ದೇವರನ್ನು ನೋಡಬೇಕು. ಪರಮಾತ್ಮ ಬರಲಿದ್ದು ಜೀವ ಒಯ್ಯುತ್ತಾನೆ ಎಂದು 21 ಭಕ್ತರು ದೇಹತ್ಯಾಗ ಮಾಡಲು ಮುಂದಾಗಿದ್ದ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಅಥಣಿ ತಾಲೂಕಿನ ಅನಂತಪುರ ಗ್ರಾಮದಲ್ಲಿ ಸೆಪ್ಟೆಂಬರ್ 8ರಂದು ದೇಹತ್ಯಾಗ ಮಾಡಲು ಅನಂತಪುರ ಗ್ರಾಮದ ಇರಕರ ಕುಟುಂಬದ 4 ಜನ ಸೇರಿದಂತೆ 21 ಭಕ್ತರು ಪ್ರಾಣ ತ್ಯಾಗಕ್ಕೆ ನಿರ್ಧರಿಸಿದ್ದರು.
ದೇಹತ್ಯಾಗ ಮಾಡಲು ನಿರ್ಧರಿಸಿದ್ದ 21 ಭಕ್ತರು ಇದಕ್ಕಾಗಿ ತಯಾರಿ ನಡೆಸಿದ್ದರು. ಇವರೆಲ್ಲರೂ ಹರಿಯಾಣದ ವಿವಾದತ್ಮಕ ಸಂತ ರಾಮಪಾಲ ಅನುಯಾಯಿಗಳು ಎನ್ನುವುದು ತಿಳಿದು ಬಂದಿದೆ.
2014ರ ಗಲಭೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಸಂತ ರಾಮಪಾಲ ಅವರ ಪುಸ್ತಕ ಓದಿ ಹಾಗೂ ಪ್ರವಚನ ಕೇಳಿ ಅನಂತಪುರ ಗ್ರಾಮದ ಇರಕರ ಕುಟುಂಬದ, ತುಕಾರಾಮ, ಸಾವಿತ್ರಿ, ರಮೇಶ್, ವೈಷ್ಣವಿ ಪ್ರಾಣತ್ಯಾಗಕ್ಕೆ ಮುಂದಾಗಿದ್ದರು.
ಇರಕರ ಕುಟುಂಬ ಹಾಗೂ ಉತ್ತರ ಪ್ರದೇಶದ 17 ಭಕ್ತರು ಪ್ರಾಣ ತ್ಯಾಗಕ್ಕೆ ನಿರ್ಧಾರ ಮಾಡಿದ್ದರು. ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಚಿಕ್ಕೋಡಿ ಉಪ ವಿಭಾಗಾಧಿಕಾರಿ ಸುಭಾಷ ಸಂಪಗಾಂವಿ ಹಾಗೂ ಪೊಲೀಸರು ಮತ್ತು ಮಠಾಧೀಶರಿಂದ ಭಕ್ತರ ಮನವೊಲಿಕೆ ಮಾಡಿದ ಬಳಿಕ ಸದ್ಯ ದೇಹತ್ಯಾಗ ನಿರ್ಧಾರದಿಂದ ಭಕ್ತರು ಹಿಂದೆ ಸರಿದಿದ್ದಾರೆ ಎಂದು ತಿಳಿದುಬಂದಿದೆ.



