ಭದ್ರತಾ ಸಿಬ್ಬಂದಿ ಹಾಗೂ ನಾಗರಿಕರ ಮೇಲೆ ಕನಿಷ್ಠ 26 ದಾಳಿಗಳ ಹಿಂದಿನ ಸೂತ್ರಧಾರಿ ನಕ್ಸಲ್ ನ ಪ್ರಮುಖ ನಾಯಕ ಮಾಧ್ವಿ ಹಿದ್ಮಾ ಆಂಧ್ರಪ್ರದೇಶದ ಅಲ್ಲೂರಿ ಸೀತಾರಾಮರಾಜು ಜಿಲ್ಲೆಯಲ್ಲಿ ಎನ್ ಕೌಂಟರ್ ಮಾಡಲಾಗಿದೆ.
ಆಂಧ್ರಪ್ರದೇಶ, ಛತ್ತೀಸಗಢ ಮತ್ತು ತೆಲಂಗಾಣ ಮೂರು ರಾಜ್ಯಗಳಿಗೆ ಹೊಂದಿಕೊಂಡಿರುವ ಮಾರೆಡುಮಿಲ್ಲಿ ಅರಣ್ಯದಲ್ಲಿ ಭದ್ರತಾ ಸಿಬ್ಬಂದಿ ನಡೆಸಿದ ಕಾರ್ಯಾಚರಣೆಯಲ್ಲಿ ಮಾಧ್ವಿ ಹಿದ್ಮಾ ಸೇರಿ 6 ನಕ್ಸಲರನ್ನು ಎನ್ ಕೌಂಟರ್ ಮಾಡಲಾಗಿದೆ.
ಆಂಧ್ರಪ್ರದೇಶ ಡಿಜಿಪಿ ಹರೀಶ್ ಕುಮಾರ್ ಗುಪ್ತಾ ಮಂಗಳವಾರ ಸುದ್ದಿಗಾರರಿಗೆ ಈ ವಿಷಯ ದೃಢಪಡಿಸಿದ್ದು, ಬೆಳಿಗ್ಗೆ 6ರಿಂದ 7 ಗಂಟೆಯವರೆ ನಡೆದ ಕಾರ್ಯಾಚರಣೆಯಲ್ಲಿ ಮಾಧ್ವಿ ಹಿದ್ಮಾ ಸೇರಿ 6 ನಕ್ಸಲರನ್ನು ಹತ್ಯೆಗೈಯ್ಯಲಾಗಿದೆ. ಕಾರ್ಯಾಚರಣೆ ಮುಂದುವರಿಸಲಾಗಿದೆ ಎಂದರು.
1981ರಲ್ಲಿ ಸುಕ್ಮಾದಲ್ಲಿ ಜನಿಸಿದ್ದ ಮಾಧ್ವಿ ಹಿದ್ಮಾ ಪೀಪಲ್ಸ್ ಲಿಬರೇಷನ್ ಗೆರಿಲ್ಲಾ ಆಪರೇಷನ್ ಮುಖ್ಯಸ್ಥನಾಗಿ ಆಯ್ಕೆಯಾಗುವ ಮೂಲಕ ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ನಕ್ಸಲ್ ನ ಕೇಂದ್ರೀಯ ಬಣದ ನಾಯಕರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದ.
ಕೇಂದ್ರೀಯ ನಕ್ಸಲ್ ಗುಂಪಿನಲ್ಲಿ ಬಾಸ್ಟರ್ ವಲಯದ ಆದಿವಾಸಿ ಸಮುದಾಯಕ್ಕೆ ಸೇರಿದ ಏಕೈಕ ನಾಯಕನಾಗಿದ್ದ ಮಾಧ್ವಿ ನಕ್ಸಲರ ಅತ್ಯಂತ ಪ್ರಮುಖ ದಾಳಿಗಳ ಹಿಂದಿನ ರೂವಾರಿ ಆಗಿದ್ದ. ಈತನ ಮೇಲೆ ಸರ್ಕಾರ 50 ಲಕ್ಷ ರೂ. ಬಹುಮಾನ ಘೋಷಿಸಿತ್ತು. ಈತನ ಪತ್ನಿ ರಾಜೇ ಅಲಿಯಾಸ್ ರಾಜಕ್ಕ ಕೂಡ ಕಾರ್ಯಾಚರಣೆಯಲ್ಲಿ ಮೃತಪಟ್ಟಿದ್ದಾರೆ.
ಮಾಧ್ವಿ ಅತ್ಯಂತ ಪ್ರಮುಖವಾದ 26 ದಾಳಿಗಳ ಹಿಂದಿನ ಸೂತ್ರಧಾರನಾಗಿದ್ದು, ಈತನ ನೇತೃತ್ವದಲ್ಲಿ ನಡೆದ 2010ರಲ್ಲಿ ದಾಂತೇವಾಡದ ಕಾರ್ಯಾಚರಣೆಯಲ್ಲಿ 76 ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದರು. 2013ರಲ್ಲಿ ಜಿರಾಮ್ ಘಾಟಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪ್ರಮುಖ ಕಾಂಗ್ರೆಸ್ ನಾಯಕ ಸೇರಿ 27 ಮಂದಿ ಮೃತಪಟ್ಟಿದ್ದರು. 20121ರ ಸುಕ್ಮಾ-ಬಿಜಾಪುರ್ ದಾಳಿಯಲ್ಲಿ 22 ಭದ್ರತಾ ಸಿಬ್ಬಂದಿ ಅಸುನೀಗಿದ್ದರು.
ಇತ್ತೀಚೆಗೆ ಭಾರೀ ಪ್ರಮಾಣದಲ್ಲಿ ನಕ್ಸಲರು ಶರಣಾಗಿದ್ದು ಹಾಗೂ ಭದ್ರತಾ ಸಿಬ್ಬಂದಿ ಕಾರ್ಯಾಚರಣೆಗಳಿಂದ ಮಾಧ್ವಿ ಒತ್ತಡಕ್ಕೆ ಒಳಗಾಗಿದ್ದ. ಇದೀಗ ಈತನ ಹತ್ಯೆಯಿಂದ ಭದ್ರತಾ ಪಡೆಗಳಿಗೆ ದೊಡ್ಡ ಜಯ ಸಿಕ್ಕಿದಂತಾಗಿದೆ.



