5 ಕೋಟಿ ರೂ. ವಿಮೆ ಮಾಡಿಸಿ ಅದನ್ನು ಪಡೆಯಲು ಕೊಲೆ ಮಾಡಿ ಅಪಘಾತದ ಕತೆ ಕಟ್ಟಿದ್ದ ನಕಲಿ ಪತ್ನಿ ಸೇರಿ 6 ಮಂದಿಯ ಗ್ಯಾಂಗ್ ಅನ್ನು ಪೊಲೀಸರು 24 ಗಂಟೆಯನ್ನೇ ಬಂಧಿಸಿದ ಘಟನೆ ಬಳ್ಳಾರಿಯಲ್ಲಿ ನಡೆದಿದೆ.
ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಹೊರವಲಯದಲ್ಲಿ ಕೌಲ್ ಪೇಟೆಯ ನಿವಾಸಿ ಗಂಗಾಧರ್ ಅವರನ್ನು ಕೊಲೆ ಮಾಡಿದ ಪ್ರಕರಣದಲ್ಲಿ ನಕಲಿ ಪತ್ನಿ ಹುಲಿಗೆಮ್ಮ, ಕೊಪ್ಪಳ ಜಿಲ್ಲೆಯ ಕೃಷ್ಣಪ್ಪ, ರವಿ ಗೋಸಂಗಿ, ವಿಜಯನಗರ ಜಿಲ್ಲೆಯ ಅಜೇಯ, ರಿಯಾಜ್, ಯೋಗರಾಜ್ ಸಿಂಗ್ ಅವರನ್ನು ಬಂಧಿಸಲಾಗಿದೆ.
ಗಂಗಾಧರ್ ಹೆಸರಲ್ಲಿ 5.20 ಕೋಟಿ ರೂ. ವಿಮೆ ಮಾಡಿಸಿದ್ದ ಗ್ಯಾಂಗ್ ಅದನ್ನು ಪಡೆಯಲು ಹುಲಿಗೆಮ್ಮ ಜೊತೆ ಮದುವೆ ಮಾಡಿಸಿದ್ದರು. ಇದನ್ನು ಅರಿಯದ ಪಾರ್ಶ್ವಾಯು ಪೀಡಿತನಾಗಿದ್ದ ಗಂಗಾಧರ್ ನನ್ನು ಜಂಬುನಾಥ ಹಳ್ಳಿಗೆ ಹೋಗುವ ರಸ್ತೆ ಬಳಿ ಅಪಘಾತ ರೀತಿಯಲ್ಲಿ ಕೊಲೆ ಮಾಡಿಸಿದ್ದರು.
ಸೆಕೆಂಡ್ ಹ್ಯಾಂಡ್ ಬೈಕ್ ಬಾಡಿಗೆಗೆ ತಂದಿದ್ದ ಗ್ಯಾಂಗ್, ಅದರ ಮೇಲೆ ಕೂರಿಸಿ ಕಾರಿನಿಂದ ಗುದ್ದಿಸಿ ಜಂಬುನಾಥ ಹಳ್ಳಿ ಸಮೀಪದ ರಸ್ತೆಯಲ್ಲಿ ಕೊಲೆ ಮಾಡಿ ಅಪಘಾತವೆಂದು ಬಿಂಬಿಸಿ ಪರಾರಿಯಾಗಿದ್ದರು.
ಪತ್ನಿ ಹುಲಿಗೆಮ್ಮ ಹೊಸಪೇಟೆ ಪೊಲೀಸರಿಗೆ ಪತಿ ಗಂಗಾಧರ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ ಪೊಲೀಸರಿಗೆ ಶಾಕ್ ಕಾದಿತ್ತು.
ಪಾರ್ಶ್ವಾಯು ಪೀಡಿತನಾಗಿದ್ದ ಗಂಗಾಧರ್ ಎಡಗೈ ಅಲುಗಾಡಿಸಲು ಆಗುತ್ತಿರಲಿಲ್ಲ. ಇಂತಹ ವ್ಯಕ್ತಿ ಬೈಕ್ ಚಲಾಯಿಸಿಕೊಂಡು ಅಷ್ಟು ದೂರ ಹೋಗಲು ಹೇಗೆ ಸಾಧ್ಯ ಎಂದು ತನಿಖೆ ನಡೆಸಿದಾಗ ಇದೊಂದು ಪೂರ್ವಯೋಜಿತ ಕೊಲೆ ಎಂಬುದು ದೃಢಪಟ್ಟಿತು.
ಅಪಘಾತವಾದರೆ ಬೈಕ್ ಬೀಗ ಗಾಡಿಯಲ್ಲಿರಬೇಕಿತ್ತು. ಅಥವಾ ಕೆಳಗೆ ಬಿದ್ದಿರಬೇಕಿತ್ತು. ಆದರೆ ಬೈಕ್ ಕೀ ಪತ್ನಿಯ ಸೈಡ್ ಬ್ಯಾಗ್ನಲ್ಲಿತ್ತು. ಅನುಮಾನಗೊಂಡ ಪೊಲೀಸರು ಹುಲಿಗೆಮ್ಮನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ 5.20 ಕೋಟಿ ರೂ. ಮೌಲ್ಯದ ವಿಮೆ ಹಣ ಪಡೆಯಲು ಗ್ಯಾಂಗ್ ಮಾಡಿದ ಪೂರ್ವಯೋಜಿತ ತಂತ್ರ ಎಂಬುದು ತಿಳಿಯಿತು.
ಪೊಲೀಸರು ಘಟನೆ ನಡೆದ 24 ಗಂಟೆಯಲ್ಲೇ ಆರೋಪಿಗಳನ್ನು ಬಂಧಿಸಿದ್ದಾರೆ. ಜೊತೆಗೆ ಕೃತ್ಯಕ್ಕೆ ಬಳಸಿದ ಕಾರು, ಬೈಕ್ನ್ನು ವಶಕ್ಕೆ ಪಡೆದಿದ್ದಾರೆ.


