ಭಾರತ ತಂಡ 15 ರನ್ ಗಳಿಂದ ಶ್ರೀಲಂಕಾ ತಂಡವನ್ನು ಸೋಲಿಸಿ 5 ಪಂದ್ಯಗಳ ಟಿ-20 ಸರಣಿಯಲ್ಲಿ 5-0ಯಿಂದ ಗೆದ್ದು ವೈಟ್ ವಾಷ್ ಸಾಧಿಸಿದೆ.
ಕೇರಳದ ತಿರುವನಂತಪುರಂನಲ್ಲಿ ಮಂಗಳವಾರ ನಡೆದ 5ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ತಂಡ ೨೦ ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 175 ರನ್ ಪೇರಿಸಿತು. ಕಠಿಣ ಗುರಿ ಬೆಂಬತ್ತಿದ ಶ್ರೀಲಂಕಾ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 160 ರನ್ ಗಳಿಸಲಷ್ಟೇ ಶಕ್ತವಾಯಿತು.
ಶ್ರೀಲಂಕಾ ಪರ ಹಾಸಿನಿ ಪರೆರಾ ಮತ್ತು ಇಮೆಶಾ ದುಲಾನಿ ಅರ್ಧಶತಕಗಳನ್ನು ಬಾರಿಸಿದ್ದೂ ಅಲ್ಲದೇ ಎರಡನೇ ವಿಕೆಟ್ ಗೆ 79 ರನ್ ಜೊತೆಯಾಟದಿಂದ ತಂಡವನ್ನು ಮುನ್ನಡೆಸಿದರು. ಆದರೆ 42 ಎಸೆತಗಳಲ್ಲಿ 8 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 65 ರನ್ ಬಾರಿಸಿದ ಹಾಸಿನಿ ಮತ್ತು 39 ಎಸೆತಗಳಲ್ಲಿ 8 ಬೌಂಡರಿ ಸಹಾಯದಿಂದ ೫೦ ರನ್ ಬಾರಿಸಿ ಔಟಾಗುತ್ತಿದ್ದಂತೆ ತಂಡ ನಾಟಕೀಯ ಕುಸಿತ ಅನುಭವಿಸಿ ಸೋಲಿನ ಹಾದಿ ಹಿಡಿಯಿತು. ಭಾರತದ ಎಲ್ಲಾ ಬೌಲರ್ ಗಳು ತಲಾ 1 ವಿಕೆಟ್ ಪಡೆದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಭಾರತ ತಂಡ ಸ್ಮೃತಿ ಮಂದಾನ ಅನುಪಸ್ಥಿತಿಯಲ್ಲಿ ಅಖಾಡಕ್ಕೆ ಇಳಿಯಿತು. ನಾಯಕ ಹರ್ಮನ್ ಪ್ರೀತ್ ಸಿಂಗ್ 43 ಎಸೆತಗಳಲ್ಲಿ 9 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 68 ರನ್ ಬಾರಿಸಿದರು ತಂಡದ ಪರ ಅಮನ್ಜೋತ್ ಸಿಂಗ್ (21) ಮತ್ತು ಅರುಂಧತಿ ರೆಡ್ಡಿ (27) ತಂಡದ ಮೊತ್ತವನ್ನು ಕೊನೆಯಲ್ಲಿ ಉಬ್ಬಿಸಿದರು.



