ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಬೆಂಗಳೂರಿನಲ್ಲಿ ನಡೆಯಲಿರುವ ಐಪಿಎಲ್ ಟಿ-20 ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಇದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ 7.30ಕ್ಕೆ ಆರಂಭವಾಗಲಿರುವ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಈಗಾಗಲೇ ಪ್ಲೇಆಫ್ ರೇಸ್ ನಿಂದ ಹೊರಬಿದ್ದಿರುವ ಚೆನ್ನೈ ಸೂಪರ್ ಕಿಂಗ್ಸ್ ಗೆ ಇದು ಮಹತ್ವವಿಲ್ಲದ ಪಂದ್ಯವಾಗಿದೆ. ಆದರೆ ಚೆನ್ನೈನಲ್ಲಿ 17 ವರ್ಷಗಳ ನಂತರ ಮೊದಲ ಬಾರಿ ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಳ್ಳುವ ಗುರಿ ಹೊಂದಿದೆ.
ಈಗಾಗಲೇ 14 ಅಂಕ ಪಡೆದು ಪ್ಲೇಆಫ್ ಗೆ ಸಮೀಪವಾಗಿರುವ ಆರ್ ಸಿಬಿ ತಂಡಕ್ಕೆ ತನ್ನ ಸ್ಥಾನ ಖಚಿತಪಡಿಸಿಕೊಳ್ಳಲು ಈ ಗೆಲುವು ಮಹತ್ವದ್ದಾಗಿದೆ. ಅಲ್ಲದೇ ತವರಿನಲ್ಲಿ ಹ್ಯಾಟ್ರಿಕ್ ಸೋಲಿನ ನಂತರ ಹಿಂದಿನ ಪಂದ್ಯದಲ್ಲಿ ಗೆಲುವಿನ ಖಾತೆ ತೆರೆದ ಆರ್ ಸಿಬಿ ಮತ್ತೊಂದು ಗೆಲುವಿನ ಮೂಲಕ ಪ್ಲೇಆಫ್ ಪ್ರವೇಶಿಸುವ ಉದ್ದೇಶ ಹೊಂದಿದೆ.
ಈಗಾಗಲೇ ಕಳಪೆ ಫಾರ್ಮ್ ಹಾಗೂ ತಂಡದ ಕಳಪೆ ಸಾಧನೆ ಹಿನ್ನೆಲೆಯಲ್ಲಿ ಭಾರೀ ಟೀಕೆಗೆ ಗುರಿಯಾಗಿರುವ ಧೋನಿಗೆ ಇದು ಕೊನೆಯ ಐಪಿಎಲ್ ಟೂರ್ನಿ ಆಗಲಿದ್ದು, ಒಂದು ವೇಳೆ ಮುಂದಿನ ಆವೃತ್ತಿಯಲ್ಲಿ ಆಡದೇ ಇದ್ದರೆ ಬೆಂಗಳೂರಿನಲ್ಲಿ ಆಡುತ್ತಿರುವ ಕೊನೆಯ ಪಂದ್ಯವಾಗಲಿದೆ. ಅಲ್ಲದೇ ವಿರಾಟ್ ಕೊಹ್ಲಿ ಮತ್ತು ಧೋನಿ ಮುಖಾಮುಖಿಯ ಕೊನೆಯ ಪಂದ್ಯವೂ ಆಗಲಿದೆ. ಆದ್ದರಿಂದ ಅಭಿಮಾನಿಗಳ ಪಾಲಿಗೆ ಇದು ಕುತೂಹಲಕಾರಿ ಪಂದ್ಯವಾಗಲಿದೆ.



