ವಿಜಯನಗರ ಜಿಲ್ಲೆಯ ಕೊಟ್ಟೂರಿನಲ್ಲಿ ನಡೆದ ತ್ರಿವಳಿ ಪ್ರಕರಣವನ್ನು ಭೇದಿಸಿರುವ ಪೊಲೀಸರು ಮಗನನ್ನು ಬಂಧಿಸಿದ್ದಾರೆ.
ಜನವರಿ 27ರಂದು ತಂದೆ, ತಾಯಿ ಮತ್ತು ಸಹೋದರಿ ನಿಗೂಢ ರೀತಿಯಲ್ಲಿ ಕೊಲೆಯಾಗಿದ್ದರು. ಕೊಲೆ ಪ್ರಕರಣದಲ್ಲಿ ಪುತ್ರ ಅಕ್ಷಯ್ ಕುಮಾರ್ ನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ತಂದೆ-ತಾಯಿ ಹಾಗೂ ತಂಗಿಯನ್ನು ಕೊಲೆಗೈದ ನಂತರ ಅಕ್ಷಯ್ ಕುಮಾರ್ ಬೆಂಗಳೂರಿಗೆ ಬಂದಿದ್ದ. ತಿಲಕನಗರ ಪೊಲೀಸ್ ಠಾಣೆಗೆ ತೆರಳಿ ನಾಪತ್ತೆ ಪ್ರಕರಣ ದಾಖಲಿಸಲು ಹೋದಾಗ ಪೊಲೀಸ್ ಬಲೆಗೆ ಬಿದ್ದಿದ್ದಾನೆ.
ನಾಪತ್ತೆ ದೂರು ದಾಖಲಿಸಲು ಬಂದಿದ್ದ ಅಕ್ಷಯ್ ಬಳಿ ಪೊಲೀಸರು ಪ್ರಶ್ನೆಗಳನ್ನು ಕೇಳಿದ್ದಾರೆ. ಆಗ ತಡಬಡಾಯಿಸಿದ್ದನ್ನು ಗಮನಿಸಿದ ಪೊಲೀಸರು ಅನುಮಾನಗೊಂಡು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಾನೇ ಕೊಂದಿರುವುದಾಗಿ ಬಾಯಿಬಿಟ್ಟಿದ್ದಾನೆ.
ತಿಲಕ್ನಗರ ಠಾಣೆ ಪೊಲೀಸರ ಬಳಿ ಕೊಟ್ಟೂರಿನ ಮನೆಯಲ್ಲಿ ಮೂವರನ್ನು ಕೊಂದು ಹೂತಿದ್ದಾಗಿ ಒಮ್ಮೆ ಹೇಳಿದರೆ, ಮತ್ತೊಮ್ಮೆ ಸಂಡೂರಲ್ಲಿ ಶವ ಎಸೆದಿರುವುದಾಗಿ ಹೇಳಿದ್ದಾನೆ. ಆದರೆ ಕೊಲೆಗೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ.
ಕೊಟ್ಟೂರು ಠಾಣೆಗೆ ತಿಲಕ್ನಗರ ಠಾಣೆ ಪೊಲೀಸರು ಮಾಹಿತಿ ನೀಡಿದ ಬಳಿಕ ಆರೋಪಿ ಹೇಳಿರುವ ಸ್ಥಳದಲ್ಲಿ ಶವಗಳಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.



