ಬೆಂಗಳೂರು: ಕೈಕಾಲು ಕಟ್ಟಿ, ಬಾಯಿಗೆ ಟೇಪ್ ಸುತ್ತಿ, ರಾಡ್ನಿಂದ ಹಲ್ಲೆ ಮಾಡಿ ಚಾಕುವಿನಿಂದ ಇರಿದು ಮೋಹನ್ ರಾವ್ (45) ಅವರನ್ನು ಕೊಲೆ ಮಾಡಿ ಪರಾರಿಯಾಗಿದ್ದ ಪ್ರಕರಣವನ್ನು ಬೇಧಿಸಿರುವ ಬಾಗಲಗುಂಟೆ ಪೊಲೀಸರು ಕಿರುತೆರೆ ಸಹನಟಿ ಸೇರಿ ಮೂವರನ್ನು ಬಂಧಿಸಿದ್ದಾರೆ.
ಶಿವಮೊಗ್ಗ ಮೂಲದ ಸಹನಟಿ ಬಿಂದೂ (31), ಸ್ನೇಹಿತ ವಿನಯ್ ಮತ್ತು ಧನುಷ್ ಅವರನ್ನು ಬಂಧಿಸಲಾಗಿದೆ.
ಬ್ಯಾಡರಹಳ್ಳಿ ನಿವಾಸಿ ಮೋಹನ್ ರಾವ್ (40)ಗೆ ಈಗಾಗಲೇ ಮದುವೆಯಾಗಿದ್ದು, ಪತ್ನಿಯಿಂದ ದೂರವಾಗಿ ಒಬ್ಬರೇ ವಾಸವಾಗಿದ್ದರು. ಈ ನಡುವೆ ಬಿಂದೂವಿನ ಪರಿಚಯವಾಗಿದೆ. ಬಿಂದುಗೂ ಸಹ ಈಗಾಗಲೇ ಮದುವೆಯಾಗಿದ್ದು, ಆಕೆ ಪತಿಯನ್ನು ಬಿಟ್ಟು ಬೇರೆ ನೆಲೆಸಿದ್ದರು.
ಮೋಹನ್ರಾವ್ ಹಾಗೂ ಬಿಂದೂವಿಗೆ ಪರಿಚಯವಾಗಿ ಸ್ನೇಹಕ್ಕೆ ತಿರುಗಿದೆ. ಆ ಸ್ನೇಹ ಮುಂದುವರೆಸಿದ್ದ ಇಬ್ಬರೂ ಬಾಗಲಗುಂಟೆಯ ಮಂಜುನಾಥನಗರದ ವಿಜಯಲಕ್ಷ್ಮೀ ಬಡಾವಣೆಯ ನಟರಾಜ್ ಎಂಬುವವರ ಬಾಡಿಗೆ ಮನೆಯಲ್ಲಿ ಒಟ್ಟಿಗೆ ನೆಲೆಸಿದ್ದರು.
ಈ ನಡುವೆ ಬಿಂದೂಗೆ ಚಾಲಕ ವೃತ್ತಿ ಮಾಡುತ್ತಿದ್ದ ವಿನಯ್ ಎಂಬಾತನ ಪರಿಚಯವಾಗಿದೆ. ಬಿಂದೂ ಈತನೊಂದಿಗೆ ಸುತ್ತಾಡಲು ಆರಂಭಿಸಿದ್ದಾಳೆ. ಇವರಿಬ್ಬರು ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದರು. ಬಿಂದೂ ತನ್ನನ್ನು ಬಿಟ್ಟು ಬೇರೆ ಯುವಕನ ಜೊತೆ ಸುತ್ತಾಡುತ್ತಿರುವ ವಿಷಯ ಮೋಹನ್ ರಾವ್ಗೆ ಗೊತ್ತಾಗಿ ಜಗಳವಾಡಿದ್ದಾನೆ.
ವಿನಯ್ ಜೊತೆ ಮದುವೆ ಮಾಡಿಕೊಳ್ಳಲು ಮೋಹನ್ರಾವ್ ಅಡ್ಡಿ ಪಡಿಸುತ್ತಾನೆಂದು ಅರಿತು ಆತನ ಕೊಲೆಗೆ ವಿನಯ್ ಜೊತೆ ಸೇರಿಕೊಂಡು ಸಂಚು ರೂಪಿಸಿದ್ದಾಳೆ. ಅದರಂತೆ ಫೆ.18ರಂದು ರಾತ್ರಿ ಮೋಹನ್ ರಾವ್, ಬಿಂದು, ಆಕೆಯ ಹೊಸ ಪ್ರಿಯಕರ ವಿನಯ್ ಹಾಗೂ ಧನುಷ್ ಎಲ್ಲರೂ ಸೇರಿ ಪಾರ್ಟಿ ಮಾಡಿದ್ದರು.
