ಟೆಹ್ರಾನ್: ಇರಾನ್ ಸರ್ವೊಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಘೋಷಿಸಿದ್ದ ಇರಾನ್ ಓಮನ್ ಕರಾವಳಿಯ ಬಳಿಯ ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ತೈಲ ಟ್ಯಾಂಕರ್ ಮೇಲೆ ದಾಳಿ ಮಾಡಿದೆ.
ಏಷ್ಯಾ, ಯುರೋಪ್ ಮತ್ತು ಇತರೆ ಖಂಡಗಳನ್ನು ಸಂಪರ್ಕಿಸಲು ಹಾಗೂ ತೈಲ ಸಾಗಾಟಕ್ಕೆ ಅತ್ಯಂತ ಹೆಚ್ಚು ಪ್ರಮಾಣದಲ್ಲಿ ಬಳಸಲಾಗುವ ಹಾರ್ಮುಜ್ ಜಲಸಂಧಿಯಲ್ಲಿ ಹಾದು ಹೋಗುವ ಹಡಗುಗಳ ಮೇಲೆ ದಾಳಿ ಕೇಂದ್ರೀಕರಿಸಿರುವುದನ್ನು ಸ್ಪಷ್ಟಪಡಿಸಿದೆ.
ಪಲಾವ್ ಧ್ವಜ ಹೊತ್ತ ತೈಲ ಟ್ಯಾಂಕರ್ ಒಮಾನ್ನ ಮುಸಂದಮ್ ಪರ್ಯಾಯ ದ್ವೀಪವನ್ನು ದಾಟುವಾಗ ಡಿಕ್ಕಿ ಹೊಡೆದಿದೆ. ದಾಳಿಯಲ್ಲಿ ಕನಿಷ್ಠ ನಾಲ್ವರು ಗಾಯಗೊಂಡಿದ್ದಾರೆ ಎಂದು ಓಮನ್ನ ಕಡಲ ಭದ್ರತಾ ಕೇಂದ್ರ ತಿಳಿಸಿದೆ.
ಹಾರ್ಮುಜ್ ಜಲಸಂಧಿಯು ಜಾಗತಿಕ ತೈಲ ಸಾಗಣೆಗೆ ಒಂದು ಕಾರ್ಯತಂತ್ರದ ಮಾರ್ಗವಾಗಿದ್ದು, ಇದನ್ನು ವಿಶ್ವದ ಅತ್ಯಂತ ಸೂಕ್ಷ್ಮ ಕಡಲ ಚಾಕ್ಪಾಯಿಂಟ್ ಎಂದು ದೀರ್ಘಕಾಲದಿಂದ ವಿವರಿಸಲಾಗಿದೆ.
ಇದೇ ವೇಳೆ ಇರಾನ್ ಖಮೇನಿ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಘೋಷಿಸಿದ ಬೆನ್ನಲ್ಲೇ ಟೆಹ್ರಾನ್ ನಲ್ಲಿರುವ ಜಮ್ ಕರಾನಾ ಮಸೀದಿ ಮೇಲೆ ಕೆಂಪು ಧ್ವಜ ಹಾರಿಸುವ ಮೂಲಕ ಯುದ್ಧ ಮುಂದುವರಿಸುವ ಸ್ಪಷ್ಟ ಸೂಚನೆ ನೀಡಿದೆ.
ಶನಿವಾರ ಕೊಲ್ಲಿಯ 8 ರಾಷ್ಟ್ರಗಳಲ್ಲಿರುವ ಅಮೆರಿಕದ 14 ವಾಯುನೆಲೆಗಳ ಮೇಲೆ ದಾಳಿ ಮಾಡಿದ್ದ ಇರಾನ್ ಭಾನುವಾರವೂ 7 ರಾಷ್ಟ್ರಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ದುಬೈ, ಬಹರೇನ್, ಕುವೈತ್, ಇರಾಕ್, ಕತಾರ್ ಸೇರಿದಂತೆ ಹಲವು ಕಡೆಗಳ ಮೇಲೆ ದಾಳಿ ಮಾಡಿದ್ದು ಭಾರೀ ಹಾನಿ ಉಂಟು ಮಾಡಿದೆ. ಅಲ್ಲದೇ ಹಲವಾರು ಅಮೆರಿಕನ್ ಯೋಧರನ್ನು ಹತ್ಯೆಗೈದಿರುವುದಾಗಿ ಹೇಳಿಕೊಂಡಿದೆ.



