ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಅದ್ಧೂರಿಯಾಗಿ ಪ್ರತಿಷ್ಠಾಪಿಸಲಾಗಿದ್ದ ಸಾರ್ವಜನಿಕ ಗಣೇಶ ಮೂರ್ತಿಯನ್ನೇ ಕಳ್ಳರು ಕಳವು ಮಾಡಿಕೊಂಡು ಹೋದ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಯರಗಕಟ್ಟೆ ಗ್ರಾಮದಲ್ಲಿ ನಡೆದಿದೆ.
ಯರಗಕಟ್ಟೆ ಗ್ರಾಮದಲ್ಲಿ ರಾತ್ರೋರಾತ್ರಿ ದುಷ್ಕರ್ಮಿಗಳು ಗಣಪತಿ ಮೂರ್ತಿಯನ್ನೇ ಕಳವು ಮಾಡಿರುವ ಬಗ್ಗೆ ಗ್ರಾಮಸ್ಥರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಗ್ರಾಮಸ್ಥರೆಲ್ಲ ಸೇರಿಕೊಂಡು ಕಳೆದ ದಿನವಷ್ಟೇ ಸಂಭ್ರಮದಿಂದ ಒಟ್ಟಾಗಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ, ಭಕ್ತಿ ಸಮರ್ಪಿಸಿದ್ದೆವು. ರಾತ್ರಿ ಪೂಜೆ ಸಲ್ಲಿಸಿದ ನಂತರ ಎಲ್ಲರೂ ತಮ್ಮ ತಮ್ಮ ಮನೆಗೆ ಹೋಗಿದ್ದರು. ಯಾರೂ ಇಲ್ಲದ ವೇಳೆ, ರಾತ್ರೋರಾತ್ರಿ ಕಳ್ಳರು ಗಣಪತಿ ಮೂರ್ತಿಯನ್ನು ಕಳ್ಳತನ ಮಾಡಿಕೊಂಡು ಕಾಲ್ಕಿತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಮರುದಿನ ಬೆಳಗ್ಗೆ ಗಣೇಶನಿಗೆ ಪೂಜೆ ಸಲ್ಲಿಸಲು ಟೆಂಟ್ ಬಳಿ ಬಂದಾಗ ಮೂರ್ತಿ ಕಳವು ಆಗಿರುವುದು ಬೆಳಕಿಗೆ ಬಂದಿದೆ. ಗಣೇಶ ಇಲ್ಲದೆ ಇರುವುದನ್ನು ಕಂಡು ಜನರು ಆಘಾತಕ್ಕೆ ಒಳಗಾಗಿದ್ದಾರೆ ಎಂದು ಗ್ರಾಮದ ಮುಖಂಡರು ಅಳಲು ತೋಡಿಕೊಂಡಿದ್ದಾರೆ.
ಗಣೇಶ ಮೂರ್ತಿ ಕಳವಾದರೆ ಗ್ರಾಮಕ್ಕೆ ಒಳ್ಳೆದಾಗಲ್ಲ ಅಂತ ಅಪ್ಪ-ಪಕ್ಕದ ಊರಿನವರು ಮಾತನಾಡಿಕೊಳ್ಳುತ್ತಿರುವುದರಿಂದ ಜನರಲ್ಲಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಕೂಡಲೇ ಗಣೇಶ ಮೂರ್ತಿಯನ್ನು ಹುಡುಕಿ ಕೊಡುವಂತೆ ಹಾಗೂ ಮೂರ್ತಿಯನ್ನು ಕದ್ದ ಖದೀಮರಿಗೆ ತಕ್ಕ ಶಿಕ್ಷೆ ನೀಡುವಂತೆ ಯರಗಕಟ್ಟೆ ಗ್ರಾಮಸ್ಥರು ಜಗಳೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.



