ಹೊಸದುರ್ಗ: ಹಣಕ್ಕಾಗಿ ಅಪ್ಪನನ್ನು ಪೀಡಿಸುತ್ತಿದ್ದ ಗಂಡನನ್ನು ಕೋಲಿನಿಂದ ಹೊಡೆದು ಪತ್ನಿ ಕೊಲೆಗೈದ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದಲ್ಲಿ ನಡೆದಿದೆ.
ಶ್ರೀರಾಂಪುರ ಹೋಬಳಿಯ ಯಾದಘಟ್ಟ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ. ಸ್ಥಳೀಯ ನಿವಾಸಿ ಗಿರೀಶ್ (46) ಮೃತಪಟ್ಟಿದ್ದು, ಪತ್ನಿ ಪ್ರಭಾ (40) ಹಾಗೂ ಮಾವ ಮರುಳಪ್ಪನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
25 ವರ್ಷಗಳ ಹಿಂದೆ ಗಿರೀಶ್ ಮತ್ತು ಪ್ರಭಾ ಮದುವೆ ಆಗಿದ್ದು, ಮದ್ಯ ವ್ಯಸನಿ ಗಿರೀಶ್ ಮನೆಯಲ್ಲಿ ಗಲಾಟೆ ಮಾಡುತ್ತಿದ್ದ. ಶುಕ್ರವಾರ ರಾತ್ರಿ ಮದ್ಯಸೇವಿಸಿ ಬಂದು ದಾಳಿಂಬೆ ಬೆಳೆದ ಹಣದಲ್ಲಿ ನನಗೂ ಸ್ವಲ್ಪ ಹಣ ಕೊಡು ಅಂತ ತಂದೆ ಮರುಳಪ್ಪನ ಜೊತೆ ಜಗಳ ಮಾಡುತ್ತಿದ್ದ.
ಪತ್ನಿ ಪ್ರಭಾ ಜಗಳ ಬಿಡಿಸಲು ಮಧ್ಯಪ್ರವೇಶಿಸಿದ್ದಾಳೆ. ಈ ವೇಳೆ ಜಗಳ ಪತಿ ಮತ್ತು ಪತ್ನಿ ನಡುವೆ ತಿರುಗಿದ್ದು, ಮಾತಿಗೆ ಮಾತು ಬೆಳೆದು ರೊಚ್ಚಿಗೆದ್ದ ಪತ್ನಿ ಮಾವ ಮರುಳಪ್ಪನ ಕೈಯಲ್ಲಿದ್ದ ಊರುಗೋಲಿನಿಂದ ಪತಿ ಗಿರೀಶ್ ತಲೆಗೆ ಹೊಡೆದಿದ್ದಾಳೆ. ಬಲವಾದ ಪೆಟ್ಟು ಬಿದ್ದ ಪರಿಣಾಮ ಗಿರೀಶನ ತಲೆಯಲ್ಲಿ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಮಾಹಿತಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಶ್ರೀರಾಂಪುರ ಠಾಣೆ ಪಿಐ ಮಧು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಬಗ್ಗೆ ಶ್ರೀರಾಂಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



