ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಂಧಾನ ಸಭೆ ವಿಫಲಗೊಂಡಿದ್ದು, ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸಾರಿಗೆ ನೌಕರರು ಕರೆ ನೀಡಿದ್ದ ಮುಷ್ಕರ ನಾಳೆಯಿಂದ ನಡೆಯಲಿದೆ.
ಬೆಂಗಳೂರಿನ ವಿಧಾನಸೌಧ ಕಚೇರಿಯಲ್ಲಿ ಸೋಮವಾರ ನಡೆದ ಸಂಧಾನ ಸಭೆಯಲ್ಲಿ ನೌಕರರ ಕೆಲವು ಪ್ರಮುಖ ಬೇಡಿಕೆ ಈಡೇರಿಸಲು ಸಿಎಂ ನಿರಾಕರಿಸಿದ ಹಿನ್ನೆಲೆಯಲ್ಲಿ ಸಭೆ ವಿಫಲಗೊಂಡಿದೆ.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಾರಿಗೆ ನೌಕರರ ಸಂಘಟನೆ ಮುಖ್ಯಸ್ಥ ಅನಂತ್ ಸುಬ್ಬರಾವ್, 36 ತಿಂಗಳ ಭತ್ಯೆ ನೀಡುವುದು ಸೇರಿದಂತೆ ಪ್ರಮುಖ ಬೇಡಿಕೆಗಳಿಗೆ ಸರ್ಕಾರ ಮಣಿಯದ ಕಾರಣ ನಾಳೆಯಿಂದ ರಾಜ್ಯಾದ್ಯಂತ ನಾಲ್ಕೂ ನಿಗಮಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದರು.
2024 ಜನವರಿ 1ರಿಂದ ಹೊಸ ವೇತನ ಪರಿಷ್ಕರಣೆ ಮಾಡಬೇಕು. ಖಾಸಗೀಕರಣ ಮಾಡಬಾರದು, ನಿಗಮಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ತಡೆಯಬೇಕು. ಕಾರ್ಮಿಕರ ಮೇಲಿನ ಕಿರುಕುಳ ನಿಲ್ಲಬೇಕು. ವಿದ್ಯುತ್ ಚಾಲಿನ ಬಸ್ ಗಳಲ್ಲಿ ಸಾರಿಗೆ ನೌಕರರನ್ನೇ ನೇಮಿಸಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆಗಳು ಆಗಿದ್ದವು ಎಂದು ಅವರು ತಿಳಿಸಿದರು.



