ಬೆಳಗಾವಿ: ಜಾತ್ರೆಗೆಂದು ಊರಿಗೆ ಮರಳಿದ್ದ ವ್ಯಕ್ತಿಯ ಮರ್ಮಾಂಗ ಕತ್ತರಿಸಿ ಭೀಕರವಾಗಿ ಕೊಲೆ ಮಾಡಿರುವ ಕೊಳೆತ ಶವ ಪತ್ತೆಯಾಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಕಿತ್ತೂರು ತಾಲೂಕಿನ ಹಿರೇನಂದಿಹಳ್ಳಿ ಗ್ರಾಮದ ನಿವಾಸಿ ಕಲ್ಮೇಶ ಕೋಟಿ (50) ಹತ್ಯೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ.
ನಾಲ್ಕು ದಿನದ ಹಿಂದೆ ಮೆಕ್ಕೆಜೋಳದ ಗದ್ದೆಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದ್ದು, ಕೊಳೆತ ಮತ್ತು ಭಯಾನಕ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು.
ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಂತೆ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಭೇಟಿ ನೀಡಿ ಪರಿಶೀಲಿಸಿದರು. ಈ ಸಂಬಂಧ ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲೆಗೆ ನಿಖರ ಕಾರಣ ಇನ್ನು ತಿಳಿದು ಬಂದಿಲ್ಲ. ಆದರೆ, ಹಣಕಾಸು, ಆಸ್ತಿ ಮತ್ತು ಹೆಣ್ಣಿನ ವಿಚಾರಕ್ಕೆ ಕೊಲೆ ಆಗಿರಬಹುದು. ಹೀಗಾಗಿ, ಈ ಮೂರು ಆಯಾಮದಲ್ಲಿ ತನಿಖೆ ಮಾಡುತ್ತಿದ್ದೇವೆ. ಆದಷ್ಟು ಬೇಗನೇ ಆರೋಪಿಗಳನ್ನು ಬಂಧಿಸುತ್ತೇವೆ ಅಂತಾ ಪೊಲೀಸರು ತಿಳಿಸಿದ್ದಾರೆ.
ಕಲ್ಮೇಶ ತುಮಕೂರಿನಲ್ಲಿ ಹೋಮ್ಕೇರ್ನಲ್ಲಿ ಕೆಲಸ ಮಾಡುತ್ತಿದ್ದು, 15 ದಿನಗಳ ಹಿಂದೆಯಷ್ಟೇ ಗ್ರಾಮದ ಜಾತ್ರೆ ಕಾರಣ ಊರಿಗೆ ಮರಳಿದ್ದ. ಕಲ್ಮೇಶ ತಾಯಿ ಹಿರೇನಂದಿಹಳ್ಳಿಯಲ್ಲಿ ವಾಸಿಸುತ್ತಿದ್ದು, ಹತ್ತು ವರ್ಷದ ಹಿಂದೆ ಪತ್ನಿ ಮತ್ತು ಮಗ ಕಲ್ಮೇಶ ಅವರನ್ನು ಬಿಟ್ಟು ಹೋಗಿದ್ದರು.
ಕೊಲೆಯಾದ ಕಲ್ಮೇಶ ಪುತ್ರ ಕಿರಣ ಕೋಟಿ ಮಾತನಾಡಿ, ಅಪ್ಪ ಸಾರಾಯಿ ಕುಡಿಯುತ್ತಿದ್ದರು. ಹಾಗಾಗಿ, ನಮ್ಮ ತಾಯಿ ಮತ್ತು ನಾನು ಅವರಿಂದ ಬೇರೆ ಆಗಿದ್ದೆವು. ಯಲ್ಲಾಪುರದಲ್ಲಿ ನಾವು ಇದ್ದೇವೆ. ಯಾವಾಗಲಾದರೂ ಒಮ್ಮೊಮ್ಮೆ ಊರಿಗೆ ಬಂದಾಗ ಭೇಟಿ ಆಗುತ್ತಿದ್ದರು. ಈಗ ಜಾತ್ರೆ ಇತ್ತು ಅಂತ ಹಿರೇನಂದಿಹಳ್ಳಿಗೆ ಬಂದಿದ್ದರು. ಊರಿಗೆ ಬಂದ ಮೇಲೆ ನಾಲ್ಕು ದಿನ ನಿರಂತರವಾಗಿ ಫೋನ್ ಮಾಡಿ ಮಾತಾಡಿದ್ದರು. ಆಮೇಲೆ 10 ದಿನಗಳಿಂದ ಫೋನ್ ಮಾಡಿರಲಿಲ್ಲ. ಈಗ ನೋಡಿದರೆ ಕೊಲೆ ಆಗಿದೆ ಅಂತಾ ಗೊತ್ತಾಗಿದೆ. ಊರಲ್ಲಿ ಏನಾಗಿದೆ ಅಂತ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಸಾರಾಯಿ ಕುಡಿದು ಪ್ರತಿದಿನ ಗಲಾಟೆ ಮಾಡುವುದು, ಹೊಡೆಯುವುದು ಮಾಡುತ್ತಿದ್ದರು. ಹಾಗಾಗಿ, 10 ವರ್ಷಗಳಿಂದ ನಾನು ತವರು ಮನೆಯಲ್ಲಿ ಹೋಗಿ ವಾಸವಿದ್ದೆ. ಅಲ್ಲೇ ಇದ್ದುಕೊಂಡು ಮಗಳ ಮದುವೆ ಮಾಡಿದ್ದೇನೆ. ನನಗೆ ಅವರು ಯಾವತ್ತೂ ಫೋನ್ ಮಾಡಿರಲಿಲ್ಲ ಮತ್ತು ಭೇಟಿಯೂ ಆಗಿಲ್ಲ. ಮಗನಿಗೆ ಮಾತ್ರ ಫೋನ್ ಮಾಡಿ ಮಾತಾಡುತ್ತಿದ್ದರು. ನಮ್ಮ ರಟ್ಟೆಯನ್ನೇ ಆಸ್ತಿ ಮಾಡಿಕೊಂಡು ದುಡಿದು ತಿನ್ನುತ್ತಿದ್ದೆವು. ನಮ್ಮ ಅತ್ತೆ ಮತ್ತು ನಮ್ಮನ್ನು ಅವರು ನೋಡಿಕೊಳ್ಳುತ್ತಿರಲಿಲ್ಲ. ಬರೀ ದುಡಿಯೋದು, ಬಂದ ಹಣದಲ್ಲಿ ಕುಡಿಯೋದ ಮಾತ್ರ ಮಾಡುತ್ತಿದ್ದರು ಎಂದು ಕೊಲೆಯಾದ ಕಲ್ಮೇಶ ಪತ್ನಿ ಕಸ್ತೂರಿ ತಿಳಿಸಿದರು.



