಿ ದೃಶ್ಯ ಸೇರಿದಂತೆ ಹಲವು ಸಾಕ್ಷ್ಯಗಳನ್ನು ನಾಶಪಡಿಸಿದ್ದರಿಂದ ತನಿಖಾಧಿಕಾರಿಗಳಿಗೆ ಆರೋಪ ಸಾಬೀತು ಮಾಡುವುದು ಕಷ್ಟವಾಗಿತ್ತು. ಆದರೆ ಮಹಿಳಾ ಕಾನ್ ಸ್ಟೇಬಲ್ ನೀಡಿದ ಹೇಳಿಕೆ ಪ್ರಕರಣದ ದಿಕ್ಕನ್ನೇ ಬದಲಿಸಿತು.



