ಕೈದಿಯನ್ನು ಭೇಟಿ ಮಾಡುವ ನೆಪದಲ್ಲಿ ಜೈಲಿನೊಳಗೆ ಗಾಂಜಾ ತಂದಿದ್ದ ಇಬ್ಬರು ದುಷ್ಕರ್ಮಿಗಳು ಜೈಲಿನ ಗೇಟ್ ನಲ್ಲಿಯೇ ಸಿಕ್ಕಿಬಿದ್ದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿ ಈ ಘಟನೆ ನಡೆದಿದ್ದು, ಮದರಿ ಪಾಳ್ಯದ ನಿವಾಸಿಗಳಾದ ಮಹಮ್ಮದ್ ಅಕ್ಟರ್ (22) ಮತ್ತು ಅಜ್ಗರ್ (21) ಅವರನ್ನು ಬಂಧಿಸಲಾಗಿದೆ.
ಕೈದಿಯೊಬ್ಬನನ್ನು ಭೇಟಿ ಮಾಡುವ ನೆಪದಲ್ಲಿ ಬಂದಿದ್ದ ಆರೋಪಿಗಳು ಅಕ್ರಮವಾಗಿ ಗಾಂಜಾವನ್ನು ಜೈಲಿನೊಳಗೆ ಸಾಗಿಸಲು ಮುಂದಾಗಿದ್ದರು. ತಪಾಸಣೆ ವೇಳೆ ಇದನ್ನು ಪತ್ತೆಹಚ್ಚಿದ ಕಾರಾಗೃಹ ಭದ್ರತಾ ಸಿಬ್ಬಂದಿ, ಆರೋಪಿಗಳನ್ನು ಬಂಧಿಸಿ ತುಂಗಾನಗರ ಪೊಲೀಸ್ ಠಾಣೆಯ ಪೊಲೀಸರಿಗೆ ಒಪ್ಪಿಸಿದ್ದಾರೆ.
ಸೋಮವಾರ ಸಂಜೆ ಈ ಇಬ್ಬರು ಆರೋಪಿಗಳು ಕೇಂದ್ರ ಕಾರಾಗೃಹದಲ್ಲಿರುವ ಕೈದಿಯನ್ನು ಭೇಟಿ ಮಾಡಲು ಅನುಮತಿ ಕೋರಿ ತೆರಳಿದ್ದರು. ಈ ವೇಳೆ ಅವರನ್ನು ಭದ್ರತಾ ಸಿಬ್ಬಂದಿ ತಪಾಸಣೆಗೆ ಒಳಪಡಿಸಿದ್ದರು. ಆಗ ಆರೋಪಿಗಳ ಪ್ಯಾಂಟ್ನ ಒಳಭಾಗದಲ್ಲಿ ಗಾಂಜಾ ಇರುವುದು ಗೊತ್ತಾಗಿದೆ.
ತಕ್ಷಣವೇ ಭದ್ರತಾ ಸಿಬ್ಬಂದಿ ತುಂಗಾನಗರ ಪೊಲೀಸ್ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಆರೋಪಿಗಳಿಂದ ಗಾಂಜಾ ಸೀಜ್ ಮಾಡಿ ಆರೋಪಿಗಳನ್ನ ಬಂಧಿಸಿದ್ದಾರೆ.