ಈ ವೇಳೆ ಕುಡಿದ ಮತ್ತಿನಲ್ಲಿದ್ದ ಮೋಹನ್ ಬಿಂದುವಿನ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಮುಂದಾದಾಗ ಅಲ್ಲೇ ಇದ್ದ ವಿನಯ್ ಕೋಪಗೊಂಡು ತನ್ನ ಬಳಿಯಿದ್ದ ಚಾಕುವಿನಿಂದ ಮೋಹನ್ ಕೃಷ್ಣನಿಗೆ ಮನಬಂದಂತೆ ಇರಿದಿದ್ದಾನೆ.
ಆತ ಜೋರಾಗಿ ಕಿರುಚಾಡಲು ಶುರು ಮಾಡಿದಾಗ ಮೂವರೂ ಸೇರಿ ಆತನ ಮುಖಕ್ಕೆ ಮತ್ತು ಮೂಗಿಗೆ ಸೆಲ್ಲೋ ಟೇಪ್ ಸುತ್ತಿ ಉಸಿರುಗಟ್ಟಿಸಿ ಹತ್ಯೆಗೈದಿದ್ದರು. ಬಳಿಕ ಮನೆ ಬಾಗಿಲು ಹಾಕಿಕೊಂಡು ಪರಾರಿಯಾಗಿದ್ದರು.
ತಾವು ಸಿಕ್ಕಿಹಾಕಿಕೊಳ್ಳಬಾರದೆಂದು ಬಿಂದೂ ಹಾಗೂ ವಿನಯ್ ಪ್ರವಾಸದ ಹೆಸರಿನಲ್ಲಿ ಕೆ.ಆರ್.ನಗರ, ಧರ್ಮಸ್ಥಳ ಸೇರಿದಂತೆ ವಿವಿಧ ಸ್ಥಳಗಳಿಗೆ ಹೊಗಿದ್ದಾರೆ.ಇತ್ತ ಬಾಡಿಗೆ ಮನೆಯಿಂದ ಕೆಟ್ಟ ವಾಸನೆ ಬರುತ್ತಿರುವುದನ್ನು ನೆರೆಹೊರೆಯವರು ಗಮನಿಸಿ ಮನೆ ಮಾಲೀಕ ನಟರಾಜು ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ನಟರಾಜು ಅವರ ಮಗ ಮನೆ ಬಳಿ ಬಂದು ಬೀಗ ತೆಗೆದು ಒಳಗೆ ಹೋಗಿ ನೋಡಿದಾಗ ವ್ಯಕ್ತಿಯೊಬ್ಬರನ್ನು ಕೈಕಾಲು ಕಟ್ಟಿ ಚಾಕುವಿನಿಂದ ಇರಿದು ಕೊಲೆ ಮಾಡಿರುವುದು ಕಂಡು ಬಂದಿದ್ದು, ಶವ ಕೊಳೆತ್ತಿತ್ತು. ಈ ಬಗ್ಗೆ ಅವರು ತಕ್ಷಣ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಮೊದಲಿಗೆ ಕೊಲೆಯಾದ ವ್ಯಕ್ತಿ ಯಾರು ಎಂಬ ಬಗ್ಗೆ ಮಾಹಿತಿ ಕಲೆಹಾಕಿದಾಗ ಮೋಹನ್ರಾವ್ ಎಂಬುವುದು ಗೊತ್ತಾಗಿದೆ. ಈ ಮಾಹಿತಿ ಆಧರಿಸಿ ತನಿಖೆ ಚುರುಕುಗೊಳಿಸಿದ ಪೊಲೀಸರು ಈ ವ್ಯಕ್ತಿಯ ಜೊತೆ ಈ ಮನೆಯಲ್ಲಿ ವಾಸವಾಗಿದ್ದ ಮಹಿಳೆ ಬಗ್ಗೆ ಮಾಹಿತಿ ಕಲೆ ಹಾಕುತ್ತಾ ಹೋದಾಗ ಸಹನಟಿ ಬಿಂದೂ ಎಂಬುವುದನ್ನು ಪತ್ತೆಹಚ್ಚಿದ್ದಾರೆ.
ಆಕೆಯ ಮೊಬೈಲ್ ನಂಬರ್ನ್ನು ತಾಂತ್ರಿಕ ಆಧಾರದಲ್ಲಿ ಟ್ರ್ಯಾಕ್ ಮಾಡಿ ಕೊನೆಗೂ ಆಕೆಯನ್ನು ಪೊಲೀಸರು ಲಾಕ್ ಮಾಡಿಕೊಂಡಿದ್ದು, ಆಕೆಯ ಜೊತೆ ಇನ್ನಿಬ್ಬರು ಸಹ ಸಿಕ್ಕಿ ಬಿದ್ದಿದ್ದಾರೆ. ಒಟ್ಟಾರೆ ಮನೆಯಲ್ಲಿ ಕೊಳೆತ ಶವ ಪತ್ತೆಯಾದ ಕೆಲವೇ ದಿನಗಳಲ್ಲಿ ಈ ಪ್ರಕರಣವನ್ನು ಭೇದಿಸುವಲ್ಲಿ ಬಾಗಲಗುಂಟೆ ಪೊಲೀಸರು ಯಶಸ್ವಿಯಾಗಿದ್ದಾರೆ.



